'ಕೆಜಿಎಫ್ 2' ಸಿನಿಮಾ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಕಮೀಷನರ್ ಭಾಸ್ಕರ್ ರಾವ್
'ಕೆಜಿಎಫ್ 2' ಸಿನಿಮಾ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಸಿನಿಮಾ ನೋಡಿದವರೆಲ್ಲ ಅದ್ಭುತ ಎಂದಿದ್ದಾರೆ. ಅಭಿಮಾನಿಗಳು ಮಾತ್ರವೇ ಅಲ್ಲದೆ, ಚಿತ್ರರಂಗದ ಗಣ್ಯರು, ಸಿನಿಮಾ ವಿಧ್ಯಾರ್ಥಿಗಳು ಕೆಲವು ರಾಜಕಾರಣಿಗಳು ಸಹ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಆದರೆ ಬೆಂಗಳೂರಿನ ಮಾಜಿ ಕಮೀಷನರ್ ಭಾಸ್ಕರ್ ರಾವ್ 'ಕೆಜಿಎಫ್ 2' ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಭಾಸ್ಕರ್ ರಾವ್, 'ಕೆಜಿಎಫ್ 2' ಸೇರಿದಂತೆ ರೌಡಿಸಂ ಸಿನಿಮಾಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಕೆಜಿಎಫ್ 2' ಸಿನಿಮಾದಲ್ಲಿ ಕ್ರಿಮಿನಲ್ ಒಬ್ಬ ನಾಯಕನಾಗಿದ್ದಾನೆ ಎಂಬ ಬಗ್ಗೆ ಮಾತನಾಡಿರುವ ಭಾಸ್ಕರ್ ರಾವ್, ''ನಾನು ಆ ಸಿನಿಮಾವನ್ನು ಒಪ್ಪುವುದಿಲ್ಲ. ಜನರಿಗೆ ಏನು ಸಂದೇಶ ಕೊಡಬೇಕೆಂದು ಹೊರಟಿದ್ದೀರಿ ನೀವು. ರೌಡಿಸಂ ಲಾಭದಾಯಕ ದಂಧೆ ಎಂದು ತೋರಿಸಬೇಕು ಎಂದುಕೊಂಡಿದ್ದೀರ?'' ಎಂದು ಭಾಸ್ಕರ್ ರಾವ್ ಪ್ರಶ್ನೆ ಮಾಡಿದ್ದಾರೆ.
''ನಾನು ಬೆಂಗಳೂರು ಜಿಲ್ಲೆಯಲ್ಲಿ ಎಸ್ಪಿ ಆಗಿ ಕೆಲಸ ಮಾಡುತ್ತಿದ್ದಾಗ ದಂಡುಪಾಳ್ಯ ಬಾಚಿನವರ ಹಾವಳಿ ಜಾಸ್ತಿ ಇತ್ತು. ನಂತರ ಬೆಂಗಳೂರು ರೇಂಜ್ ಐಜಿ ಆಗಿರುವಾಗ ಯಾರೊ 'ದಂಡುಪಾಳ್ಯ' ಸಿನಿಮಾ ಮಾಡಿ ಅದನ್ನು ನೋಡಲು ಆಹ್ವಾನಿಸಿದ್ದರು. ನಾನು ತಂಡವನ್ನು ಕರೆದುಕೊಂಡು ಹೋಗಿದ್ದೆ. ಸಿನಿಮಾ ನೋಡುವಾಗಲೆ ದೊಡ್ಡಬಳ್ಳಾಪುರದಲ್ಲಿ ಯಾರೊ ಇಬ್ಬರು 'ದಂಡುಪಾಳ್ಯ' ಸಿನಿಮಾದಲ್ಲಿ ಕೊಲೆ ಮಾಡುವ ರೀತಿಯಲ್ಲಿಯೇ ಕೊಲೆ ಮಾಡಿದ್ದಾರೆ ಎಂದರು'' ಎಂದು ನೆನಪು ಮಾಡಿಕೊಂಡರು ಭಾಸ್ಕರ್ ರಾವ್.

ಸಾಧನೆಗಳನ್ನು ತೋರಿಸಿ, ರೌಡಿಸಂ ಅನ್ನಲ್ಲ: ಭಾಸ್ಕರ್ ರಾವ್
''ರೌಡಿಸಂ ತೋರಿಸುವ ನೀವು ಏನು ಸಂದೇಶ ಕೊಡುತ್ತೀರಿ. ಇನ್ನಷ್ಟು ರೌಡಿಗಳನ್ನೇ ಸೃಷ್ಟಿಸುತ್ತೀರಿ. ಸಾಧನೆಗಳನ್ನು ತೋರಿಸಿ. ಎಷ್ಟು ಜನ ಬಡ ಕುಟುಂಬದಿಂದ ಬಂದು ಸಾಧಕರಾಗಿದ್ದಾರೆ. ವೈದ್ಯರಾಗಿದ್ದಾರೆ, ಪೊಲೀಸರಾಗಿದ್ದಾರೆ, ಸಮಾಜದಲ್ಲಿ ಬದಲಾವಣೆ ತಂದಿದ್ದಾರೆ. ಅಂಥಹುದ್ದನ್ನು ತೋರಿಸಿ ಅದು ಬಿಟ್ಟು ರೌಡಿಸಂ ತೋರಿಸಿ, ಸಮಾಜದಲ್ಲಿ ಕ್ರೌರ್ಯ ಹುಟ್ಟುಹಾಕುತ್ತಿದ್ದೀರಲ್ಲ'' ಎಂದರು ಭಾಸ್ಕರ್ ರಾವ್.

