ಮಣಿರತ್ನಂ ಸೇರಿದಂತೆ, ಮೋದಿ ವಿರುದ್ದ ಮಾತನಾಡಿದ್ದ 49 ಗಣ್ಯರ ವಿರುದ್ಧ FIR
ದೇಶದಲ್ಲಿ ಕೋಮು ಗಲಭೆ, ಗುಂಪು ಹತ್ಯೆ ನಿಲ್ಲಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ನಿರ್ದೇಶಕ ಮಣಿರತ್ನಂ, ಅನುರಾಗ್ ಕಶ್ಯಪ್, ಅಪರ್ಣ ಸೇನ್, ಬರಹಗಾರ ರಾಮಚಂದ್ರ ಗುಹಾ, ಸೇರಿದಂತೆ 49 ಗಣ್ಯರು ಪತ್ರ ಬರೆದಿದ್ದರು. ಇದೀಗ ಇವರ ವಿರುದ್ಧ FIR ದಾಖಲಾಗಿದೆ.
''ಪ್ರಧಾನಿ ಮೋದಿ ಉತ್ತಮ ಕಾರ್ಯ ಮಾಡುತ್ತಿದ್ದರೂ, ಉದ್ದೇಶ ಪೂರ್ವಕವಾಗಿ ದೇಶದ ಏಕತೆ ಮತ್ತು ಸಮಗ್ರತೆ ಧಕ್ಕೆ ತರಲು ಪತ್ರ ಬರೆದಿದ್ದಾರೆ.'' ಎಂದು ಆರೋಪಿಸಿ ವಕೀಲ ಸುಂದರ್ ಕುಮಾರ್ ಓಜಾ ಸದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಾಟ್ಲಾ ಜಿಲ್ಲೆಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಆಗಸ್ಟ್ 20 ರಂದು ಅರ್ಜಿಯನ್ನು ಪರಿಗಣಿಸಿ ಎಫ್ ಐ ಆರ್ ದಾಖಲು ಮಾಡಲು ಅನುಮತಿ ನೀಡಿದರು. ಹೀಗಾಗಿ ಎರಡು ತಿಂಗಳ ಬಳಿಕ 49 ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.

ನಿರ್ದೇಶಕ ಮಣಿರತ್ನಂ, ಅನುರಾಗ್ ಕಶ್ಯಪ್, ಅಪರ್ಣ ಸೇನ್, ನಟಿ ಸೌಮಿತ್ರಾ ಚಟರ್ಜಿ, ಶ್ಯಾಮ್ ಬೆನಗಲ್, ಬರಹಗಾರ, ಇತಿಹಾಸ ತಜ್ಞ ರಾಮಚಂದ್ರ ಗುಹಾ, ಶುಭಾ ಮುದ್ಗಲ್ ಈ 49 ಗಣ್ಯರ ಪೈಕಿ ಪ್ರಮುಖರಾಗಿದ್ದಾರೆ.

ಕಳೆದ ಜುಲೈನಲ್ಲಿ ಗುಂಪು ಹತ್ಯೆಗಳು, ಕೋಮು ಗಲಭೆಗಳ ವಿರುದ್ಧ ಪತ್ರ ಬರೆಯಲಾಗಿತ್ತು. ಇದರಲ್ಲಿ 'ಜೈ ಶ್ರೀರಾಮ್' ಎನ್ನುವ ಘೋಷವು ಇಂದು ಹಿಂಸಾಚಾರ, ಶೋಕದ ಮೂಲಮಂತ್ರವೆನಿಸಿದೆ. ಹೆಮ್ಮೆಯ ಭಾರತೀಯರೂ ಶಾಂತಿಪ್ರಿಯರೂ, ಆಗಿರುವ ನಮ್ಮಲ್ಲಿ, ನಮ್ಮ ಪ್ರೀತಿಯ ಭಾರತದಲ್ಲಿ ಧರ್ಮಾಧಾರಿತ ಹಿಂಸಾಚಾರಗಳು ಆತಂಕ ಸೃಷ್ಟಿಸಿವೆ. ಮುಸ್ಲಿಮರು, ದಲಿತರು, ಇತರೆ ಅಲ್ಪಸಂಖ್ಯಾತರ ಹತ್ಯೆಗಳು ಹೆಚ್ಚಾಗುತ್ತಿದ್ದು, ಇವುಗಳು ನಿಲ್ಲಲೇಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿತ್ತು.


Click it and Unblock the Notifications











