ರಾಜ್ಯದಲ್ಲಿ ಡ್ರಗ್ಸ್ ಜಾಲ: ತಪ್ಪು ಯಾರದ್ದು? ಯಾರು ಹೊಣೆ?
ಕನ್ನಡ ಸಿನಿಮಾರಂಗದ ಕೆಲವರಿಗೆ ಮಾದಕ ವಸ್ತು ವ್ಯಸನವಿದೆ, ಮಾದಕ ವಸ್ತು ಮಾಫಿಯಾದ ಕೆಲವರೊಂದಿಗೆ ಸಂಪರ್ಕವಿದೆ ಎಂಬುದು 'ದೊಡ್ಡ' ಸುದ್ದಿಯಾಗಿ ಭಿತ್ತರವಾಗುತ್ತಿದೆ. ಚಿತ್ರರಂಗವನ್ನು ಮಾದಕ ವ್ಯಸನಗಳ ಅಡ್ಡಾ ಎಂಬಂತೆಯೂ ಬಿಂಬಿಸಲಾಗುತ್ತಿದೆ.
Recommended Video
ಈ ಡ್ರಗ್ಸ್ ಪ್ರಕರಣ ಪತ್ತೆಯಾಗಿರುವುದು ಹಣವಂತ ಉದ್ಯಮ, ಐಶಾರಾಮಿ ಉದ್ಯಮ, ಥಳುಕು-ಬಳುಕಿನ ಉದ್ಯಮ ಎನಿಸಿಕೊಳ್ಳುವ ಚಿತ್ರರಂಗದಲ್ಲಿ ಎಂಬುದೇ ಈ 'ಸುದ್ದಿ ಶೂರತೆ' ಗೆ ಕಾರಣ. ಅದರಲ್ಲಿಯೂ ಪ್ರಕರಣದಲ್ಲಿ ಹೆಸರು ಕೇಳಿಬರುತ್ತಿರುವುದು ಮಹಿಳೆಯರದ್ದು ಮಾತ್ರವಲ್ಲವೇ ಹಾಗಾಗಿ 'ಪೌರುಷ' ತುಸು ಹೆಚ್ಚೇ ಆಗಿದೆ. ರಾಜಕಾರಣ, ಕಾರ್ಪೊರೇಟ್ ಜಗತ್ತುಗಳಲ್ಲಿಯೂ ಡ್ರಗ್ಸ್ ಅವ್ಯಾಹತ ಎಂಬುದು ತಿಳಿಯದ ಸತ್ಯವೇ?
ಈ ಹಿಂದೆಯೇ ಹಲವಾರು ಮಂದಿ ರಾಜ್ಯದಲ್ಲಿ ಅದರಲ್ಲಿಯೂ ವಿಶೇಷವಾಗಿ ಬೆಂಗಳೂರಿನಲ್ಲಿ ಸಿಂಥೆಟಿಕ್ ಡ್ರಗ್ಸ್ ಬಳಕೆ ಬಗ್ಗೆ ಮಾತನಾಡಿದ್ದರು. ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದರು. ಆದರೆ ಅವರದ್ದು ಗೋಡೆಗೆ ಹೇಳಿದ ಮಾತಾಯಿತಷ್ಟೆ. ಮಾದಕ ವ್ಯಸನ ಯುವಕರ ಜೀವನ ಹಾಳುಮಾಡುತ್ತಿರುವುದರ ಬಗ್ಗೆ ಸರ್ಕಾರದ ಬಳಿ ಕಳವಳ ವ್ಯಕ್ತಪಡಿಸಿದವರಲ್ಲಿ ಮಾಝಿ ವಿಧಾನಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಸಹ ಒಬ್ಬರು. ಅವರು 'ಒನ್ಇಂಡಿಯಾ ಫಿಲ್ಮೀಬೀಟ್' ಜೊತೆಗೆ ಮಾದಕ ವಸ್ತು ಮತ್ತು ವ್ಯವಸ್ಥೆಯ ಲೋಪದ ಕುರಿತು ಮಾತನಾಡಿದ್ದಾರೆ.

ಮಾದಕ ವಸ್ತು ಎಲ್ಲಿಲ್ಲ ಹೇಳಿ? ಎಂ.ಸಿ.ನಾಣಯ್ಯ ಪ್ರಶ್ನೆ
'ಮಾದಕ ವಸ್ತು ಎಲ್ಲಿಲ್ಲ ಹೇಳಿ?' ನಿಮಗೆ ಗೊತ್ತಿಲ್ಲವೆ, ನಮಗೆ ಗೊತ್ತಿಲ್ಲವೇ? ಸರ್ಕಾರಕ್ಕೆ ಗೊತ್ತಿಲ್ಲವೇ? ಅಧಿಕಾರಿಗಳಿಗೆ ಗೊತ್ತಿಲ್ಲವೇ? ಪೊಲೀಸರಿಗೆ ಗೊತ್ತಿಲ್ಲವೇ? ಶಾಲಾ ಕಾಲೇಜುಗಳ ಬಳಿ, ಬಾರುಗಳ ಬಳಿಯ ಗೂಡಂಗಡಿಗಳನ್ನು ಸರಿಯಾಗಿ ಹುಡುಕಿಬಿಟ್ಟರೆ ಮಾದಕ ವಸ್ತುವಿನ ಖಜಾನೆಯ ದೊರಕಿಬಿಡುತ್ತದೆಯೇನೋ?' ಎಂದು ಮಾದಕ ವಸ್ತು ಎಷ್ಟು ಅವ್ಯಾಹತವಾಗಿದೆ ಎಂಬುದನ್ನು ವಿವರಿಸಿದರು ನಾಣಯ್ಯ.

