ಸ್ಯಾಂಡಲ್ ವುಡ್ 'ಸ್ಟೂಡೆಂಟ್ಸ್'ಗೆ ಸಾ.ರಾ ಗೋವಿಂದು ಸಾಥ್
ಕನ್ನಡದಲ್ಲಿ ಸದ್ಯ ಟೈಟಲ್ ಹಾಗೂ ಟ್ರೈಲರ್ ನಿಂದ ಕುತೂಹಲ ಮೂಡಿಸಿರುವ 'ಸ್ಟೂಡೆಂಟ್ಸ್' ಚಿತ್ರಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಸಾಥ್ ಕೊಟ್ಟಿದ್ದಾರೆ. ಯುವ ಕಲಾವಿದರ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವುದರ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇದೇ ತಿಂಗಳು 16 ರಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ 'ಸ್ಟೂಡೆಂಟ್ಸ್' ಚಿತ್ರದ ಪ್ರಮೋಷನ್ ಕೆಲಸಕ್ಕೆ ಸಾ.ರಾ ಗೋವಿಂದು ಚಾಲನೆ ನೀಡಿದರು. ಕರ್ನಾಟಕ ವಾಣಿಜ್ಯ ಮಂಡಳಿಯ ಕಚೇರಿ ಎದುರು 'ಸ್ಟೂಡೆಂಟ್ಸ್'ದ ಪ್ರಚಾರ ವಾಹನವನ್ನ ಸಾ.ರಾ ಗೋವಿಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎನ್.ಎಂ.ಸುರೇಶ್, ಎಂ.ಜಿ.ರಾಮಮೂರ್ತಿ ಸೇರಿದಂತೆ 'ಸ್ಟೂಡೆಂಟ್ಸ್' ಚಿತ್ರತಂಡ ಭಾಗಿಯಾಗಿತ್ತು.

ಈ ವೇಳೆ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರು, ''ಹೊಸಬರೇ ಸೇರಿ ಮಾಡಿರುವ 'ಸ್ಟೂಡೆಂಟ್ಸ್' ಚಿತ್ರಕ್ಕೆ ಒಳ್ಳೆಯದಾಗಲಿ, ಒಳ್ಳೆ ಕಥೆಯ ಮೂಲಕ ತೆರೆಗೆ ಬರ್ತಿದ್ದಾರೆ. ಚಿತ್ರಕ್ಕೆ ಯಶಸ್ಸು ಸಿಗಲಿ'' ಎಂದು ವಿಶ್ ಮಾಡಿದರು.

ಈಗಾಗಲೇ ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆದಿರುವ 'ಸ್ಟೂಡೆಂಟ್ಸ್' ಚಿತ್ರತಂಡ, ಈ ಹಿಂದೆ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು. ಸ್ಲಂ ನಗರಗಳಿಗೆ ಭೇಟಿ ಮಾಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ್ದರು. ಮತ್ತು ಕಾಲೇಜ್ ಕ್ಯಾಂಪಸ್ ಗಳಿಗೆ ಹೋಗಿ ಚಿತ್ರದ ಬಗ್ಗೆ ವಿಭಿನ್ನವಾಗಿ ಪ್ರಮೋಷನ್ ಮಾಡಿದ್ದರು.

ಅಂದ್ಹಾಗೆ, 'ಸ್ಟೂಡೆಂಟ್ಸ್' ಪಕ್ಕಾ ಯೂತ್ ಫುಲ್ ಸಿನಿಮಾವಾಗಿದ್ದು, ಔಟ್ ಅಂಡ್ ಔಟ್ ಎಂಟರ್ ಟೈನ್ ಮೆಂಟ್ ನಿಂದ ಕೂಡಿದೆಯಂತೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸಂತೋಷ್ ಕುಮಾರ್ ಈ ಚಿತ್ರಕ್ಕೆ ನಿರ್ಮಾಪಕರು ಕೂಡ ಹೌದು. ಇನ್ನು ಸಚಿನ್ ಪುರೋಹಿತ್, ಸಚಿನ್ ಜಿ, ಮತ್ತು ಕಿರಣ್ ರಾಯಭಾಗಿ ಮೂವರು ನಾಯಕ ನಟರಿದ್ದು, ಭವ್ಯ ಕೃಷ್ಣ, ಅಂಕಿತ, ಮತ್ತು ಸುವರ್ಣ ಶೆಟ್ಟಿ ಜೋಡಿಯಾಗಿದ್ದಾರೆ.

ಉಳಿದಂತೆ 'ಸ್ಟೂಡೆಂಟ್ಸ್' ಚಿತ್ರಕ್ಕೆ ಜೆ.ಜೆ.ಶರ್ಮಾ ಅವರ ಛಾಯಾಗ್ರಹಣವಿದ್ದು, ಎಡ್ವರ್ಡ್ ಅವರು ಸಂಗೀತ ನೀಡಿದ್ದಾರೆ. ವಿ.ಎಚ್.ಹೇಮಂತ್ ಹಾವೇರಿ ಅವರ ಸಂಭಾಷಣೆ ಹೊಂದಿದ್ದು, ನೆಲಮನೆ ರಾಘವೇಂದ್ರ ಅವರ ಸಾಹಿತ್ಯ ಚಿತ್ರಕ್ಕಿದೆ. ಒಟ್ನಲ್ಲಿ, ಹಲವು ವಿಚಾರಗಳಿಗೆ ನಿರೀಕ್ಷೆ ಹುಟ್ಟುಹಾಕಿರುವ ಸ್ಟೂಡೆಂಟ್ಸ್ 16 ರಂದು ಬೆಳ್ಳಿತೆರೆಗೆ ಕಾಲಿಡಲಿದೆ.


Click it and Unblock the Notifications











