ಚಿತ್ರರಂಗ ಎಂದರೆ ಗುರುಕುಲ ಇದ್ದಂತೆ, ಇದು 'ಗಾಂಜಾನಗರ'ವಲ್ಲ: ಹಿರಿಯ ನಟ ದೊಡ್ಡಣ್ಣ
ಸ್ಯಾಂಡಲ್ ವುಡ್ ಗೆ ಡ್ರಗ್ ಮಾಫಿಯಾದ ನಂಟಿದೆ ಎನ್ನುವ ವಿಚಾರ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಸಂಬಂಧ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟ ದೊಡ್ಡಣ್ಣ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ
Recommended Video
ಸ್ಯಾಂಡಲ್ ವುಡ್ ನಲ್ಲಿ ಕೆಲವರು ನಶೆಯ ಗುಂಗಿನಲ್ಲಿ ತೇಲುತ್ತಿದ್ದಾರೆ ಎನ್ನುವ ಆರೋಪದ ಬಗ್ಗೆ ಮಾತನಾಡಿದ ದೊಡ್ಡಣ್ಣ "ಖಂಡಿತವಾಗಿಯೂ ಚಿತ್ರರಂಗದಲ್ಲಿ ಯಾರು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ. ನಾನು ಚಿತ್ರರಂಗಕ್ಕೆ ಬಂದಾಗಿನಿಂದ ನನಗೆ ಕಾಣಿಸಿಲ್ಲ. ನಮ್ಮ ತಲೆಮೇಲೆ ಜವಾಬ್ದಾರಿ ಜಾಸ್ತಿ ಇತ್ತು. ಸರ್ಕಾರಿ ನೌಕರಿ ಬಿಟ್ಟು ಬಂದವನು ನಾನು. 2 ಹೊತ್ತಿನ ಊಟಕ್ಕೆ ಪರದಾಡುತ್ತಿದ್ದೆವು, ಊಟ ಸಿಕ್ಕಿದ್ರೆ ಸಾಕಾಗಿತ್ತು. ಇದೆಲ್ಲ ಗೊತ್ತಿಲ್ಲ" ಎಂದಿದ್ದಾರೆ.
ದೇವರಾಣೆ ಈ ಬಗ್ಗೆ ನನಗೆ ಗೊತ್ತಿಲ್ಲ ಎನ್ನುವ ದೊಡ್ಡಣ್ಣ, 'ಚಿತ್ರರಂಗವನ್ನು ಗುರುಕುಲ ಎಂದು ತಪಸ್ಸು ಮಾಡಿದವರು ನಾವು. ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ವಿ, ಇದಕ್ಕೆಲ್ಲ ಸಮಯವಿರಲಿಲ್ಲ ಅಂತ' ಹೇಳಿದ್ದಾರೆ.

ಇನ್ನೂ ಎರಡು ವಿಚಾರವಾಗಿ ತುಂಬಾ ನೋವಾಗಿದೆ ಅಂತ ಬೇಸರ ವ್ಯಕ್ತಪಡಿಸಿದ ದೊಡ್ಡಣ್ಣ, 'ಸತ್ತವರ ವಿಚಾರ ತೆಗೆದಿದ್ದು, ನನಗೂ ಹೆಣ್ಣುಮಕ್ಕಳಿದ್ದಾರೆ. ಆ ಮಗು ಎಷ್ಟು ಅಂತ ಸಹಿಸಿಕೊಳ್ಳುತ್ತೆ' ಎಂದು ನೋವಿನಿಂದ ಹೇಳಿದರು.
"ಗಾಂಧಿನಗರವನ್ನು ಗಾಂಜಾನಗರ ಎಂದು ಹೇಳಿರುವುದು ತುಂಬಾ ನೋವಾಗಿದೆ. ಗಾಂಧಿನಗರ ಖಂಡಿತಾ ಗಾಂಜಾ ನಗರ ಆಗಿಲ್ಲ. ಕೊರೊನಾ ಪರಿಸ್ಥಿತಿಯಲ್ಲಿ ಕೆಲಸವಿಲ್ಲದೆ ಕೈ ಕಟ್ಟಿಕುಳಿತಿದ್ದಾರೆ. ಕೆಲಸಗೋಸ್ಕರ ಹಾತೊರೆಯುತ್ತಿದ್ದಾರೆ. ಚಿತ್ರೀಕರಣ ಪ್ರಾರಂಭಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಇಡೀ ಚಿತ್ರರಂಗ ಅಂತ ಹೇಳಿರುವುದು ತುಂಬಾ ದುಃಖವಾಗುತ್ತಿದೆ" ಎಂದಿದ್ದಾರೆ.


Click it and Unblock the Notifications











