ಕನ್ನಡ ಚಲನಚಿತ್ರೋದ್ಯಮದಲ್ಲಿ ಭುಗಿಲೆದ್ದ ಭಿನ್ನಮತ
ಕನ್ನಡ ಚಿತ್ರೋದ್ಯಮದಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಭಿನ್ನಮತ ಇದೀಗ ಭುಗಿಲೆದ್ದಿದೆ. ಡಬ್ಬಿಂಗ್ ಪರವಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಸಲ್ಲಿಸಿರುವ ವರದಿಯನ್ನು ವಿರೋಧಿಸಿ ಕಲಾವಿದರ ಸಂಘ ಜನವರಿ 27ಕ್ಕೆ ಬಂದ್ ಗೆ ಕರೆನೀಡಿದೆ. ಆದರೆ ಈ ಬಂದ್ ನಲ್ಲಿ ಚಲನಚಿತ್ರ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಭಾಗವಹಿಸುತ್ತಿಲ್ಲ.
ಈ ಮೂಲಕ ಚಿತ್ರರಂಗದಲ್ಲಿ ಒಮ್ಮತವಿಲ್ಲ ಎಂಬುದು ಬಹಿರಂಗವಾಗಿದೆ. ಬುಧವಾರ (ಜ.22) ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹೆಚ್.ಡಿ.ಗಂಗರಾಜು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಂದ್ ನಲ್ಲಿ ಭಾಗವಹಿಸಬಾರದು ಎಂಬ ಸೂಚನೆ ನೀಡಲಾಗಿದೆ. [ಶಿವಣ್ಣನ ಮಾತಿಗೆ ಚಿತ್ರರಂಗದಲ್ಲಿ ಬೆಲೆ ಸಿಕ್ಕುತ್ತಾ?]

ಬೆಂಗಳೂರಿನ ಸಿಟಿ ಕ್ಲಬ್ ನಲ್ಲಿ ನಡೆದ ಸಭೆಯಲ್ಲಿ ನಿರ್ಮಾಪಕರು, ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ವಿತರಕರು ಹಾಗೂ ಪ್ರದರ್ಶಕರು ಭಾಗಿಯಾಗಿದ್ದರು. ಬಂದ್ ಗೆ ವಿರೋಧ ವ್ಯಕ್ತಪಡಿಸಿರುವ ಗಂಗರಾಜು ಅವರ ನಿರ್ಣಯಕ್ಕೆ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಸಾ.ರಾ.ಗೋವಿಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಬ್ಬಿಂಗ್ ವಿರೋಧಿಸಿ ಜ.27ರ (ಸೋಮವಾರ) ಬೆಳಗ್ಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. 'ಡಾ.ರಾಜ್ ಕುಮಾರ್ ವೇದಿಕೆ'ಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕನ್ನಡದ ಹಿರಿತೆರೆ ಮತ್ತು ಕಿರುತೆರೆ ಕಲಾವಿದರು, ಕಾರ್ಮಿಕರು, ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. (ಏಜೆನ್ಸೀಸ್)


Click it and Unblock the Notifications











