ಕಿಚ್ಚ ಸುದೀಪ್ ಮ್ಯಾನೇಜರ್ ಆಗಿ ದ್ವಾರಕೀಶ್ ಪುತ್ರ
ಅವರು ಮ್ಯಾನೇಜರ್ ಆಗುತ್ತಿರುವುದು ಯಾವುದೋ ಬ್ಯಾಂಕಿಗೋ, ಇನ್ಯಾವುದೋ ಸಂಸ್ಥೆಗೋ ಅಲ್ಲ. ಅಭಿನಯ ಚಕ್ರವರ್ತಿ ಬಿರುದಾಂಕಿತ ನಟ ಕಿಚ್ಚ ಸುದೀಪ್ ಅವರಿಗೆ ಪರ್ಸನಲ್ ಮ್ಯಾನೇಜರ್ ಆಗಿ ನೇಮಕವಾಗಿದ್ದಾರೆ.
ಇನ್ನು ಮುಂದೆ ಸುದೀಪ್ ಅವರ ಎಲ್ಲಾ ವ್ಯವಹಾರಗಳನ್ನು ಯೋಗೀಶ್ ಅವರೇ ನೋಡಿಕೊಳ್ಳಲಿದ್ದಾರೆ. ಅದು ಡೇಟ್ಸ್ ಹೊಂದಾಣಿಕೆ ಇರಬಹುದು, ಸಂಭಾವನೆ ವಿಚಾರ ಆಗಿರಬಹುದು, ಕಥೆಯನ್ನು ಓಕೆ ಮಾಡುವುದು ಹೀಗೆ ಸುದೀಪ್ ಅವರ ಮುಕ್ಕಾಲು ಭಾಗದ ಜವಾಬ್ದಾರಿಯನ್ನು ಹೊರಲಿದ್ದಾರೆ.
ಯೋಗೀಶ್ ನಿರ್ಮಾಣದ ಪ್ರಿಯಾಮಣಿ ಅಭಿನಯದ 'ಚಾರುಲತಾ' ಚಿತ್ರ ಅದ್ಯಾಕೋ ಏನೋ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಸಯಾಮಿಗಳ ಕಥೆಯನ್ನು ಒಳಗೊಂಡಿದ್ದ ಈ ಚಿತ್ರ ಸದ್ದಿಲ್ಲದಂತೆ ಮಕಾಡೆ ಮಲಗಿದ್ದೊಂದು ದುರಂತ.
ದ್ವಾರಕೀಶ್ ಅವರ 50 ವರ್ಷಗಳ ಸಿನಿ ಜೀವನದಲ್ಲಿ 'ಚಾರುಲತಾ' ಚಿತ್ರ ಭಾರಿ ನಿರಾಸೆ ಮೂಡಿಸಿತು. ಈ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಯೋಗೀಶ್ ಹೊತ್ತಿದ್ದರು. ಚಿತ್ರ ಯಾಕೋ ಏನೋ ಎಲ್ಲರ ನಿರೀಕ್ಷೆಯನ್ನೂ ಉಲ್ಟಾಪಲ್ಟಾ ಮಾಡಿತು.
ಯೋಗೀಶ್ ಅವರು ಸುದೀಪ್ ಮುಖ್ಯಭೂಮಿಕೆಯಲ್ಲಿದ್ದ 'ವಿಷ್ಣುವರ್ಧನ' ಚಿತ್ರವನ್ನು ನಿರ್ಮಿಸಿದ್ದರು. ಆ ಚಿತ್ರ ಬಾಕ್ಸಾಫೀಸಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ಯೋಗೀಶ್ ಅವರ ಕಾರ್ಯಕ್ಷಮತೆಯನ್ನು ಹತ್ತಿರದಿಂದ ಕಂಡಿದ್ದ ಸುದೀಪ್ ಈಗ ಅವರನ್ನು ಮ್ಯಾನೇಜರ್ ಆಗಿ ನೇಮಕ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)


Click it and Unblock the Notifications












