ಮೈಸೂರಿನಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಪುಣ್ಯ ಸ್ಮರಣೆ
ಮೈಸೂರು, ಡಿಸೆಂಬರ್ 30 : ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 8 ನೇ ಪುಣ್ಯ ಸ್ಮರಣೆ ಅಂಗವಾಗಿ ಕರುಣಾಮಯಿ ವಿಷ್ಣುವರ್ಧನ್ ಸಂಘದ ವತಿಯಿಂದ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬಡವರು ಹಾಗೂ ನಿರ್ಗತಿಕರಿಗೆ ಬಿಜೆಪಿ ಮುಖಂಡ ರಾಜೀವ್, ಸ್ವೆಟರ್ ಹಾಗೂ ಸೀರೆಯನ್ನು ವಿತರಿಸಿದರು.
''ಇಚ್ಛಾಶಕ್ತಿಯಿಂದ ಸರ್ಕಾರ ಹಾಗೂ ನಗರಪಾಲಿಕೆ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಬೇಕು. ವಿಷ್ಣುವರ್ಧನ್ ಮೂಲತಃ ಮೈಸೂರಿನವರು. ಕನ್ನಡ ನೆಲ, ಜಲ ಭಾಷೆ, ನುಡಿ ವಿಚಾರ ಬಂದಾಗ ಧ್ವನಿ ಎತ್ತುತ್ತಿದ್ದ ಮಹಾನ್ ವ್ಯಕ್ತಿ. ಇಂತಹವರ ಸ್ಮಾರಕ ನಿರ್ಮಾಣ ನೆನೆಗುದಿಗೆ ಬಿದ್ದಿದ್ದು, ಈ ಕೂಡಲೇ ಜಿಲ್ಲಾಡಳಿತ ಕಾಮಗಾರಿ ಪ್ರಾರಂಭಿಸುವಲ್ಲಿ ಮುಂದಾಗಬೇಕು. ಇಲ್ಲವಾದಲ್ಲಿ ಮೈಸೂರಿಗರು, ವಿಷ್ಣು ಅಭಿಮಾನಿಗಳೇ ಸ್ವತಃ ವಿಷ್ಣು ಪ್ರತಿಮೆ ಮತ್ತು ವಿಷ್ಣು ಸ್ಮಾರಕ ಸ್ಥಾಪಿಸುವಲ್ಲಿ ಮುಂದಾಗುತ್ತೇವೆ'' ಎಂದು ಇದೇ ಸಮಯದಲ್ಲಿ ರಾಜೀವ್ ನುಡಿದರು.

ವಿಷ್ಣು ಸ್ಮಾರಕಕ್ಕೆ ಸಹಿ ಸಂಗ್ರಹ ಅಭಿಯಾನ :
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಗಲಿ 8 ವರ್ಷ ಕಳೆದರೂ ಕೂಡ ಅವರ ನೆನಪಿಗಾಗಿ 'ವಿಷ್ಣು ಪ್ರತಿಮೆ' ಸ್ಥಾಪಿಸದಿರುವುದನ್ನು ಖಂಡಿಸಿ ನಗರದ ಪರಿವರ್ತನಂ ಟ್ರಸ್ಟ್ ವತಿಯಿಂದ ವಿಷ್ಣು ಅಭಿಮಾನಿಗಳ ಸಹಕಾರದೊಂದಿಗೆ ಚಾಮುಂಡಿಪುರಂ ವೃತ್ತದಲ್ಲಿ ವಿಷ್ಣುವರ್ಧನ್ ಪ್ರತಿಮೆ ಪ್ರದರ್ಶನಕಿಟ್ಟು ಸಾರ್ವಜನಿಕರ ಸಹಿ ಸಂಗ್ರಹ ಮಾಡುವ ಮೂಲಕ ಸರ್ಕಾರಕ್ಕೆ ಜಾಗೃತಿ ಮೂಡಿಸಲಾಯಿತು.
ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ ಮಾತನಾಡಿ, ಮೈಸೂರಿನ ಚಾಮುಂಡಿಪುರಂ ಅಂದರೆ ವಿಷ್ಣುವರ್ಧನ್ ಮತ್ತು ಅಂಬರೀಶ್ ರವರಿಬ್ಬರಿಗೂ ನೆಚ್ಚಿನ ಸ್ಥಳ, ಇಲ್ಲಿಯ ಎಲ್ಲಾ ಹಿರಿಯ ನಾಗರಿಕರಿಗೂ ವಿಷ್ಣುವರ್ಧನ್ ಚಿರಪರಿಚಿತ, ದೊಡ್ಡನಟನಾಗಿ ದೇಶವಿದೇಶ ಸುತ್ತಿದರೂ ಮೈಸೂರು ಎಂದರೆ ನೆಚ್ಚಿನ ಸ್ಥಳ, ಬಹುತೇಕ ಚಿತ್ರಗಳ ಚಿತ್ರೀಕರಣ ಮೈಸೂರಿನಲ್ಲಾಗಿದೆ, ಪ್ರವಾಸೋದ್ಯಮಕ್ಕೆ ಸಹಕಾರಿಯಾಗಿದೆ, ಕನ್ನಡ ನೆಲ ಜಲ ಭಾಷೆಯ ವಿಚಾರವಾಗಿ ಅನ್ಯಾಯವಾದಾಗ ಅಭಿಮಾನಿಗಳು ಕನ್ನಡಪರ ಸಂಘನೆಗಳೊಂದಿಗೆ ರಸ್ತೆಗಿಳಿದು ಹೋರಾಡುತ್ತಿದ್ದರು. ಆದರೆ ಸರ್ಕಾರಗಳು ಎಷ್ಟೇ ಮನವಿ ಸಲ್ಲಿಸಿದರೂ ಕೂಡ ವಿಷ್ಣು ಸ್ಮಾರಕ ಮತ್ತು ವಿಷ್ಣು ಪ್ರತಿಮೆ ಸ್ಥಾಪಿಸದೇ ನಿರ್ಲಕ್ಷಿಸುತ್ತಿದೆ.
ಈ ಮೈಸೂರಿಗರಿಗೆ ಅಸಮಾಧಾನವಾಗಿದೆ. ಅದಕ್ಕಾಗಿಯೇ ಪರಿವರ್ತನಂ ಟ್ರಸ್ಟ್ ವತಿಯಿಂದ ವಿಷ್ಣು ಅಭಿಮಾನಿಗಳ ಸಹಕಾರದೊಂದಿಗೆ ಚಾಮುಂಡಿಪುರಂ ವೃತ್ತದಲ್ಲಿ ವಿಷ್ಣುವರ್ಧನ್ ರವರ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದೇವೆ ಎಂದರು.
ವಿಷ್ಣು ಪ್ರತಿಮೆಯನ್ನು ಸರ್ಕಾರ ಅರಮನೆಯ ಮುಂಭಾಗದ ವಿಷ್ಣು ಉದ್ಯಾನವನದಲ್ಲಿ ಸ್ಥಾಪಿಸಬೇಕು ಮತ್ತು ನೆನೆಗುದಿಗೆ ಬಿದ್ದಿರುವ ವಿಷ್ಣು ಸ್ಮಾರಕ ಯೋಜನೆಯನ್ನು ನಿರ್ಮಿಸುವ ವಿಚಾರವಾಗಿ ಸರ್ಕಾರಕ್ಕೆ ಮತ್ತು ನಗರಪಾಲಿಕೆಗೆ ಸಹಿ ಸಂಗ್ರಹ ಆಂದೋಲನದ ಮೂಲಕ ಆಗ್ರಹಿಸಿದರು.


Click it and Unblock the Notifications











