ಜ್ಯೂ.ರವಿಚಂದ್ರನ್ ಗೆ ಸೀನಿಯರ್ ಶುಭ ಹಾರೈಕೆ
ಕನಸುಗಾರ ರವಿಚಂದ್ರನ್ ಅವರ ಹತ್ತಿರದ ಸಂಬಂಧಿ ನರಸಿಂಹನ್ ಅವರ ಪುತ್ರ ವಿವೇಕ್ ಈಗ ಗಾಂಧಿನಗರದಲ್ಲಿ ಜ್ಯೂ. ರವಿಚಂದ್ರನ್ ಎಂದೆ ಗುರುತಿಸಿಕೊಳ್ಳುತ್ತಿದ್ದಾರೆ. ಸೋದರಮಾವ ರವಿಚಂದ್ರನ್ ಅವರ ಹೋಲಿಕೆ ಇರುವ ವಿವೇಕ್ ಗೆ ಸಿನಿಮಾ ರಂಗ ಹೊಸದೇನಲ್ಲ. ಆದರೆ, ನಟನೆ, ಕನ್ನಡ ಸಂಭಾಷಣೆ ಹೊಸತು. ಸ್ವತಃ ರವಿ ಮಾವನಿಂದ ಈ ಪಾಠವನ್ನು ಹೇಳಿಸಿಕೊಂಡಿರುವ ವಿವೇಕ್ ಈಗ ಹೊಸ ಕನಸುಗಳನ್ನು ಹೊತ್ತು ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಕಾಲಿಟ್ಟಿದ್ದಾರೆ.
ರವಿಚಂದ್ರನ್, ಮೀನಾ, ಉಮಾಶ್ರೀ ಅಭಿನಯದ ಸೂಪರ್ ಹಿಟ್ ಚಿತ್ರ 'ಪುಟ್ನಂಜ' ಚಿತ್ರ ನಿರ್ಮಿಸಿದ್ದ ನರಸಿಂಹನ್ ಅವರ ಪುತ್ರ ವಿವೇಕ್ ಗೆ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರವಿಚಂದ್ರನ್ ಅವರೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಂತೆ. ನಾಯಕನಾಗಿ ಪಾತ್ರ ಮಾಡುವ ಮುನ್ನ ಬೇಕಾದ ತಯಾರಿ ನಡೆಸುವಂತೆ ರವಿ ಮಾವ ಸೂಚಿಸಿದ್ದರು.

ಸಿನಿಮಾ ಹಿನ್ನೆಲೆ ಇದ್ದರೂ, ನಾನು ಅಪ್ಪನ ಬಿಸಿನೆಸ್ ನೋಡಿಕೊಂಡು ಇದ್ದೆ. ಬಿ.ಕಾಂ ಓದಿರುವ ನನಗೆ ನಟನೆಯ ಪಾಠ ಹೇಳಿಕೊಂಡಿದ್ದು 'ಅಭಿನಯ ತರಂಗ'. ನನ್ನ ಲುಕ್, ಮ್ಯಾನರೀಸಂ ರವಿ ಮಾವನನ್ನು ಹೋಲುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅದೇ ನನ್ನ ಪ್ಲಸ್ ಪಾಯಿಂಟ್ ಎಂದು ವಿವೇಕ್ ಸಂತಸದಿಂದ ಹೇಳಿಕೊಂಡಿದ್ದಾರೆ.
ಯಶಸ್ವಿ ರಿಮೇಕ್ ಚಿತ್ರಗಳ ನಿರ್ದೇಶಕ ಮಹೇಶ್ ರಾವ್ ಅವರ ಚಿತ್ರ ಎಂದೆಂದೂ ನಿನಗಾಗಿ ಚಿತ್ರಕ್ಕಾಗಿ ವಿವೇಕ್ ಆಯ್ಕೆ ಆಕಸ್ಮಿಕವಾದರೂ ವಿವೇಕ್ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.
ವಿವೇಕ್ ಅವರ ಜೋಡಿಯಾಗಿ ದೀಪಾ ಸನ್ನಿಧಿ ನಟಿಸುತ್ತಿದ್ದರೆ, ಸಿಂಧು ಲೋಕನಾಥ್ ಜೋಡಿಯಾಗಿ ಅನೀಶ್ ತೇಜೇಶ್ವರ್ ಇದ್ದಾರೆ. ಎಂಗೇಯುಮ್ ಎಪ್ಪೋದುಂ ತಮಿಳು ಚಿತ್ರ ಬೆಂಗಳೂರಿಗೂ ನೋಡಿ ಮೆಚ್ಚಿರುವ ಚಿತ್ರ. ದುರಂತ ಅಂತ್ಯ ಕಾಣುವ ಪ್ರೇಮಿಗಳ ಕಥೆಯನ್ನು ಮಹೇಶ್ ರಾವ್ ನಿರ್ದೇಶಿಸುತ್ತಿದ್ದು, ವಿ. ಹರಿಕೃಷ್ಣ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ ಜನಮನ ಸೆಳೆದಿದೆ. ತಮಿಳಿನ ಟ್ಯೂನಿಗೆ ಭಟ್ಟರು ತಮ್ಮ ಸಾಲುಗಳನ್ನು ಪೋಣಿಸಿದ್ದಾರೆ.
ರವಿ ಕಿವಿಮಾತು: ಎಲ್ಲಾ ಚಿತ್ರದಲ್ಲೂ ಶೇ 200 ರಷ್ಟು ಶ್ರಮ ಹಾಕು. ನನ್ನ ಹಾಗೆ ಹೇರ್ ಸ್ಟೈಲ್, ಮ್ಯಾನರೀಸಂ ಇದೆ ಎಂದು ಜನ ನಿನ್ನನ್ನು ಮೆಚ್ಚುವುದು ಬೇಡ. ನಿನ್ನ ಪ್ರತಿಭೆ ಬಗ್ಗೆ ಜನ ಮಾತನಾಡುವಂಥಾಗಬೇಕು. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದು ರವಿಚಂದ್ರನ್ ಅವರು ತಮ್ಮ ಸೋದರಿ ಪುತ್ರ ವಿವೇಕ್ ಗೆ ಶುಭ ಹಾರೈಸಿದ್ದಾರೆ.
ಎಂದೆಂದೂ ನಿನಗಾಗಿ ಚಿತ್ರದ ಖಾಯಿಲೆ ಹಾಡು ನೋಡಿ


Click it and Unblock the Notifications











