ನಟಿ ಲೀಲಾವತಿ ತೋಟಕ್ಕೆ ಬೆಂಕಿ: ಅಪಾರ ಪ್ರಮಾಣದಲ್ಲಿ ನಷ್ಟ.!
ಹಿರಿಯ ನಟಿ ಲೀಲಾವತಿ ಅವರ ತೋಟದಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡಿದೆ. ನೆಲಮಂಗಲ ತಾಲೂಕು ಮೈಲಹಳ್ಳಿ ಸಮೀಪದಲ್ಲಿ ಇರುವ ತೋಟದಲ್ಲಿ ನಿನ್ನೆ ಮಧ್ಯಾಹ್ನ ದಿಢೀರನೆ ಬೆಂಕಿ ಹೊತ್ತಿಕೊಂಡಿದೆ.
ತೋಟಕ್ಕೆ ಬೆಂಕಿ ತಗುಲಿದ್ದು ಅರಿವಿಗೆ ಬರುತ್ತಿದ್ದಂತೆಯೇ, ವಿನೋದ್ ರಾಜ್ ಬೆಂಕಿ ನಂದಿಸಲು ಪ್ರಯತ್ನಿಸಿದರು. ಸಹಾಯಕ್ಕಾಗಿ ಕೆಲವರಿಗೆ ಫೋನ್ ಮಾಡಿದರು. ವಿನೋದ್ ರಾಜ್ ಮತ್ತು ಸ್ನೇಹಿತರು ತೋಟದಲ್ಲಿ ಬೆಂಕಿ ಆರಿಸಲು ಹರಸಾಹಸ ಪಟ್ಟರು.
ಇಡೀ ತೋಟದಲ್ಲಿ ವ್ಯಾಪಕವಾಗಿ ಬೆಂಕಿ ಆವರಿಸಿಕೊಂಡ ಪರಿಣಾಮ, 20ಕ್ಕೂ ಹೆಚ್ಚು ತೆಂಗಿನ ಮರ, ಮಾವು, ಸಪೋಟ ಮುಂತಾದ ಮರ-ಗಿಡಗಳು ಸುಟ್ಟು ಭಸ್ಮವಾಗಿವೆ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಪ್ರೀತಿಯಿಂದ ಬೆಳೆಸಿದ ತೋಟ ಬೆಂಕಿಗೆ ಆಹುತಿಯಾಗಿದ್ದರಿಂದ ಲೀಲಾವತಿ ಕಣ್ಣೀರಿಟ್ಟಿದ್ದಾರೆ.

ಅಸಲಿಗೆ, ನಟಿ ಲೀಲಾವತಿ ಮತ್ತು ವಿನೋದ್ ರಾಜ್ ವಾಸವಾಗಿರುವುದು ಇದೇ ತೋಟದ ಮನೆಯಲ್ಲಿ. ಲೀಲಾವತಿ ತೋಟಕ್ಕೆ ಬೆಂಕಿ ಬಿದ್ದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ತೋಟಕ್ಕೆ ಬೆಂಕಿ ಬಿದ್ದಿದೆ. ಲೀಲಾವತಿ ಮತ್ತು ವಿನೋದ್ ರಾಜ್ ಗೆ ನಷ್ಟ ಉಂಟು ಮಾಡಲು ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ.? ಎಂಬ ಪ್ರಶ್ನೆ ಹಲವರಿಗೆ ಕಾಡುತ್ತಿದೆ.


Click it and Unblock the Notifications











