ಸೆಪ್ಟೆಂಬರ್ 9ರಿಂದ ವಿಷ್ಣುವರ್ಧನ್ ಕ್ರಿಕೆಟ್ ಕಪ್ ಆರಂಭ

ಈಗ ಅವರ ಸ್ನೇಹಲೋಕ ತಂಡದಲ್ಲಿ ಹತ್ತು ಮಂದಿ ಸದಸ್ಯರಿದ್ದಾರೆ. ಇವರೆಲ್ಲಾ ವಿಷ್ಣು ಜೊತೆ ಹತ್ತು ವರ್ಷಗಳ ಕಾಲ ಕ್ರಿಕೆಟ್ ಆಡಿದವರೆ. ವಿಷ್ಣು ಅವರ ಕ್ರೀಡೋತ್ಸಾಹ, ಪ್ರೀತಿ ಪ್ರೇಮ ಅನುರಾಗ, ಅನುಕಂಪ, ಪ್ರೋತ್ಸಾಹವನ್ನು ಹತ್ತಿರದಿಂದ ನೋಡಿದವರು.
ಈಗ ವಿಷ್ಣು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಪ್ರೀತಿ ಸ್ನೇಹ ಇಂದಿಗೂ ಇದೆ. ಅವರ ಸವಿನೆನಪುಗಳು ಹಾಗೆಯೇ ಇರಲಿ ಎಂಬ ಉದ್ದೇಶದಿಂದ ಸ್ನೇಹಲೋಕ ತಂಡ ಕಳೆದ ವರ್ಷದಿಂದ 'ವಿಷ್ಣುವರ್ಧನ್ ಕಪ್' ಪಂದ್ಯಾವಳಿಯನ್ನು ಆಯೋಜಿಸಿತ್ತು.
ಈ ಬಾರಿಯೂ ವಿಷ್ಣು ಅವರ 62ನೇ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 9ರಿಂದ 'ವಿಷ್ಣುವರ್ಧನ್ ಕಪ್' ನಡೆಯಲಿದೆ. ಕಳೆದ ಬಾರಿಯ ಕಪ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಂಡದ ಪಾಲಾಗಿತ್ತು.
ಸೆ.9ರಂದು ಜಯನಗರ ನ್ಯಾಷನಲ್ ಕಾಲೇಜಿನಲ್ಲಿ 'ವಿಷ್ಣುವರ್ಧನ್ ಕಪ್' ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಬೆಳಗ್ಗೆ 9.30ಕ್ಕೆ ಚಾಲನೆ ಪಡೆದುಕೊಳ್ಳಲಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ.
ಕಳೆದ ವರ್ಷ ನಡೆದ ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಿದ್ದವು. ಈ ಬಾರಿ 24 ತಂಡಗಳ ನಡುವೆ ಸೆಣೆಸಾಟ ನಡೆಯಲಿದೆ. ಶಿವರಾಜ್ ಕುಮಾರ್ ತಂಡ, ದುನಿಯಾ ವಿಜಯ್ ತಂಡ, ನೃತ್ಯ ಕಲಾವಿದರ ಸಂಘ, ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ ಹಾಗೂ ಮೂರು ಕನ್ನಡ ಸಂಘ, ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಪಾಲ್ಗೊಳ್ಳಲಿವೆ.
ಪ್ರತಿ ತಿಂಗಳ ಭಾನುವಾರದಂದು ಮಾತ್ರ ಎರಡು ಪಂದ್ಯಗಳು ನಡೆಯಲಿದ್ದು ಡಿಸೆಂಬರ್ 23ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯ 16 ಓವರ್ ಗಳಿಗೆ ಸೀಮಿತವಾಗಿರುತ್ತದೆ. ಅಂತಿಮ ಪಂದ್ಯದಲ್ಲಿ ಸೆಣೆಸಾಡಿದ ತಂಡಗಳಿಗೆ ಡಿಸೆಂಬರ್ 29ರಂದು ಬಹುಮಾನ ನೀಡಿ ಸನ್ಮಾನಿಸಲಾಗುತ್ತದೆ.
ಕಾರಣ ಅಂದು ವಿಷ್ಣುವರ್ಧನ್ ಅವರ ಚಿತ್ರ 'ನಾಗರಹಾವು' ಚಿತ್ರ ಬಿಡುಗಡೆಯಾಗಿ 40 ವರ್ಷಗಳಾಗುತ್ತಿದೆ. ಆ ಸವಿನೆನಪಿಗಾಗಿ ವಿಷ್ಣುವರ್ಧನ್ ಕಪ್ ಗೆದ್ದ ತಂಡವನ್ನು ಚೌಡಯ್ಯ ಸ್ಮಾರಕಭವನದ ಅದ್ದೂರಿ ಸಮಾರಂಭದಲ್ಲಿ ಸನ್ಮಾನಿಸಿ ಬಹುಮಾನ ವಿತರಿಸಲಾಗುತ್ತದೆ ಎಂದು ಸ್ನೇಹಲೋಕದ ಕಾರ್ಯದರ್ಶಿ ಹಾಗೂ ಪಂದ್ಯಾವಳಿಯ ರೂವಾರಿ ಶೋಭಾರಾಜ್ ವಿವರ ನೀಡಿದ್ದಾರೆ. (ಒನ್ ಇಂಡಿಯಾ ಸಿನಿ ಡೆಸ್ಕ್)


Click it and Unblock the Notifications