''ನಿಮ್ಮ ಹೀರೋ ಪಾಪ್ಯುಲರ್ ಆಗಿರಬಹುದು, ಆದ್ರೆ ನಾನು ಒಪ್ಪಲ್ಲ''
''ನಿಮ್ಮ ಸಿನಿಮಾ ಜನಪ್ರಿಯವಾಗಿರಬಹುದು, ನಿಮ್ಮ ಹೀರೋ ಪಾಪ್ಯುಲರ್ ಇರಬಹುದು ಆದರೆ ನಾನಂತೂ ರೌಡಿಸಂ ಸಿನಿಮಾಗಳನ್ನು ಒಪ್ಪುವುದಿಲ್ಲ. ಅಭಿಮಾನಿ ಸಂಘಗಳಿಗೂ ನಾನು ಮನವಿ ಮಾಡುತ್ತೇನೆ. ಇಂಥಹಾ ಸಿನಿಮಾಗಳನ್ನು ನೋಡಬೇಡಿ, ನೀವು ಸಹ ಹಾಳಾಗುತ್ತೀರ. ಗಡ್ಡ ಬಿಟ್ಟುಕೊಂಡು, ದೈತ್ಯ ದೇಹ ಇಟ್ಟುಕೊಂಡು, ರಕ್ತ ಮೆಚ್ಚಿದ ಮೈಗಳನ್ನು ತೋರಿಸಿಕೊಂಡು ಏನು ಹೇಳಲು ಹೊರಟಿದ್ದೀರ'' ಎಂದು ಭಾಸ್ಕರ್ ರಾವ್ ಪ್ರಶ್ನೆ ಮಾಡಿದ್ದಾರೆ.

ನಾವು ಕಲಿಯುವಂಥಹಾ ಸಿನಿಮಾ ಮಾಡಿ: ಭಾಸ್ಕರ್ ರಾವ್
''ಮಲಯಾಳಂ ಸಿನಿಮಾ ನೋಡುತ್ತೇವೆ ಕಾರಣ ಏನೋ ಒಂದು ಕತೆ ಇರುತ್ತೆ, ತಮಿಳು ಸಿನಿಮಾಗಳಲ್ಲಿಯೂ ಕತೆ ಇರುತ್ತೆ, ಯಾವುದೋ ಹಗರಣದ ಬಗ್ಗೆ ಕತೆ ಮಾಡಿರುತ್ತಾರೆ. ವ್ಯಕ್ತಿಯ ಬಗ್ಗೆ ಕತೆ ಮಾಡಿರುತ್ತಾರೆ. ನೀವು ಮಾಡಿ ಯಾವುದೋ ಪ್ರಕರಣದ ತನಿಖೆ ಮಾಡಿ ಸಿನಿಮಾ ಮಾಡಿ, ಹಗರಣಗಳನ್ನು ಎಕ್ಸ್ಪೋಸ್ ಮಾಡಿ. ಸಿನಿಮಾ ನೋಡಿದರೆ ನಾವು ಏನಾದರೂ ಕಲಿಯುವ ಹಾಗಿರಬೇಕು. ಅದನ್ನು ಬಿಟ್ಟು ರೌಡಿಸಂ ಮಾಡಿ ಎಂದು ಹೇಳಿಕೊಡುವುದು ಸರಿಯಲ್ಲ'' ಎಂದಿದ್ದಾರೆ ಭಾಸ್ಕರ್ ರಾವ್.

'ಗೆಹರಾಹಿಯಾ' ಸಿನಿಮಾ ಬಗ್ಗೆಯೂ ಅಸಮಾಧಾನ
ಭಾಸ್ಕರ್ ರಾವ್ ಸ್ವತಃ ಸಿನಿಮಾ ಪ್ರೇಮಿ, ಈ ಹಿಂದೆ ದೀಪಿಕಾ ಪಡುಕೋಣೆ ನಟನೆಯ 'ಗೆಹರಾಹಿಯಾ' ಸಿನಿಮಾ ಬಿಡುಗಡೆ ಆಗಿದ್ದಾಗ ಆ ಸಿನಿಮಾದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಬೆಂಗಳೂರು ಹುಡುಗಿ ದೀಪಿಕಾಗೆ ಟ್ವೀಟ್ ಮೂಲಕ ಬುದ್ಧಿವಾದವನ್ನೂ ಹೇಳಿದ್ದಾರೆ. ಸೇವೆಯಿಂದ ನಿವೃತ್ತರಾಗಿರುವ ಭಾಸ್ಕರ್ ರಾವ್ ಇತ್ತೀಚೆಗಷ್ಟೆ ಆಮ್ ಆದ್ಮಿ ಪಕ್ಷವನ್ನು ಸೇರಿಕೊಂಡಿದ್ದಾರೆ.


Click it and Unblock the Notifications











