ವಸಿಷ್ಠ - ಹರಿಪ್ರಿಯಾ ಪ್ರೀತಿ ವಿಷಯ ನಿಮಗೆ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆಗೆ ಡಾಲಿ ಕೊಟ್ಟ ಉತ್ತರವಿದು
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಪ್ರೀತಿ ವಿಚಾರ ಸದ್ಯ ಸಾಕಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರಂತೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿ ಇದ್ದ ಊಹಾಪೋಹಗಳು ಹೆಚ್ಚಾಗುವಂತೆ ಮಾಡಿತ್ತು. ಇದರ ಬೆನ್ನಲ್ಲೇ ಉಂಗುರ ಬದಲಾಯಿಸಿಕೊಂಡ ಈ ಜೋಡಿ ನಿಶ್ಚಿತಾರ್ಥವನ್ನೂ ಸಹ ಕೆಲ ದಿನಗಳಲ್ಲೇ ಮಾಡಿಕೊಂಡಿತು.
ಹೀಗೆ ನಿಶ್ಚಿತಾರ್ಥ ಮುಗಿದ ನಂತರ ಇಬ್ಬರ ನಡುವೆ ಪ್ರೀತಿ ಪ್ರೇಮ ಇದೆ ಎಂದು ಈ ಹಿಂದೆ ಹರಿದಾಡುತ್ತಿದ್ದ ಸುದ್ದಿಗಳೆಲ್ಲಾ ನಿಜ ಎಂಬುದೂ ಸಹ ಖಚಿತವಾಗಿದ್ದು, ವಸಿಷ್ಠ ಹಾಗೂ ಹರಿಪ್ರಿಯಾ ಇಬ್ಬರೂ ಸಹ ಇದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಇನ್ನು ಈ ಇಬ್ಬರೂ ಇಷ್ಟು ದಿನಗಳ ಕಾಲ ತಮ್ಮ ಪ್ರೀತಿ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದರು ಎಂಬ ವಿಚಾರವನ್ನು ಕಂಡ ಅಭಿಮಾನಿಗಳು ಮಾತ್ರವಲ್ಲದೇ ಹಲವಾರು ಸೆಲೆಬ್ರಿಟಿಗಳೂ ಸಹ ಆಶ್ಚರ್ಯಕ್ಕೆ ಒಳಗಾಗಿದ್ದರು. ಈ ಸಾಲಿಗೆ ಇದೀಗ ವಸಿಷ್ಠ ಸಿಂಹ ಅವರ ಕುಚಿಕು ಎಂದೇ ಕರೆಸಿಕೊಳ್ಳುವ ನಟ ಡಾಲಿ ಧನಂಜಯ್ ಸಹ ಸೇರಿಕೊಂಡಿದ್ದಾರೆ. ತಮ್ಮ ಮುಂದಿನ ಚಿತ್ರ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಎಂಬ ಪ್ರೆಸ್ಮೀಟ್ನಲ್ಲಿ ಭಾಗವಹಿಸಿದ್ದ ಧನಂಜಯ್ ವಸಿಷ್ಠ ಹಾಗೂ ಹರಿಪ್ರಿಯಾ ಪ್ರೀತಿ ವಿಷಯದ ಕುರಿತು ಪ್ರಶ್ನೆ ಎದುರಾದಾಗ ಈ ಕೆಳಕಂಡಂತೆ ಪ್ರತಿಕ್ರಿಯಿಸಿದ್ದಾರೆ.

