'ಡೇಂಜರ್ ಜೋನ್' ಚಿತ್ರ ನಿರ್ಮಾಪಕರ ಜಗಳದಲ್ಲಿ ಯುವಕನ ಹತ್ಯೆ
ಹುಟ್ಟು ಮತ್ತು ಸಾವಿನ ಕಥೆಯ ಹಾರರ್ ಸಿನಿಮಾ 'ಡೇಂಜರ್ ಜೋನ್' ಚಿತ್ರದ ಹಣಕಾಸಿನ ವಿಚಾರಕ್ಕೆ ನಿರ್ಮಾಪಕರ ಸ್ನೇಹಿತನ ಹತ್ಯೆ ಆಗಿದೆ.
'ಡೇಂಜರ್ ಜೋನ್' ಚಿತ್ರ ನಿರ್ಮಾಪಕ ಮತ್ತು ಸಹ ನಿರ್ಮಾಪಕರ ನಡುವೆ ಹಣಕಾಸಿನ ವಿಚಾರಕ್ಕೆ ನಡೆದ ಜಗಳದಲ್ಲಿ ಸೋಮೇಶ್ವರನಗರದ ಮನೋಜ್(32) ಎಂಬಾತ ಬಲಿ ಆಗಿದ್ದಾನೆ.

ಹಣಕಾಸು ವಿಚಾರದಲ್ಲಿ ಗೆಳೆಯ ಬಲಿ
'ಡೇಂಜರ್ ಜೋನ್' ಕನ್ನಡ ಚಿತ್ರದ ನಿರ್ಮಾಪಕ ಸ್ವರೂಪ್ ಗೌಡ ಮತ್ತು ಆತನ ಸ್ನೇಹಿತರಾದ ಮನೋಜ್ ಹಾಗೂ ಗೋಪಿ ನಿನ್ನೆ(ಮಾರ್ಚ್ 3) ಮಹಾಲಕ್ಷ್ಮಿ ಲೇಔಟ್ ನ ಎಪಿಎಂಸಿ ಯಾರ್ಡ್ ನಲ್ಲಿ ಇದ್ದ ವೇಳೆ, ಅಲ್ಲಿಗೆ ಬಂದ ''ಡೇಂಜರ್ ಜೋನ್' ಸಹ ನಿರ್ಮಾಪಕ ರಾಮು ಮತ್ತು ಸ್ವರೂಪ್ ಗೌಡ ನಡುವೆ ಹಣಕಾಸು ವಿಚಾರವಾಗಿ ಗಲಾಟೆ ನಡೆದಿದೆ. ಈ ಘಟನೆಯಲ್ಲಿ ಮನೋಜ್(32) ಬಲಿಯಾಗಿದ್ದಾರೆ.

ಗಲಾಟೆಯಲ್ಲಿ ನಡೆದಿದ್ದು ಇಷ್ಟು..
'ಡೇಂಜರ್ ಜೋನ್' ನಿರ್ಮಾಪಕ ಸ್ವರೂಪ್ ಗೌಡ, ಸಹ ನಿರ್ಮಾಪಕ ರಾಮು ಜೊತೆ ದುಡ್ಡಿನ ವಿಷಯಕ್ಕೆ ಜಗಳವಾಡುತ್ತಿರುವ ವೇಳೆ ರಾಮುವಿನ ಕೆನ್ನೆಗೆ ಹೊಡೆದು, ಹಣ ಕೊಡುವುದಿಲ್ಲ ಎಂದು ಬೈದರಂತೆ. ಇದರಿಂದ ಕೋಪಗೊಂಡ ರಾಮು ತನ್ನ 5 ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡಾಗ ಸ್ವರೂಪ್ ಮತ್ತು ರಾಮು ಮಧ್ಯೆ ಮಾರಾಮಾರಿ ಗುದ್ದಾಟ ನಡೆದಿದೆ. ಈ ವೇಳೆ ಮನೋಜ್ ಹೊಟ್ಟೆ ಹಾಗೂ ಎದೆಗೆ ರಾಮುವಿನ ಕಡೆಯವರು ಚೂರಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಆದರೆ ಮನೋಜ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಘಟನೆ ಬಗ್ಗೆ ಮಹಾಲಕ್ಷ್ಮಿ ಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

'ಡೇಂಜರ್ ಜೋನ್ ' ಸಿನಿಮಾ
'ಡೇಂಜರ್ ಜೋನ್' ಚಿತ್ರವನ್ನು ಸ್ವರೂಪ್ ಗೌಡ ಮತ್ತು ರಾಮು ನಿರ್ಮಿಸಿದ್ದರು. ದೇವ್ರಾಜ್ ಕುಮಾರ್ ಎಂಬುವವರು ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ರೂಪೇಶ್ ಶೆಟ್ಟಿ, ರಮ್ಯಾ, ಉದಯ್, ವರ್ಧನ್ ಎಂಬ ಹೊಸಬರು ನಟಿಸಿದ್ದರು. ಈ ಚಿತ್ರ ಕಳೆದ ವರ್ಷ (2016) ಬಿಡುಗಡೆ ಆಗಿತ್ತು.


Click it and Unblock the Notifications











