ಪತಿ ಚಂದ್ರಚೂಡನಿಂದ ಮೋಸ ಹೋದೆ: ನಟಿ ಶ್ರುತಿ
ಬೆಂಗಳೂರು, ಜೂನ್ 24: ಹಿರಿಯ ನಟಿ ಶ್ರುತಿ ಅವರ ಬದುಕಲ್ಲಿ ಮತ್ತೊಮ್ಮೆ ಬಿರುಗಾಳಿ ಎದ್ದಿದೆ. ಶ್ರುತಿ ಅವರ ಎರಡನೆಯ ಮದುವೆಯೂ ಮುರಿದು ಬೀಳುವ ಸೂಚನೆಗಳಿವೆ.
ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಅಲಿಯಾಸ್ ಚಂದ್ರಶೇಖರ್ ಜತೆ ಕೊಲ್ಲೂರಿನಲ್ಲಿ 15 ದಿನಗಳ ಹಿಂದೆ (ಜೂ.6) ನೂತನ ದಾಂಪತ್ಯಕ್ಕೆ ಕಾಲಿಟ್ಟಿದ್ದ ಶ್ರುತಿ ಆ ಮದುವೆಗೆ ತಿಲಾಂಜಲಿಯಿಡಲು ನಿರ್ಧರಿಸಿದ್ದಾರೆ. ಖುದ್ದು ಶ್ರುತಿ ಅವರೇ ಈ ವಿಷಯವನ್ನು ಮಾಧ್ಯಮಗಳಿಗೆ ಭಾನುವಾರ ರಾತ್ರಿ ತಿಳಿಸಿದ್ದಾರೆ.
ನಾನು ನಿಜಕ್ಕೂ ಮೋಸ ಹೋದೆ. ನನ್ನ ಪತಿ ಚಂದ್ರಚೂಡ ಚಕ್ರವರ್ತಿ ನನಗೆ ಮೋಸ ಮಾಡಿದ್ದಾರೆ. ವಿಶ್ವಾಸದ್ರೋಹವೆಸಗಿದ್ದಾರೆ ಎಂದು ಶ್ರುತಿ ಅವರು ತಮ್ಮ ಎರಡನೆಯ ಪತಿ ವಿರುದ್ಧ ಕಿಡಿಕಾರಿದ್ದಾರೆ. 'ಪ್ರಕರಣ ನ್ಯಾಯಾಲಯದಲ್ಲಿದೆ. ನನಗೂ ಆಘಾತವಾಗಿದೆ ಆದ್ದರಿಂದ ಹೆಚ್ಚೇನೂ ಮಾತನಾಡಲಾರೆ' ಎಂದೂ ಶ್ರುತಿ ಅಲವತ್ತುಕೊಂಡಿದ್ದಾರೆ.

ಶ್ರುತಿ ಬಗ್ಗೆ ಜನ ಮಾತನಾಡಿಕೊಂಡಿದ್ದರು:
ಮದುವೆಯಾದ ಮಾರನೆಯ ದಿನವೇ ಶ್ರುತಿ- ಚಂದ್ರಚೂಡ ಮದುವೆ ಬಗ್ಗೆ ಕೊಂಕುಗಳು ಕೇಳಿಬಂದಿದ್ದವು. 'ರಾಜಕಾಕೀಯವಾಗಿ, ಸಾಮಾಜಿಕವಾಗಿ ಮತ್ತು ತಮ್ಮದೇ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸು, ಅನುಭವ, ಗೌರವ ಸಂಪಾದಿಸಿರುವ ನಟಿ ಶ್ರುತಿ ಅವರಿಗೆ ಇದೆಲ್ಲ ಬೇಕಿತ್ತಾ? ಮತ್ತೊಬ್ಬ ಹೆಣ್ಣು ಮಗಳಿಗೆ ಹೀಗೆ ಅನ್ಯಾಯ ಮಾಡಲು ಮನಸ್ಸಾದರೂ ಹೇಗೆ ಬಂತು ಅವರಿಗೆ? ಅಷ್ಟೂ ಬುದ್ಧಿಬೇಡವಾ ಅವರಿಗೆ?' ಎಂದು ಜನ ಶ್ರುತಿ ಬಗ್ಗೆ ಮಾತನಾಡಿಕೊಂಡಿದ್ದರು.

ಮಂಜುಳ ಬಾಳನ್ನು ಹಾಳು ಮಾಡಲಾರೆ
ಇದೇ ವೇಳೆ, 'ಪತಿ ಚಂದ್ರಚೂಡ ಚಕ್ರವರ್ತಿ ಅವರ ಮೊದಲ ಪತ್ನಿ ಮಂಜುಳ ಅವರಿಗೆ ಯಾವುದೇ ರೀತಿಯಿಂದಲೂ ಅನ್ಯಾಯವಾಗದಂತೆ ನಾನು ಹೋರಾಡುವೆ. ನನ್ನ ಹಾಗೆ ಆಕೆಯೂ ಒಬ್ಬ ಹೆಣ್ಣು. ಹೆಣ್ಣಾಗಿ ನಾನು ಆಕೆಯ ಬಾಳನ್ನು ಹಾಳು ಮಾಡಲಾರೆ. ಕಾನೂನುರೀತ್ಯ ಅವರಿಗೆ ಜಯ ದೊರಕಿಸಿಕೊಡುವೆ' ಎಂದು ಶ್ರುತಿ ಸ್ಪಷ್ಟಪಡಿಸಿದ್ದಾರೆ.

