ಈ ಎರಡೂ ಚಿತ್ರಗಳನ್ನು ಮಿಸ್ ಮಾಡಿಕೊಳ್ಳುವಂತಿಲ್ಲ
ಈ ವಾರ ಎರಡು ವಿಭಿನ್ನ ಕಥಾಹಂದರ ಕನ್ನಡ ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ಒಂದು ಯೋಗರಾಜ್ ಭಟ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಡ್ರಾಮಾ'. ಇನ್ನೊಂದು ಚಿತ್ರ ಸುಮನಾ ಕಿತ್ತೂರು ನಿರ್ದೇಶನದ ಭೂಗತ ಜಗತ್ತಿನ ಕಥಾಹಂದರದ 'ಎದೆಗಾರಿಕೆ'.
ಎರಡೂ ಚಿತ್ರಗಳು ವಿಭಿನ್ನವಾಗಿರುವ ಕಾರಣ ಪ್ರೇಕ್ಷಕರು ಯಾವ ಚಿತ್ರ ನೋಡುವುದು ಯಾವುದನ್ನು ಬಿಡುವುದು ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ಎರಡೂ ಚಿತ್ರಗಳನ್ನು ಮಿಸ್ ಮಾಡಿಕೊಳ್ಳುವಂತಿಲ್ಲ. ಇವೆರಡೂ ಚಿತ್ರಗಳ ಗಲಾಟೆಯಲ್ಲಿ ಮೂರನೆಯದಾಗಿ ತೆರೆಕಾಣುತ್ತಿರುವ 'ಸೀ ಯೂ" ಚಿತ್ರವನ್ನು ಪ್ರೇಕ್ಷಕ ಮಹಾ ಪ್ರಭುಗಳು ಸೀ ಯು ಬಾಯ್ ಬಾಯ್ ಎನ್ನದಿದ್ದರೆ ಅಷ್ಟೇ ಸಾಕು.
ಬಹಳ ದಿನಗಳಿಂದ ಬ್ರೇಕ್ ನಿರೀಕ್ಷೆಯಲ್ಲಿರುವ ನಟ ಆದಿತ್ಯಾ ಅವರು 'ಎದೆಗಾರಿಕೆ' ಮೂಲಕ ಪ್ರೇಕ್ಷಕರ ಹೃದಯ ಗೆಲ್ಲುತ್ತಾರಾ? ಕಾದುನೋಡಬೇಕು. ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ' ಕಾದಂಬರಿಯೇ ಇಲ್ಲಿ ಚಲನಚಿತ್ರ ರೂಪ ಪಡೆದಿದೆ.
'ಎದೆಗಾರಿಕೆ' ಚಿತ್ರದ ಕಥೆ ಗೊತ್ತಿರುವುದೇ ಆದರೂ, ಕಾದಂಬರಿ ಓದುವ ಅನುಭವವೇ ಬೇರೆ. ಚಿತ್ರವನ್ನು ಕಣ್ತುಂಬಿಕೊಳ್ಳುವ ಅನುಭವವೇ ಬೇರೆ. ಪ್ರೇಕ್ಷಕರನ್ನು ಮೂರು ಗಂಟೆಗಳ ಕಾಲ ಚಿತ್ರ ಹಿಡಿದಿಟ್ಟರೆ ಅಷ್ಟೇ ಸಾಕು. "ಚಿತ್ರದಲ್ಲಿನ ಪ್ರತಿಯೊಬ್ಬ ಕಲಾವಿದರೂ ಅಭಿನಯಿಸದೆ ತಮ್ಮ ಪಾತ್ರಗಳನ್ನು ಉಸಿರಾಡಿದ್ದಾರೆ" ಎನ್ನುತ್ತಾರೆ ಚಿತ್ರದ ನಿರ್ದೇಶಕಿ ಸುಮನಾ.
ಅಗ್ನಿ ಶ್ರೀಧರ್ ಅವರ ಸಂಭಾಷಣೆ, ಚಿತ್ರಕಥೆ ಚಿತ್ರಕ್ಕೆ ಮತ್ತಷ್ಟು ಬಲ ನೀಡಿದೆ. ಚಿತ್ರದ ನಾಯಕಿ ಆಕಾಂಕ್ಷಾ. ಅತುಲ್ ಕುಲಕರ್ಣಿ, ರವಿಶಂಕರ್, ಅಚ್ಯುತ ಕುಮಾರ್, ಶರತ್ ಲೋಹಿತಾಶ್ವ, ಶೃಜನ್ ಲೋಕೇಶ್, ಧರ್ಮ ಮುಂತಾದ ಕಲಾವಿದರ ಬಳಗವೇ ಚಿತ್ರದಲ್ಲಿದೆ. ಚಿತ್ರಕ್ಕೆ ಸಂಗೀತ ದೀಪಕ್ ಪಂಡಿತ್. (ಒನ್ಇಂಡಿಯಾ ಕನ್ನಡ)


Click it and Unblock the Notifications











