ದುನಿಯಾ ವಿಜಿ ದಾಂಪತ್ಯ ಕಲಹಕ್ಕೆ ಮಾಳವಿಕಾ ಪರಿಹಾರ
ನಟಿ, ನಿರೂಪಕಿ ಮಾಳವಿಕಾ ಅವಿನಾಶ್ ಅವರು ಅತ್ತ ಕಿರುತೆರೆ ಇತ್ತ ಬೆಳ್ಳಿಪರದೆಯಲ್ಲಿ ಹೆಸರು ಮಾಡಿದಂತಹ ಕಲಾವಿದೆ. ಅದರಲ್ಲೂ ಟಿವಿ ನೋಡುವ ಕರ್ನಾಟಕದ ಸಾಕಷ್ಟು ಹೆಣ್ಣುಮಕ್ಕಳು ಮಾಳವಿಕಾ ಅವಿನಾಶ್ ಅವರನ್ನು ಇಷ್ಟಪಡುತ್ತಾರೆ.
ಜೀ ಕನ್ನಡ ವಾಹಿನಿಯ 'ಬದುಕು ಜಟಕಾ ಬಂಡಿ' ಶೋನಲ್ಲಿ ಅವರು ಈಗಾಗಲೆ ಹಲವಾರು ಸಾಂಸಾರಿಕ ತಾಪತ್ರಯಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದಾರೆ. ಅದು ಕಿರುತೆರೆ ಮಾತಾಯಿತು. ಈಗವರು ಬೆಳ್ಳಿತೆರೆ ಮೇಲೂ ಸಾಂಸಾರಿಕ ಬಿಕ್ಕಟ್ಟನ್ನು ಪರಿಹರಿಸುವ ಕೆಲಸಕ್ಕೆ ಕೈಹಾಕಿದ್ದಾರೆ.

ನಟ ದುನಿಯಾ ವಿಜಯ್ ಹಾಗೂ ನಿಖಿತಾ ತುಕ್ರಲ್ ನಡುವಿನ ಸಾಂಸಾರಿಕ ಭಿನ್ನಾಭಿಪ್ರಾಯಗಳಿಗೆ ಮಾಳವಿಕಾ ಅವಿನಾಶ್ ಪರಿಹಾರ ಹುಡುಕಲಿದ್ದಾರೆ. ಅದು ಹೇಗೆ ಅಂತೀರಾ! ಅದು 'ರಿಂಗ್ ರೋಡ್ ಶುಭಾ' ಚಿತ್ರದಲ್ಲಿ. [ಕೌಟುಂಬಿಕ ಕೋರ್ಟ್ ನಲ್ಲಿ ಮಾಳವಿಕಾ]
ಈ ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ನಿಖಿತಾ ತುಕ್ರಲ್ ದಂಪತಿಗಳಾಗಿ ಕಾಣಿಸುತ್ತಿದ್ದಾರೆ. ಅವರಿಬ್ಬರ ನಡುವಿನ ಸಾಂಸಾರಿಕ ಬಿಕ್ಕಟ್ಟನ್ನು ಮಾಳವಿಕಾ ಪರಿಹರಿಸಲಿದ್ದಾರೆ. ಚಿತ್ರದ ಆರಂಭದಲ್ಲಿ ನಿಖಿತಾ ಕುಟುಂಬ ಸಮೇತ ಬಂದು ತಮ್ಮ ಸಂಸಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹರಿಸುವಂತೆ ಕೇಳುತ್ತಾರೆ.
ದುನಿಯಾ ವಿಜಯ್ ಮತ್ತು ನಿಖಿತಾ ನಡುವಿನ ದಾಂಪತ್ಯ ಕಲಹವನ್ನು ತಾನು ಪರಿಹರಿಸುವ ಪ್ರಯತ್ನವನ್ನು ಮಾಡುತ್ತೇನೆ ಎಂದಿದ್ದಾರೆ ಮಾಳವಿಕಾ. ಇನ್ನು 'ರಿಂಗ್ ರೋಡ್ ಶುಭಾ' ಚಿತ್ರಕ್ಕಾಗಿ ದುನಿಯಾ ವಿಜಯ್ ಅವರು ಕೇವಲ ಒಂದು ರೂಪಾಯಿ ಸಂಭಾವನೆ ಪಡೆದು ನಟಿಸುತ್ತಿದ್ದಾರೆ.
ಇದು ನೈಜ ಘಟನೆ ಆಧಾರಿತ ಚಿತ್ರ. ತನ್ನ ಪ್ರಿಯಕರನೊಂದಿಗೆ ಸೇರಿ ಮದುವೆಯಾಗಬೇಕಿದ್ದ ಹುಡುಗ ಗಿರೀಶ್ ನನ್ನು ಕೊಂದ ಸುಂದರ ಹಂತಕಿ ಈಕೆ. 'ಪ್ರೀತಿ ಕೊಂದ ಕೊಲೆಗಾತಿ' ಎಂಬುದು ಚಿತ್ರದ ಅಡಿಬರಹ. ಚಿತ್ರದಲ್ಲಿ ತನಿಖಾಧಿಕಾರಿಯಾಗಿ ವಿಜಿ ಕಾಣಿಸಲಿದ್ದಾರೆ. ಪ್ರಿಯಾ ಬೆಳ್ಳಿಯಪ್ಪ ನಿರ್ದೇಶಿಸುತ್ತಿರುವ ಚಿತ್ರವಿದು.


Click it and Unblock the Notifications