ತಪ್ಪು ಒಬ್ಬಿರದ್ದಲ್ಲ, ಪೂರ್ಣ ವ್ಯವಸ್ಥೆಯದ್ದು: ಎಂ.ಸಿ.ನಾಣಯ್ಯ
'ಕೊಳ್ಳುವವರದ್ದು, ಮಾರುವವರದ್ದು ಎಂದು ತಪ್ಪುಗಳನ್ನು ವಿಂಗಡಿಸುವಂತೆಯೇ ಇಲ್ಲ. ಇಲ್ಲಿ ತಪ್ಪಿರುವುದು ಪೂರ್ಣ ವ್ಯವಸ್ಥೆಯದ್ದು. ಅದರಲ್ಲಿಯೂ ಶಾಸಕಾಂಗ, ಕಾರ್ಯಾಂಗ ಸೂಕ್ತವಾಗಿ ಕೆಲಸ ಮಾಡಿದರೆ ಡ್ರಗ್ಸ್ ನಿರ್ಮೂಲನೆ ಈಗಲೂ ಸವಾಲೇನಲ್ಲ. ಆದರೆ ಅದು ರಾಜಕಾರಣದ ಕೆಲವು ಕುಳಗಳಿಗೆ ಬೇಕಾಗಿಲ್ಲ. ಡ್ರಗ್ಸ್ ಹತ್ತಿಕ್ಕುವಲ್ಲಿ, ರಾಜಕಾರಣಿಗಳಲ್ಲಿಯೇ ಒಗ್ಗಟ್ಟಿಲ್ಲ, ಅದು ಅವರಿಗೆ ಬೇಕಾಗಿಲ್ಲ ಸಹ' ಎಂದು ಎಲ್ಲ ಪಕ್ಷಗಳನ್ನೂ ಹೊಣೆಗಾರರನ್ನಾಗಿಸಿದರು ನಾಣಯ್ಯ.

ಈಗಿರುವ ಕಾಯ್ದೆ ಸಶಕ್ತವಾಗಿಯೇ ಇದೆ: ಎಂ.ಸಿ.ನಾಣಯ್ಯ
ನಮ್ಮಲ್ಲಿ ಈಗಿರುವ 'ಮಾದಕ ವಸ್ತು ನಿಷೇಧ ಕಾಯ್ದೆ' ಅತ್ಯಂತ ಗಟ್ಟಿಯಾದುದ್ದಾಗಿದೆ. ಸಶಕ್ತವಾಗಿದೆ. ಕಾಯ್ದೆಯನ್ನು ಸೂಕ್ತವಾಗಿ ಅನುಸರಿಸಿದರೆ, ಹೇರಿದರೆ ಸಾಕು ರಾಜ್ಯ ಸ್ವರ್ಗವೇ ಆಗಿಬಿಡುತ್ತದೇನೋ, ಹೊಸ ಕಾಯ್ದೆಗಳನ್ನು ತರುವ ಅವಶ್ಯಕತೆಯೂ ಇಲ್ಲ. ಈಗಾಗಲೇ ನಮ್ಮಲ್ಲಿ ಮಾದಕ ವಸ್ತು ನಿಯಂತ್ರಣ ಘಟಕವೂ ಇದೆ. ಅದು ಸೂಕ್ತವಾಗಿ ಕಾರ್ಯನಿರ್ವಹಿಸಿಬಿಟ್ಟರೆ ಸಾಕಲ್ಲವೇ?' ಎಂದರು ನಾಣಯ್ಯ.

ಮಾದಕ ವಸ್ತು ಜಾಲಕ್ಕೆ ವ್ಯವಸ್ಥೆಯ ಕುಮ್ಮಕ್ಕು: ಎಂ.ಸಿ.ನಾಣಯ್ಯ
ದೇಶದ ಜನಸಂಖ್ಯೆಯ 60% ರಷ್ಟಿರುವ ಯುವಕರನ್ನು ಶಕ್ತಿಹೀನರನ್ನಾಗಿ, ಅವರ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳುತ್ತಿದೆ ಈ ಮಾದಕ ವ್ಯಸನ. ಯುವಕರನ್ನು ಸುಖವಾಗಿ ಕೊಲ್ಲುತ್ತಿರುವ ಈ ಮಾದಕ ವಸ್ತುವಿಗೆ ವ್ಯವಸ್ಥೆಯ ಪರೋಕ್ಷ ಬೆಂಬಲ ಇದೆ. ವ್ಯವಸ್ಥೆಯ ಕುಮ್ಮಕ್ಕು ಇಲ್ಲದೆ ಇದು ಇಷ್ಟು ದೊಡ್ಡ ಜಾಲವಾಗಿ ಬೆಳೆಯಲು ಸಾಧ್ಯವಿತ್ತೆ? ಎಂದು ಮೌಲ್ಯಿಕ ಪ್ರಶ್ನೆ ಕೇಳಿದರು ಎಂ.ಸಿ.ನಾಣಯ್ಯ.


Click it and Unblock the Notifications











