ಅಜಯ್ ದೇವಗನ್ ಟ್ವೀಟ್ಗೆ ಸಿದ್ದರಾಮಯ್ಯ ಖಡಕ್ ಪ್ರತ್ಯುತ್ತರ
ಹಿಂದಿ ಭಾಷೆ ಕುರಿತು ಸುದೀಪ್ ಮಾಡಿರುವ ಟ್ವೀಟ್ಗೆ ಪ್ರತಿಯಾಗಿ ಅಜಯ್ ದೇವಗನ್ ಮಾಡಿರುವ ಟ್ವೀಟ್ ಕನ್ನಡಿಗರ ಒಕ್ಕೂರಲ ಆಕ್ರೋಶಕ್ಕೆ ಗುರಿಯಾಗಿದೆ.
ಆಗಿದ್ದಿಷ್ಟು, ಉಪೇಂದ್ರ ನಟಿಸುತ್ತಿರುವ 'R' ಸಿನಿಮಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುದೀಪ್, ''ಕನ್ನಡದ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಎನ್ನಬೇಡಿ, ಹಿಂದಿ ರಾಷ್ಟ್ರಭಾಷೆಯಾಗಿ ಉಳಿದಿಲ್ಲ. ಬಾಲಿವುಡ್ನವರು ಹೇಳಬೇಕು ನಾವು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದೇವೆ ಎಂದು. ತೆಲುಗು, ತಮಿಳಿಗೆಲ್ಲ ಡಬ್ ಮಾಡಿ ಏನೇನೋ ಸಾಹಸ ಮಾಡುತ್ತಿದ್ದಾರೆ ಆದರೆ ಯಾವುದೂ ಸಹ ವರ್ಕ್ ಆಗುತ್ತಿಲ್ಲ ಬಹಳ ಕಷ್ಟಪಡುತ್ತಿದ್ದಾರೆ. ಆದರೆ ಪ್ಯಾನ್ ಇಂಡಿಯಾ ಸಿನಿಮಾ ಎಂಬುದು ಹಿಂದಿ ಸಿನಿಮಾ, ನಮ್ಮದಲ್ಲ, ನಾವು ಕೇವಲ ಸಿನಿಮಾ ಮಾಡುತ್ತಿದ್ದೇವೆ, ಅದು ವಿಶ್ವದೆಲ್ಲೆಡೆ ರೀಚ್ ಆಗುತ್ತಿದೆ'' ಎಂದಿದ್ದರು.
ಹಿಂದಿ ರಾಷ್ಟ್ರಭಾಷೆ ಅಲ್ಲ ಎಂಬ ಸತ್ಯವನ್ನೇ ಸುದೀಪ್ ಹೇಳಿದ್ದರು. ಆದರೆ ಇದರಿಂದ ಅಸಮಾಧಾನಗೊಂಡ ಬಾಲಿವುಡ್ನ ಸ್ಟಾರ್ ನಟ ಅಜಯ್ ದೇವಗನ್, ''ಸಹೋದರ ಸುದೀಪ್, ನಿಮ್ಮ ಅನುಸಾರ ಹಿಂದಿ ರಾಷ್ಟ್ರಭಾಷೆ ಅಲ್ಲದೇ ಇದ್ದರೆ ನೀವೇಕೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಹಾಗೂ ರಾಷ್ಟ್ರಭಾಷೆ ಆಗಿತ್ತು, ಮುಂದೆಯೂ ಆಗಿರುತ್ತದೆ'' ಎಂದಿದ್ದರು. ಇದು ಕನ್ನಡಿಗರನ್ನು ಕೆರಳಿಸಿದೆ.

ಈ ಬಗ್ಗೆ ಕನ್ನಡ ಚಿತ್ರರಂಗದ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ ಸುದೀಪ್ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಹಿಂದಿಯನ್ನು ರಾಷ್ಟ್ರಭಾಷೆ ಎಂದ ಅಜಯ್ ದೇವಗನ್ ಮಾತನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಅಜಯ್ ದೇವಗನ್ ಟ್ವೀಟ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ''ಹಿಂದಿ ಎಂದೂ ನಮ್ಮ ರಾಷ್ಟ್ರಭಾಷೆ ಆಗಿರಲಿಲ್ಲ, ಮುಂದೆಯೂ ಅದು ರಾಷ್ಟ್ರಭಾಷೆ ಆಗುವುದಿಲ್ಲ. ಭಾರತದ ಭಾಷಾ ವೈವಿಧ್ಯವನ್ನು ಗೌರವಿಸುವುದು ಎಲ್ಲ ಭಾರತೀಯರ ಕರ್ತವ್ಯ. ಪ್ರತಿ ಭಾಷೆಯೂ ಅದರದ್ದೇ ಆದ ಸಮೃದ್ಧ ಇತಿಹಾಸವನ್ನು ಹೊಂದಿದೆ, ಇದೇ ಕಾರಣಕ್ಕೆ ಆ ಭಾಷೆ ಮಾತನಾಡುವ ಜನ ತಮ್ಮ ಭಾಷೆಯ ಬಗ್ಗೆ ಹೆಮ್ಮೆ ಬೆಳೆಸಿಕೊಂಡಿರುತ್ತಾರೆ. ನಾನು ಕನ್ನಡಿಗನಾಗಿರಲು ಬಹಳ ಹೆಮ್ಮೆ ಪಡುತ್ತೇನೆ'' ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಕನ್ನಡ ಪ್ರೇಮದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. ಕನ್ನಡ ಭಾಷೆಯ ವಿಚಾರ ಬಂದಾಗ ಪ್ರತಿಭಾರಿಯೂ ಸಿದ್ದರಾಮಯ್ಯ ಭಾಷೆಯ ಪರವಾಗಿ ಪ್ರತಿಕ್ರಿಯಿಸಿದ್ದಾರೆ. ಭಾಷೆಯ ಮೇಲೆ ಉತ್ತಮ ಹಿಡಿತವನ್ನೂ ಹೊಂದಿರುವ ಸಿದ್ದರಾಮಯ್ಯ ಹಲವು ಬಾರಿ ಸದನದಲ್ಲಿ ಕನ್ನಡ ವ್ಯಾಕರಣದ ಪಾಠ ಮಾಡಿದ ಉದಾಹರಣೆಯೂ ಇದೆ.
ಹಿಂದಿ ಹೇರಿಕೆಯನ್ನು ಸಹ ಸಿದ್ದರಾಮಯ್ಯ ಬಹು ಕಾಲದಿಂದ ವಿರೋಧಿಸುತ್ತಲೇ ಬಂದಿದ್ದಾರೆ, ಅದಕ್ಕೊಂದು ಉತ್ತಮ ಉದಾಹರಣೆಯೆಂದರೆ 2018 ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ಆಗಿದ್ದ ಮುರಳಿಧರ ರಾವ್ ಅವರು ಸಿದ್ದರಾಮಯ್ಯ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿ ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ''ಕನ್ನಡದಲ್ಲಿ ಕೇಳಿ, ನನಗೆ ಹಿಂದಿ ಬರುವುದಿಲ್ಲ'' ಎಂದಿದ್ದರು. ನಂತರ ಮುರಳೀಧರ ರಾವ್ ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದರು, ಆಗಷ್ಟೆ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ್ದರು ಸಿದ್ದರಾಮಯ್ಯ.


Click it and Unblock the Notifications











