ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಎಫ್ಐಆರ್: ದೂರು ನೀಡಿದವರು ಯಾರು?
ಹುಚ್ಚ ವೆಂಕಟ್ ಮೇಲೆ ಶ್ರೀರಂಗಪಟ್ಟಣದಲ್ಲಿ ಹಲ್ಲೆ ನಡೆದಿದೆ. ಕೆಲವು ಯುವಕರು ಹುಚ್ಚ ವೆಂಕಟ್ ಅನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Recommended Video
ಕೆಲವು ದಿನಗಳಿಂದ ಶ್ರೀರಂಗಪಟ್ಟಣದಲ್ಲಿರುವ ಹುಚ್ಚ ವೆಂಕಟ್ ತಮ್ಮ ಎಂದಿನ ಸ್ಥಿಮಿತರಹಿತ ವರ್ತನೆಯಿಂದಾಗಿ ಕೆಲವು ಯುವಕರಿಂದ ಪೆಟ್ಟು ತಿಂದಿದ್ದರು.
ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿರುವುದನ್ನು ಹಿರಿಯ ನಟ ಜಗ್ಗೇಶ್, ದುನಿಯಾ ವಿಜಯ್ ಖಂಡಿಸಿದ್ದರು. ಸಾಧ್ಯವಾದರೆ ಆತನಿಗೆ ಸಹಾಯ ಮಾಡಿ, ಆದರೆ ಹಲ್ಲೆ ಮಾಡಬೇಡಿ ಎಂದು ಮನವಿ ಮಾಡಿದ್ದರು. ಇದರ ಹಿಂದೆಯೇ ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿದ ಯುವಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆ ಬಗ್ಗೆ ಪೂರ್ಣ ವಿವರ
ನಟ ಜಗ್ಗೇಶ್ ಅವರು ಎಫ್ಐಆರ್ ಪ್ರತಿಯನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಬುಧವಾರ ನಡೆದ ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಯೇ ಒಬ್ಬರು ಮಂಡ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಘಟನೆ ನಡೆದ ಬಗ್ಗೆ ಪೂರ್ಣವಾಗಿ ಎಫ್ಐಆರ್ನಲ್ಲಿ ವಿವರಿಸಿದ್ದಾರೆ.

ಉಮ್ಮಡಹಳ್ಳಿ ಗೇಟ್ನ ಕೂರ್ಗ್ ಟೀ ಸ್ಟಾಲ್ ಬಳಿ ಘಟನೆ
ಎಫ್ಐಆರ್ನಲ್ಲಿದ್ದಂತೆ, ಬುಧವಾರ ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿ ಗೇಟ್ನ ಕೂರ್ಗ್ ಟೀ ಅಂಗಡಿ ಬಳಿ ಕಾರು ನಿಲ್ಲಿಸಿದ ಹುಚ್ಚ ವೆಂಕಟ್ ಟೀ ಅಂಗಡಿಯಲ್ಲಿ ಐದು ಬಾರಿ ಟೀ ಕುಡಿದರಂತೆ. ಅಲ್ಲೇ ತಮ್ಮ ಕಾರಿಗೆ ಒರಗಿಕೊಂಡು ನಿಂತಿದ್ದ ಅವರ ಚಿತ್ರಗಳನ್ನು ಸಾರ್ವಜನಿಕರು ತೆಗೆದುಕೊಂಡರಂತೆ.

ಯುವಕರ ಗುಂಪೊಂದು ಹಲ್ಲೆ ನಡೆಸಿದೆ
ಸಂಜೆ 7 ಗಂಟೆ ವೇಳೆಗೆ ಬಂದ ಯುವಕರ ಗುಂಪೊಂದು 'ಲೋ ಹುಚ್ಚ ಟೀ ಅಂಗಡಿ ಬಳಿ ಏಕೆ ನಿಂತಿದ್ದೀಯಾ?' ಎಂದು ಕೇಳಿದ್ದಾರೆ. ಆಗ ಹುಚ್ಚ ವೆಂಕಟ್ ಗುಂಪಿನಲ್ಲಿದ್ದ ಒಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆಗ ಇಡೀಯ ಗುಂಪು ಹುಚ್ಚ ವೆಂಕಟ್ ಅನ್ನು ಕೆಡವಿ ಹೊಟ್ಟೆಗೆ, ತಲೆಗೆ ಹೊಡೆದು ಆತನನ್ನು ಅಲ್ಲಿಂದ ಓಡಿಸಿದ್ದಾರೆ.

ಟೀ ಅಂಗಡಿ ಮಾಲೀಕರೇ ಕೊಟ್ಟಿರುವ ದೂರು
ಈ ದೂರನ್ನು ಹುಚ್ಚ ವೆಂಕಟ್ ಐದು ಬಾರಿ ಟೀ ಕುಡಿದ ಅಂಗಡಿ ಮಾಲೀಕರಾದ ಅಕ್ರಂ ಪಾಷಾ ಎಂಬುವರೇ ನೀಡಿದ್ದಾರೆ. ಅಕ್ರಂ ಪಾಷಾ ಅವರು ಘಟನೆ ನಡೆದ ಎರಡು ದಿನಗಳ ಬಳಿಕ ಅಂದರೆ ಜೂನ್ 12 ರಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಲ್ಲೆ ಮಾಡಿದ ಯುವಕರ ಹೆಸರು, ವಿಳಾಸ ತಿಳಿಯದೆಂದು ದೂರಿನಲ್ಲಿ ನಮೂದಿಸಿದ್ದಾರೆ.

ಯುವಕರನ್ನು ಬಂಧಿಸುವ ಸಾಧ್ಯತೆ
ಜಗ್ಗೇಶ್, ದುನಿಯಾ ವಿಜಯ್ ಮತ್ತೆ ಕೆಲವರು ಮಾನಸಿಕ ಅಸ್ವಸ್ಥ ಹುಚ್ಚ ವೆಂಕಟ್ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿದ ಬೆನ್ನಲ್ಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ಮಾಡಿದ ಯುವಕರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.


Click it and Unblock the Notifications











