ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣಾ ಕಣದಲ್ಲಿ ಘಟಾನುಘಟಿಗಳು!
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಜೂನ್ 26ಕ್ಕೆ ನಡೆಯಲಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ, ಗೌರವ ಕಾರ್ಯದರ್ಶಿ, ಖಜಾಂಚಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಫಿಲ್ಮ್ ಛೇಂಬರ್ ನ ಚುನಾವಣೆಯಲ್ಲಿ ಈ ಸಲ ಘಟಾನುಘಟಿಗಳು ಸ್ಪರ್ಧಿಸುತ್ತಿದ್ದಾರೆ.
ವಾಣಿಜ್ಯ ಮಂಡಳಿಯ ಅಧ್ಯಕ್ಷರ ಸ್ಥಾನಕ್ಕೆ ಸವೇಶ್ವರಿ ಕಂಬೈನ್ಸ್ ನ ಚಿನ್ನೇಗೌಡ ಹಾಗೂ ಮಾರ್ಸ್ ಸುರೇಶ್ ಸ್ಪರ್ಧಿಸಿದ್ದಾರೆ. ಇಬ್ಬರು ಕೂಡ ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರ ಸ್ಥಾನಕ್ಕೆ ನಿರ್ಮಾಪಕರಾದ ದಿನೇಶ್ ಗಾಂಧಿ, ಪ್ರಮೀಳಾ ಜೋಷಾಯ್ ಮತ್ತು ಕರಿಸುಬ್ಬು ಕಣದಲ್ಲಿದ್ದಾರೆ.

ಇನ್ನು ವಿತರಕರ ವಲಯದಿಂದ ಕುಟ್ಟಿ ಜಿ.ಕೆ., ಕುಪ್ಪುಸ್ವಾಮಿ, ಬಿ.ಆರ್.ಕೇಶವ, ನಾಗಣ್ಣ, ಕೆ.ಮಂಜು ಸ್ಪರ್ಧಿಸುತ್ತಿದ್ದಾರೆ. ಪ್ರದರ್ಶಕರ ವಲಯದಿಂದ ಅಶೋಕ ಥಿಯೇಟರ್ ಮಾಲೀಕ ಅಶೋಕ್ ಅವಿರೋಧವಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿ ಹುದ್ದೆಗೆ ನಿರ್ಮಾಪಕರ ವಲಯದಿಂದ ಎ. ಗಣೇಶ್ ಹಾಗೂ ಭಾ.ಮಾ.ಹರೀಶ್. ಸ್ಪರ್ಧಿಸುತ್ತಿದ್ದಾರೆ.

ಪಾರ್ಥಸಾರಥಿ, ರಾಜಶೇಖರ್, ವೆಂಕಟೇಶ್ ಹಾಗೂ ಶಿಲ್ಪ ಶ್ರೀನಿವಾಸ್ ವಿತರಕರ ವಲಯದಿಂದ ಸ್ಪರ್ಧಿಸುತ್ತಿದ್ದಾರೆ. ಪ್ರದರ್ಶಕರ ವಲಯದಿಂದ ಸುಂದರ್ ರಾಜು ಅವರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಳಿದಂತೆ ಗೌರವ ಖಜಾಂಚಿ ಸ್ಥಾನಕ್ಕೆ ಚಿತ್ರಲೋಕ ಮೂವಿಸ್ ನ ಕೆ.ಎಂ. ವೀರೇಶ್ ಮತ್ತು ಜಯಸಿಂಹ ಮುಸುರಿ ಸ್ಪರ್ಧಿಸುತ್ತಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೂ ಚುನಾವಣೆ ನಡೆಯುತ್ತಿದ್ದು ಅಲ್ಲಿಯೂ ಘಟಾನುಘಟಿಗಳೇ ಕಣದಲ್ಲಿದ್ದಾರೆ.


Click it and Unblock the Notifications