ಜೀವನದಲ್ಲಿ ಮೋಸ ಹೋದೆ
ತಮ್ಮ ಎರಡನೆಯ ಮದುವೆಯ ನಂತರದ ಘಟನೆಗಳಿಂದ ತೀವ್ರವಾಗಿ ನೊಂದಂತೆ ಕಂಡುಬಂದ ನಟಿ ಶ್ರುತಿ ಅವರು ನಾನು ಜೀವನದಲ್ಲಿ ಮೋಸ ಹೋದೆ. ಸಾಕಷ್ಟು ನೊಂದಿದ್ದೇನೆ. ಪತ್ರಕರ್ತ ಚಂದ್ರಚೂಡ ಚಕ್ರವರ್ತಿ ಅವರನ್ನು ಅತಿಯಾಗಿ ನಂಬಿದ್ದೇ ನನಗೆ ಮುಳುವಾಯಿತು. ಆತ ತನ್ನ ಮೊದಲ ಪತ್ನಿ ಮಂಜುಳಾ ಅವರಿಗೆ ವಿಚ್ಛೇದನ ನೀಡಿಯೇ ನನ್ನ ಜತೆ ಮದುವಾಯಾಗುತ್ತಿರುವುದಾಗಿ ನಂಬಿಸಿದ. ಆದರೆ ಈಗ ವಾಸ್ತವ ಅರಿವಿಗೆ ಬರುತ್ತಿದೆ.

ಮಂಜುಳಾ ನೋವು ನನಗೆ ಅರ್ಥವಾಗುತ್ತದೆ
ಇನ್ನು ನನ್ನ ಬಾಳನ್ನು ಸರಿತಿದ್ದಿಕೊಳ್ಳುವೆ. ಕಾನೂನು ಹೋರಾಟ ನಡೆಸುವೆ. ಜತೆಗೆ ಆ ಹೆಣ್ಣುಮಗಳಿಗೂ ನ್ಯಾಯ ಒದಗಿಸಿಕೊಡುವೆ. ಮಂಜುಳಾ ನ್ಯಾಯಾಲಯದ ಮೆಟ್ಟಿಲೇರಿರುವುದರಲ್ಲಿ ತಪ್ಪಿಲ್ಲ. ಅವರೂ ಕೂಡ ಒಂದು ಹೆಣ್ಣು. ಅವರ ನೋವು ನನಗೆ ಅರ್ಥವಾಗುತ್ತದೆ ಎಂದು ಶ್ರುತಿ ಹೇಳಿದ್ದಾರೆ.

ಮಂಜುಳಾ ಹೇಳಿದ್ದೇನು?:
'ನಾವಿಬ್ಬರೂ ಕೋರ್ಟ್ ಮೆಟ್ಟಿಲು ಹತ್ತೇ ಇಲ್ಲ. ಡೈವೋರ್ಸ್ ಪಡೆಯುವ ಪ್ರಶ್ನೆಯೇ ಇಲ್ಲ. ಇಷ್ಟಾದರೂ ಶ್ರುತಿ ಹೇಗೆ ಮದುವೆಗೆ ಒಪ್ಪಿಕೊಂಡರು ಎಂಬುದೇ ನನಗೆ ಗೊತ್ತಾಗುತ್ತಿಲ್ಲ. ನಾನು ಯಾವುದೇ ಕಾರಣಕ್ಕೂ ಚಂದ್ರಚೂಡಗೆ ಡೈವೋರ್ಸ್ ಕೊಡುವುದಿಲ್ಲ. ನನ್ನಿಂದ ಡಿವೋರ್ಸ್ ಪಡೆದಿದ್ದೇನೆ ಎಂದು ಚಂದ್ರಚೂಡ್, ಶ್ರುತಿಗೆ ಸುಳ್ಳು ಹೇಳಿರುವ ಸಾಧ್ಯತೆ ಇದೆ ಎಂದು ನಟಿ ಶ್ರುತಿ-ಚಂದ್ರಚೂಡ ಮದುವೆಯಾದ ಮಾರನೆಯ ದಿನವೇ ಮಂಜುಳಾ ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದರು. ಚಂದ್ರಚೂಡ ಮತ್ತು ಅರಸೀಕೆರೆಯ ಮಂಜುಳ ಅವರು ಸುಮಾರು 15 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಹೆಣ್ಣು ಮಗು ಇದೆ.

ಎಲ್ಲ ವಿಧಿಯಾಟ: ಶ್ರುತಿ
ಪ್ರಕರಣದಿಂದ ತುಂಬಾ ನೋವಾಗಿದೆ. ಎಲ್ಲ ವಿಧಿಯಾಟ. ಅತಿಯಾದ ನಂಬಿಕೆ ನನ್ನ ಇಂದಿನ ದುಃಸ್ಥಿತಿಗೆ ಕಾರಣ. ನನಗೆ ಮೋಸ ಆದರೂ ಪರವಾಗಿಲ್ಲ. ಆದರೆ ಮಂಜುಳಾಗೆ ನ್ಯಾಯ ಸಿಗಲೆಂದು ಆಶಿಸುವೆ- ಶ್ರುತಿ.


Click it and Unblock the Notifications











