Shivamogga Subbanna: ರಾಷ್ಟ್ರಪ್ರಶಸ್ತಿ ವಿಜೇತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ
ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇಂದು (ಆಗಸ್ಟ್ 11) ರಂದು ಸಂಜೆ ವೇಳೆಗೆ ನಿಧನ ಹೊಂದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಸುಗಮ ಸಂಗೀತದಲ್ಲಿ ಸುಬ್ಬಣ್ಣನವರದ್ದು ದೊಡ್ಡ ಹೆಸರು.
ಶಿವಮೊಗ್ಗ ಸುಬ್ಬಣ್ಣನವರು ಅನಾರೋಗ್ಯದಿಂದ ಜಯದೇವಾ ಆಸ್ಪತ್ರೆಗೆ ದಾಖಲಾಗಿದ್ದರು, ಗುರುವಾರ ರಾತ್ರಿ ಅದೇ ಆಸ್ಪತ್ರೆಯಲ್ಲಿ ಸುಬ್ಬಣ್ಣನವರು ಕೊನೆ ಉಸಿರೆಳೆದಿದ್ದಾರೆ.
ಶಿವಮೊಗ್ಗ ಸುಬ್ಬಣ್ಣನವರು ಹಾಡಿರುವ 'ಕಾಡು ಕುದುರೆ' ಸಿನಿಮಾದ 'ಕಾಡು ಕುದುರೆ ಓಡಿ ಬಂದಿತ್ತ' ಹಾಡಿಗೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಎಂಬ ಖ್ಯಾತಿ ಶಿವಮೊಗ್ಗ ಸುಬ್ಬಣ್ಣನವರದ್ದು.
ಜಿ ಸುಬ್ರಹ್ಮಣ್ಯಂ ಜನ್ಮ ನಾಮದ ಸುಬ್ಬಣ್ಣನವರು ಶಿವಮೊಗ್ಗ ಜಿಲ್ಲೆಯ ನಗರದಲ್ಲಿ 1938 ರಲ್ಲಿ ಜನಿಸಿದರು. ಇವರ ತಾತ ಸುಬ್ಬಣ್ಣನವರು ಸಂಗೀತ ವಿದ್ವಾಂಸರಾಗಿದ್ದರು. ಸಂಗೀತದ ಪ್ರಥಮ ಪಾಠಗಳನ್ನು ತಾತನ ಬಳಿಯೇ ಕಲಿತರು ಸುಬ್ಬಣ್ಣ.

Recommended Video
ವೃತ್ತಿಯಲ್ಲಿ ವಕೀಲರಾಗಿದ್ದ ಸುಬ್ಬಣ್ಣ ಹಲವು ವರ್ಷ ಸಂಗೀತದಿಂದ ದೂರವೇ ಉಳಿದಿದ್ದರು. ಆದರೆ 'ಕರಿಮಾಯಿ' ಸಿನಿಮಾದ ಮೂಲಕ ಸಿನಿಮಾ ಗಾಯನ ಆರಂಭಿಸಿದರು. ಆ ಬಳಿಕ 'ಕೋಡಗನ ಕೋಳಿ ನುಂಗಿತ್ತ', 'ಅಳಬ್ಯಾಡ ತಂಗಿ ಅಳಬ್ಯಾಡ', 'ಬಿದ್ದೀಯ ಬೇ ಮುದುಕಿ' ಇನ್ನೂ ಹಲವರು ಹಾಡುಗಳು ಇವರಿಗೆ ಹೆಸರು ಹಾಗೂ ಪ್ರಶಸ್ತಿಗಳನ್ನು ತಂದುಕೊಟ್ಟವು. ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರಿಂದ ರಜತಕಮಲವನ್ನು ಸುಬ್ಬಣ್ಣನವರು ಪಡೆದಿದ್ದರು. ಅವರ 'ಕಾಡು ಕುದರೆ ಓಡಿ ಬಂದಿತ್ತ' ಹಾಡು ಬಹಳ ಜನಪ್ರಿಯ ಹಾಗೂ ಇದೇ ಹಾಡಿಗಾಗಿ ಅವರು ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.


Click it and Unblock the Notifications











