ದ್ವಾರಕೀಶ್ ನಿರ್ಮಾಪಕರಾಗಲು ಅಣ್ಣಾವ್ರ ಜೊತೆ ಇನ್ನೊಬ್ಬ ವ್ಯಕ್ತಿ ಮುಖ್ಯ ಕಾರಣ
Recommended Video
'ಕನ್ನಡದ ಕುಳ್ಳ' ಎಂದೇ ಗುರುತಿಸಿಕೊಂಡಿರುವ ದ್ವಾರಕೀಶ್, ನಟನೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ದೊಡ್ಡ ಹೆಸರು ಮಾಡಿರುವ ಸಿನಿಮಾ ವ್ಯಕ್ತಿ. ಕನ್ನಡ ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ದಿಗ್ಗಜ ಕಲಾವಿದ.
50ಕ್ಕೂ ಹೆಚ್ಚು ಚಿತ್ರಗಳನ್ನ ನಿರ್ಮಿಸಿರುವ ದ್ವಾರಕೀಶ್, ಇಂಡಸ್ಟ್ರಿಯಲ್ಲಿ ಏಳು ಬೀಳು ಕಂಡಿರುವ ನಿರ್ಮಾಪಕ. ಸತತವಾಗಿ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದಾರೆ. ಸತತವಾಗಿ ಸೋಲಿನ ರುಚಿಯನ್ನು ಕಂಡಿದ್ದಾರೆ.
ಆದರೂ ಛಲ ಬಿಡದ ದ್ವಾರಕೀಶ್ ಎದ್ದು ನಿಂತು ಮತ್ತೆ ತಮ್ಮ 'ದ್ವಾರಕೀಶ್ ಚಿತ್ರ' ಸಂಸ್ಥೆಯನ್ನ ಯಶಸ್ಸಿನ ಹಾದಿಗೆ ಕರೆದುಕೊಂಡು ಬಂದು, ಮುಂದುವರಿಸುತ್ತಿದ್ದಾರೆ.

ಅಂದ್ಹಾಗೆ, ದ್ವಾರಕೀಶ್ ನಿರ್ಮಾಪಕರಾಗಲು ಡಾ ರಾಜ್ ಕುಮಾರ್ ಕಾರಣ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ರಾಜ್ ಜೊತೆಗೆ ಅವರ ತಮ್ಮ ವರದಪ್ಪ ಕೂಡ ಅಷ್ಟೇ ಮುಖ್ಯ ಕಾರಣ ಎಂದು ನೆನಪಿಸಿಕೊಂಡ ದ್ವಾರಕೀಶ್, ಜೀವನದಲ್ಲಿ ಅವರನ್ನ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
1966ರಲ್ಲಿ 'ಮಮತೆಯ ಬಂಧನ' ಎಂಬ ಚಿತ್ರವನ್ನ ಜಂಟಿಯಾಗಿ ನಿರ್ಮಿಸಿದ್ದ ದ್ವಾರಕೀಶ್, 1969ರಲ್ಲಿ 'ಮೇಯರ್ ಮುತ್ತಣ್ಣ' ಎಂಬ ಚಿತ್ರವನ್ನ ಸ್ವತಂತ್ರವಾಗಿ ನಿರ್ಮಿಸಿದರು. ಇಲ್ಲಿಂದ ಸುಮಾರು ಎರಡು ದಶಕಗಳ ಕಾಲ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ ಹೆಗ್ಗಳಿಕೆ ದ್ವಾರಕೀಶ್ ಅವರದ್ದು.
ಈ ಮಧ್ಯೆ ಸತತ ಸೋಲುಗಳನ್ನ ಕಂಡ ದ್ವಾರಕೀಶ್ ಅವರು ದೊಡ್ಡ ಮಟ್ಟದ ನಷ್ಟ ಅನುಭವಿಸಿದರು. ನಂತರ 2005ರಲ್ಲಿ 'ಆಪ್ತಮಿತ್ರ' ಸಿನಿಮಾ ಮಾಡುವ ಮೂಲಕ ಮರುಜೀವ ಪಡೆದುಕೊಂಡರು.
ದ್ವಾರಕೀಶ್ ಚಿತ್ರ ಸಂಸ್ಥೆ ಅಡಿಯಲ್ಲಿ 50ಕ್ಕೂ ಅಧಿಕ ಚಿತ್ರಗಳು ನಿರ್ಮಾಣವಾಗಿದ್ದು, ಸದ್ಯ ಶಿವರಾಜ್ ಕುಮಾರ್ ಜೊತೆ 'ಆಯುಷ್ಮಾನ್ ಭವ' ಎಂಬ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ಆರಂಭದಲ್ಲಿ ಬಿಡುಗಡೆಯಾಗುತ್ತಿದೆ.


Click it and Unblock the Notifications











