'ವಿಷ್ಣು ಸಹೋದರ ರವಿ ಹೇಳಿದ 'ಆ ಮಾತು' ನನ್ನ ಕಿವಿಯಲ್ಲಿ ರಿಂಗಣಿಸುತ್ತಿದೆ'
ಡಾ ವಿಷ್ಣುವರ್ಧನ್ ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಸ್ನೇಹಿತರು, ಆಪ್ತರು ಸೇರಿ ಅದ್ಧುರಿಯಾಗಿ ಆಚರಿಸುತ್ತಿದ್ದಾರೆ. ಬರ್ತಡೇಗೂ ಮುಂಚೆ ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ''ನಾ ಕಂಡಂತೆ ವಿಷ್ಣುವರ್ಧನ್'' ಎಂಬ ಅಭಿಯಾನ ಆರಂಭಿಸಿದ್ದರು.
ಈ ಅಭಿಯಾನದಲ್ಲಿ ಹಲವ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಸಹ ಈ ಕ್ಯಾಂಪೇನ್ನಲ್ಲಿ ಪಾಲ್ಗೊಂಡು ವಿಷ್ಣುವರ್ಧನ್ ಅವರ ಕುರಿತು ಒಂದು ಘಟನೆಯನ್ನು ನಮ್ಮ ಮುಂದಿಟ್ಟಿದ್ದಾರೆ.
''ವಿಷ್ಣು ಸರ್ ಹಾಗೂ ಅವರೊಂದಿಗಿನ ಒಡನಾಟದ ಕುರಿತು ನಾಲ್ಕು ಮಾತು ಬರೆದು ಪೋಸ್ಟ್ ಮಾಡುವ ಚಾಲೆಂಜ್ನಲ್ಲಿ ಅನೇಕರು ವಿಶಿಷ್ಟ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಬರೆಯಲು ಸಾಕಷ್ಟಿದೆ. ಅವರ ಬಗ್ಗೆ ನಾವೆಲ್ಲ ಏನು ಬಲ್ಲೆವು ಎಂಬುದನ್ನು ಬರೆಯಲು ಸಂಪುಟಗಳು ಸಾಲವು. ಆದರೆ ಸ್ವತಃ ಅವರ ಅಣ್ಣ ರವಿಯವರು ನನಗೆ ಹೇಳಿದ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ರಿಂಗಣಿಸುತ್ತವೆ'' ಎಂದು ಆ ಘಟನೆಗ ಬಗ್ಗೆ ಹೇಳಿದ್ದಾರೆ... ಏನದು? ಮುಂದೆ ಓದಿ...

ರಾಮನಗರದಲ್ಲೊಂದು ಕಾರ್ಯಕ್ರಮ
'ವಿಷ್ಣುವರ್ಧನ್ ಅವರು ನಮ್ಮೊಂದಿಗೆ ಇಲ್ಲವಾದ ತಿಂಗಳ ನಂತರ ರಾಮನಗರದ ಅಭಿಮಾನಿಗಳು ನಡೆಸಿದ ಶ್ರದ್ಧಾಂಜಲಿ ಸಭೆಗೆ ಹೋಗಿದ್ದೆ. ಮತ್ತೊಬ್ಬ ಅತಿಥಿ ಶ್ರೀ ರವಿಯವರು. ಕಾರ್ಯಕ್ರಮ ಮುಗಿಸಿ ಹೊರಡುವಾಗ ರವಿಯವರು ಕಾರ್ ಹತ್ತುತ್ತಿದ್ದರು. ನಂಬರ್ ಪ್ಲೇಟ್ ಗಮನಿಸಿದೆ. ಅದು ರಾಮನಗರದ್ದೇ ಆದ ಆಯೋಜಕರ ಕಾರ್. ರವಿಯವರನ್ನು ಅವರ ಬೆಂಗಳೂರಿನ ಮನೆಗೆ ಬಿಟ್ಟು ಮತ್ತೆ ರಾಮನಗರಕ್ಕೆ ಆಯೋಜಕರು ವಾಪಸಾಗುತ್ತಾರೆ. ಥಟ್ಟನೆ ರವಿಯವರನ್ನು ನಾನು ಡ್ರಾಪ್ ಮಾಡುತ್ತೇನೆ ಎಂದು ವಿನಂತಿಸಿದೆ. ರವಿಯವರೂ ಸಹಾ ಸಮ್ಮತಿಸಿದರು.

ಬಹಳ ವಿಷಯ ಚರ್ಚೆ ಮಾಡಿದೆವು
''ಇಬ್ಬರೂ ಅಲ್ಲಿಂದ ಹೊರಟೆವು. ದಾರಿಯುದ್ದಕ್ಕೂ ವಿಷ್ಣು ಅವರ ಬಾಲ್ಯ, ಕಾಲೇಜು ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಬಂದೆ. ಅವರೂ ಸಮಾಧಾನವಾಗಿ ಉತ್ತರಿಸಿದರು. ಅವರ ಮನೆಯ ಮುಂದೆ ಕಾರ್ ನಿಂತಿತು.''

ನಾನು ಕೊನೆಯದಾಗಿ ಕೇಳಿದ ಪ್ರಶ್ನೆ
''ನಾನು ಕೊನೆಯದಾಗಿ ಕೇಳಿದ ಪ್ರಶ್ನೆ. ಸಾರ್..ವಿಷ್ಣು ಸರ್ ಬಗ್ಗೆ ಈಗ ಏನು ಅನಿಸುತ್ತೆ? ಕಾರ್ ಇಳಿಯುತ್ತಾ ಗದ್ಗದಿತರಾಗಿ ನನ್ನ ಕೈ ಹಿಡಿದು "ನನ್ನ ತಮ್ಮ ಇಷ್ಟು ದೊಡ್ಡ ಹೀರೋ ಅಂತ ನನಗೆ ಗೊತ್ತೇ ಇರಲಿಲ್ಲ ಪ್ರಸಾದ್ ಅವರೇ, ಇಷ್ಟೊಂದು ಜನ ಅವನನ್ನ ದೇವರ ಹಾಗೆ ಆರಾಧನೆ ಮಾಡ್ತಾರೆ ಅಂತ ಅವನು ಹೋದ ಮೇಲೇನೇ ಗೊತ್ತಾಗಿದ್ದು. ಅವನು ಇನ್ನೂ ಇರಬೇಕಿತ್ತು." ಎಂದರು.
Recommended Video

ಅವರು ಇನ್ನೂ ಇರಬೇಕಿತ್ತು
''ಅವರು ಇನ್ನೂ ಇರಬೇಕಿತ್ತು. ಇದ್ದಾರೆ ಎಂಬ ಭ್ರಮೆಯ ಸುಖವೂ ಆತ್ಮಾನಂದ. ಲವ್ ಯು ವಿಷ್ಣು ದಾದಾ.'' ಎಂದು ವಿ ನಾಗೇಂದ್ರ ಪ್ರಸಾದ್ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಸ್ಮರಿಸಿಕೊಂಡಿದ್ದಾರೆ.


Click it and Unblock the Notifications











