12 ರಾಷ್ಟ್ರಪ್ರಶಸ್ತಿ ಗೆದ್ದ ಡೈರೆಕ್ಟರ್ ಇನ್ನಿಲ್ಲ
ಬಂಗಾಳದ ಖ್ಯಾತ ನಿರ್ದೇಶಕ ರಿತುಪರ್ಣೊ ಘೋಷ್ ಗುರುವಾರ ಬೆಳಗ್ಗೆ 7.30 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕೊಲ್ಕತ್ತಾದ ತಮ್ಮ ನಿವಾಸದಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದ ಅದ್ಭುತ ಪ್ರತಿಭೆಗೆ ಇನ್ನೂ 49 ವರ್ಷ ವಯಸ್ಸಾಗಿತ್ತು.
ಘೋಷ್ ಅವರು ಸುಮಾರು 19 ಚಿತ್ರಗಳನ್ನು ನಿರ್ದೇಶಿಸಿದ್ದು, ಇದರಲ್ಲಿ 12 ಚಿತ್ರಗಳು ರಾಷ್ಟ್ರ ಪ್ರಶಸ್ತಿ ಪಡೆದಿವೆ. 1994ರಲ್ಲಿ ಹಿರೆರ್ ಅಂಗ್ಟಿ (The diamond ring) ಮೂಲಕ ನಿರ್ದೇಶಕರಾದ ಘೋಷ್ ಅವರು ಇದೇ ವರ್ಷ ಉನ್ಶೆ(Unishe) ಎಪ್ರಿಲ್ ಚಿತ್ರ ನಿರ್ದೇಶಿಸಿದ್ದರು. ಇದಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿತ್ತು.
ದಹಾನ್, ಉತ್ಸವ್, ಚೊಖೆರ್ ಬಾಲಿ, ರೈನ್ ಕೋಟ್(ಹಿಂದಿ), ದೊಸೊರ್, ದ ಲಾಸ್ಟ್ ಲೆಯರ್, ಶೊಬ್ ಚರಿತ್ರೊ ಕಲ್ಪೊನಿಕ್ ಮತ್ತು ಅಬೊಹೊಮಾನ್ ಚಿತ್ರಗಳು ಎಲ್ಲರ ಮನ ಗೆದ್ದಿದೆ.
ಮೂರು ಚಿತ್ರಗಳಲ್ಲಿ ನಟನೆ ಕೂಡಾ ಮಾಡಿದ್ದ ಘೋಷ್ ಅವರು ಟಿವಿಯಲ್ಲಿ ಹಲವಾರು ಚರ್ಚಾ ಕೂಟ(ಟಾಕ್ ಶೋ)ಗಳನ್ನು ನಡೆಸಿಕೊಟ್ಟಿದ್ದಾರೆ. ಈ ಟಿವಿ ಬಾಂಗ್ಲಾ, ಸ್ಟಾರ್ ಜಲ್ಸಾ ಮುಂತಾದ ಚಾನೆಲ್ ಗಳಲ್ಲಿ ಘೋಷ್ ಶೋ ಜನಪ್ರಿಯತೆ ಪಡೆದಿತ್ತು.

ಆಸ್ಕರ್ ಪ್ರಶಸ್ತಿಗೆ ಭಾರತೀಯ ಚಿತ್ರಗಳನ್ನು ಆಯ್ಕೆ ಮಾಡುವ ಸಮಿತಿಯ ಸದಸ್ಯರ ವಿರುದ್ಧ ಘೋಷ್ ಕಿಡಿಕಾರಿದ್ದು ಉಂಟು. ಪ್ರಾದೇಶಿಕ ಪಕ್ಷಗಳಿಗೆ ಮಾನ್ಯತೆ ಸಿಗುತ್ತಿಲ್ಲ ಎಂದು ಪ್ರತಿಭಟಿಸಿದ್ದರು. 1995 ರಿಂದ 2012 ರ ತನಕ ಸುಮಾರು 12 ರಾಷ್ಟ್ರಪ್ರಶಸ್ತಿ ಹಾಗೂ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷ್ ಗೆದ್ದಿದ್ದಾರೆ.
ಜನಪ್ರಿಯ ಪತ್ತೇದಾರಿ ವ್ಯೋಮಕೇಶ್ ಭಕ್ಷಿ ಸಾಹಸಗಳನ್ನು ಆಧರಿಸಿದ 'ಸತ್ಯನ್ವೇಶಿ' ಎಂಬ ಹೆಸರಿನಲ್ಲಿ ಚಿತ್ರ ನಿರ್ಮಾಣದಲ್ಲಿ ಘೋಷ್ ತೊಡಗಿದ್ದರು.
ಘೋಷ್ ಅವರು ಟಾಟಾ ಕಂಪನಿಯಿಂದ ಸಿಂಗೂರು ಪ್ರದೇಶದ ರೈತರಿಗೆ ಅನ್ಯಾಯವಾದಾಗ ಸಿಡಿದೆದ್ದಿದ್ದರು. ವಿಭಿನ್ನ ವ್ಯಕ್ತಿತ್ವದ ಘೋಷ್ ಅವರು ತಮ್ಮ ತಾಯಿ ಸಾವಿನ ನಂತರ ತಮ್ಮ ಉಡುಗೆ ತೊಡುಗೆಗಳನ್ನು ಬದಲಾಯಿಸಿಕೊಂಡು ಹೆಂಗಳೆಯರ ರೀತಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡು ಚರ್ಚೆಗೊಳಗಾಗಿದ್ದರು. ಮಹೇಶ್ ಭಟ್, ಕೇಂದ್ರ ಸಚಿವ ಮನೀಶ್ ತಿವಾರಿ, ರಿಯಾ ಸೇನ್ ಸೇರಿದಂತೆ ಹಲವಾರು ಗಣ್ಯರು ಘೋಷ್ ಸಾವಿಗೆ ಕಂಬನಿ ಮಿಡಿದಿದ್ದಾರೆ.


Click it and Unblock the Notifications











