ಡ್ರಗ್ಸ್ ಪ್ರಕರಣ, ಡಬ್ಬಿಂಗ್ ಬಗ್ಗೆ ನಟಿ, ಮಾಜಿ ಸಚಿವೆ ಉಮಾಶ್ರಿ ಮಾತು
ಡಬ್ಬಿಂಗ್ ಪರ-ವಿರೋಧ ಚರ್ಚೆ ಸಾಗುತ್ತಲೇ ಇದೆ. ಡಬ್ಬಿಂಗ್ ಪರ-ವಿರೋಧ ದನಿಗಳು ತಮ್ಮ-ತಮ್ಮ ವಾದವನ್ನು ಮುಂದಿಟ್ಟು ಪರಸ್ಪರ ವಾದಿಸುತ್ತಲೇ ಇದ್ದಾರೆ. ಈ ನಡುವೆ ಡಬ್ಬಿಂಗ್ ವಿರುದ್ಧವಾಗಿ ನಟಿ ಉಮಾಶ್ರಿ ಮಾತನಾಡಿದ್ದಾರೆ.
ಬಾಗಲಕೋಟೆಯ ಬನಹಟ್ಟಿಗೆ ಭೇಟಿ ನೀಡಿದ್ದ ಉಮಾಶ್ರಿ, ಮಾಧ್ಯಮಗಳೊಟ್ಟಿಗೆ ಮಾತನಾಡಿ, 'ಡಬ್ಬಿಂಗ್ ಸಿನಿಮಾಗಳಿಂದ ನಮ್ಮ ಸಂಸ್ಕೃತಿಗೆ ಪೆಟ್ಟು ಬೀಳುತ್ತದೆ. ಅಲ್ಲದೆ, ಸ್ಟಾರ್ ನಟರ ಡಬ್ಬಿಂಗ್ ಸಿನಿಮಾಗಳಿಂದಾಗಿ ಸಣ್ಣ ನಟರ ಸಿನಿಮಾಗಳಿಗೆ ದೊಡ್ಡ ಹೊಡೆತ ಬೀಳುತ್ತದೆ' ಎಂದರು.
ರೀಮೇಕ್ ಸಿನಿಮಾಗಳೇ ಬೇಡ ಎಂದು ಒಂದು ಸಮಯದಲ್ಲಿ ಮಾತನಾಡುತ್ತಿದ್ದೆವು, ಆದರೆ ಈಗ ಡಬ್ಬಿಂಗ್ ಸಿನಿಮಾಗಳೂ ಬಂದು ಬಿಟ್ಟಿವೆ. ವ್ಯಾಪಾರಿ ಮನೋಭಾವದ ಕನ್ನಡಿಗರಿಂದಾಗಿ ಈ ಸಮಸ್ಯೆಗಳು ಆಗುತ್ತಿವೆ ಎಂದು ಉಮಾಶ್ರಿ ಆರೋಪಿಸಿದರು.

ಪರಭಾಷೆ ನಟನೆ ಬಗ್ಗೆ ಮಾತನಾಡಿದ ಉಮಾಶ್ರಿ, 'ನಮ್ಮ ನಟ-ನಟಿಯರು ಬೇರೆ ಭಾಷೆಗಳಲ್ಲಿ ನಟಿಸುವುದರಲ್ಲಿ ತಪ್ಪಿಲ್ಲ. ಅವರ ಪ್ರತಿಭೆ ನೋಡಿ ಆಹ್ವಾನ ನೀಡಿದಾಗ ಹೋಗಲೇ ಬೇಕು. ನಾನು ಪರಭಾಷೆಯಲ್ಲಿ ನಟಿಸಿಲ್ಲ. ನನ್ನನ್ನು ಯಾರೂ ಕರೆದಿಲ್ಲ. ಪ್ರಸ್ತುತ ನಾನು ಕನ್ನಡದ 'ರತ್ನನ್ ಪರ್ಪಂಚ' ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದರು.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಬಗ್ಗೆಯೂ ಮಾತನಾಡಿದ ಉಮಾಶ್ರಿ, 'ಪ್ರಕರಣ ನ್ಯಾಯಾಲಯದಲ್ಲಿದೆ, ಅಪರಾಧಿಗಳು ಯಾರು ಎಂಬ ಬಗ್ಗೆ ತೀರ್ಮಾನ ಆಗಿಲ್ಲ. ಹಾಗಾಗಿ ಯಾರದ್ದು ತಪ್ಪು-ಸರಿ ಎಂದು ಹೇಳಲು ಸಾಧ್ಯವಿಲ್ಲ, ಆದರೆ ದುಶ್ಚಟಗಳು ಸರ್ವತಾ ತಪ್ಪು ಎಂದು ಹೇಳಬಲ್ಲೆ' ಎಂದಿದ್ದಾರೆ ಉಮಾಶ್ರಿ.
Recommended Video
'ಸಿನಿಮಾ ನಟ-ನಟಿಯರೆಂದರೆ ಒಂದು ವಿಶೇಷ ಗೌರವ ಇರುತ್ತದೆ. ಆ ಗೌರವವನ್ನು ಉಳಿಸಿಕೊಂಡು ಹೋಗಬೇಕಾದುದು ಆಯಾ ನಟ-ನಟಿಯರ ಕರ್ತವ್ಯ. ಅದರ ಜವಾಬ್ದಾರಿ ಅವರಿಗೆ ಇರಲೇ ಬೇಕು' ಎಂದರು ಉಮಾಶ್ರಿ.


Click it and Unblock the Notifications