ವಸಿಷ್ಠ ಪ್ರೀತಿ ವಿಚಾರ ಮುಂಚೆ ನಿಮಗೂ ಗೊತ್ತಿತ್ತಾ?
ಹೀಗೆ ಪ್ರೆಸ್ ಮೀಟ್ನಲ್ಲಿ ಮಾತನಾಡುತ್ತಿದ್ದ ಡಾಲಿ ಧನಂಜಯ್ ಮದುವೆ ವಿಚಾರ ಬಿಟ್ಟು ಬೇರೆ ಪ್ರಶ್ನೆ ಕೇಳಿ ಎಲ್ಲಾ ಕಡೆ ಅದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ, ಅದರಲ್ಲಿಯೂ ವಸಿಷ್ಠ ನಿಶ್ಚಿತಾರ್ಥವಾದ ನಂತರ ಈ ಪ್ರಶ್ನೆ ಹೆಚ್ಚಾಗಿದೆ ಎಂದರು. ಇದೇ ಸಮಯದಲ್ಲಿಲ ವಸಿಷ್ಠ ಅವರು ಹರಿಪ್ರಿಯಾ ಅವರನ್ನು ಪ್ರೀತಿಸುತ್ತಿದ್ದ ವಿಚಾರ ನಿಮಗೆ ಮುಂಚಿನಿಂದಲೂ ಗೊತ್ತಿತ್ತಾ ಎಂಬ ಪ್ರಶ್ನೆ ಧನಂಜಯ್ಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಧನಂಜಯ್ ಜೋರಾಗಿ ನಗುತ್ತಲೇ 'ಹೇಗೆ ಗೊತ್ತಾಗುತ್ತೆ, ನನಗೂ ಸಹ ಗೊತ್ತಿರಲಿಲ್ಲ, ನಂಗೂ ಸಹ ಇದು ಸರ್ಪ್ರೈಸ್, ಸಿಗಲಿ ಅಂತ ಕಾಯುತ್ತಾ ಇದ್ದೀನಿ' ಎಂದು ಹೇಳಿಕೆ ನೀಡಿದರು.

ಗೆಳೆಯನ ಬಾಳಲ್ಲಿ ದೀಪಾವಳಿ ಆಗ್ತಾ ಇದೆ
ಇನ್ನೂ ಮುಂದುವರಿದು ಮಾತನಾಡಿದ ಧನಂಜಯ್ ಟಗರು ಚಿತ್ರದಲ್ಲಿ ವಸಿಷ್ಠ ಸಿಂಹ ಪ್ರೀತಿಯ ಕುರಿತು ತಾವು ಬರೆದ ಕವನವೊಂದನ್ನು ನೆನೆದರು. 'ನೀನು ದೀಪ, ಇವನು ಹಾವಳಿ. ಇಬ್ಬರೂ ಸೇರಿದ್ರೆ ದೀಪಾವಳಿ.. ಗೆಳೆಯನ ಬಾಳಲ್ಲಿ ದೀಪಾವಳಿ ಆಗ್ತಾ ಇದೆ' ಎಂದು ಧನಂಜಯ್ ಹೇಳಿದರು. ಇದೇ ಸಮಯದಲ್ಲಿ ವಸಿಷ್ಠ ಅವರನ್ನು ಯಾವಾಗ ಭೇಟಿ ಆಗ್ತೀರಾ ಎಂಬ ಪ್ರಶ್ನೆ ಎದುರಾಗಿದ್ದಕ್ಕೆ ಉತ್ತರಿಸಿದ ಧನಂಜಯ್ 'ನಂಗೆ ವಸಿಷ್ಠ ಸಿಕ್ಕೇ ಇಲ್ಲ. ಇವಾಗ ಗೊತ್ತಾಗ್ತಿದೆ ಯಾಕೆ ಸಿಗ್ತಾ ಇರಲಿಲ್ಲ ಅಂತ. ಸಿಕ್ಕ ಮೇಲೆ ವಿಚಾರಿಸಿಕೊಳ್ತೇನೆ' ಎಂದು ಹೇಳಿ ಗೆಳೆಯನ ಕಾಲೆಳೆದರು.

ರಶ್ಮಿಕಾ ಬಗ್ಗೆಯೂ ಧನಂಜಯ್ ಮಾತು
ಇನ್ನು ಇದೇ ಪ್ರೆಸ್ ಮೀಟ್ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ನಡೆಯುತ್ತಿರುವ ಅಭಿಯಾನದ ಬಗ್ಗೆ ಕೂಡ ಮಾತನಾಡಿದ ಧನಂಜಯ್ ಚಿತ್ರರಂಗದಲ್ಲಿ ಹಲವರ ಜೀವನವಿದೆ, ಹಲವರ ಬದುಕಿದೆ, ಚಿತ್ರರಂಗ ಎಲ್ಲರಿಗೂ ಮುಕ್ತವಾಗಿದೆ, ಇಲ್ಲಿಗೆ ಯಾರನ್ನೂ ಬರಬೇಡಿ ಎನ್ನಲಾಗುವುದಿಲ್ಲ, ಬ್ಯಾನ್ ಕೂಡ ಮಾಡಲಾಗುವುದಿಲ್ಲ ಎಂದು ಹೇಳಿಕೆ ನೀಡಿದರು.


Click it and Unblock the Notifications











