ದರ್ಶನ್ 'ಮದಕರಿ ನಾಯಕ' ಚಿತ್ರಕ್ಕೆ ಶಕ್ತಿ ತುಂಬಿದ್ದು ಆ 'ನಾಲ್ವರು'
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ 'ರಾಜವೀರ ಮದಕರಿ ನಾಯಕ' ಸಿನಿಮಾ ಡಿಸೆಂಬರ್ 6 ಅಧಿಕೃತವಾಗಿ ಸೆಟ್ಟೇರಿತ್ತು. ರಾಕ್ಲೈನ್ ವೆಂಕಟೇಶ್ ಈ ಚಿತ್ರ ನಿರ್ಮಿಸುತ್ತಿದ್ದು, ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ.
ರಾಕ್ಲೈನ್ ದುಡ್ಡು ಹಾಕುತ್ತಿದ್ದಾರೆ, ರಾಜೇಂದ್ರ ಸಿಂಗ್ ಬಾಬು ಡೈರೆಕ್ಷನ್ ಮಾಡ್ತಾರೆ, ಡಿ ಬಾಸ್ ಆಕ್ಟಿಂಗ್ ಮಾಡ್ತಾರೆ ಎನ್ನುವುದನ್ನು ಬಿಟ್ಟು ರಾಜವೀರ ಮದಕರಿ ನಾಯಕ ಚಿತ್ರದ ಬಗ್ಗೆ ಸ್ವಲ್ಪ ಆಳವಾಗಿ ಇಳಿದಾಗ ನಾಲ್ಕು ಪ್ರಮುಖ ವ್ಯಕ್ತಿಗಳು ಕಣ್ಣಿಗೆ ಬೀಳುತ್ತಾರೆ.
ದರ್ಶನ್, ರಾಕ್ಲೈನ್ ವೆಂಕಟೇಶ್ ಬಿಟ್ಟು ಈ ನಾಲ್ಕು ಜನರು ಮದಕರಿ ನಾಯಕ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ಕೆಲಸ ಮಾಡಿದ್ದಾರೆ. ಇವರಿಂದಲೇ ಈ ಸಿನಿಮಾ ಮತ್ತಷ್ಟು ರೋಚಕತೆ ಹಾಗೂ ಶಕ್ತಿಯುತವಾಗಿ ಕಾಣಿಸುತ್ತಿದೆ. ಅಷ್ಟಕ್ಕೂ ಯಾರು ಆ ನಾಲ್ವರು? ಮುಂದೆ ಓದಿ....

ಬಿಎಲ್ ವೇಣು
ಕನ್ನಡದ ಖ್ಯಾತ ಬರಹಗಾರ, ಕಾದಂಬರಿಕಾರ ಬಿಎಲ್ ವೇಣು. ಬಿಎಲ್ ವೇಣು ಅವರು ರಚಿಸಿರುವ 'ಗಂಡುಗಲಿ ಮದಕರಿ ನಾಯಕ' ಕಾದಂಬರಿ ಆಧರಿತವಾಗಿಯೇ 'ರಾಜವೀರ ಮದಕರಿ ನಾಯಕ' ಸಿನಿಮಾ ಮಾಡಲಾಗುತ್ತಿದೆ. ಈಗಾಗಲೇ ಇವರು ಬರೆದಿರುವ ಬೆತ್ತಲೆ ಸೇವೆ, ಪರಾಜಿತ, ಪ್ರೇಮಪರ್ವ, ಅಜೇಯ, ಪ್ರೀತಿ ವಾತ್ಸಲ್ಯ, ಪ್ರೇಮಜಾಲ, ಕಲ್ಲರಳಿ ಹೂವಾಗಿ ಕಾದಂಬರಿಗಳು ಸಿನಿಮಾ ಆಗಿವೆ. ಈಗ ಮದಕರಿ ನಾಯಕನ ಸರದಿ. ಈ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ಬಿಎಲ್ ವೇಣು ಅವರು ಬಹುದೊಡ್ಡ ಪಾತ್ರವಹಿಸಿದ್ದಾರೆ.

ಹಿರಿಯ ನಟ ದೊಡ್ಡಣ್ಣ
ರಾಜವೀರ ಮದಕರಿ ನಾಯಕ ಚಿತ್ರವನ್ನ ಮಾಡಬೇಕು ಎಂದು ಒಂದೇ ಕಾಲಿನಲ್ಲಿ ನಿಂತಿದ್ದರಂತೆ ದೊಡ್ಡಣ್ಣ. ಈ ಸಿನಿಮಾದಲ್ಲಿ ನಾನು ಯಾವ ಪ್ರೊಡಕ್ಷನ್ ಹುಡುಗನಾಗಿ ಕೂಡ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರಂತೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ, ಸಂಶೋಧನೆಯಲ್ಲಿ ಹಿರಿಯ ನಟ ದೊಡ್ಡಣ್ಣ ಅವರ ಪಾತ್ರ ಹೆಚ್ಚಿದೆ. ಚಿತ್ರದುರ್ಗದ ಸುತ್ತಮುತ್ತಲಿನ ಇತಿಹಾಸಕಾರರನ್ನು ಭೇಟಿ ಮಾಡಿ, ಮದಕರಿ ನಾಯಕ ಕುರಿತು ಆಳವಾಗಿ ಅಧ್ಯಯನ ಮಾಡುವಲ್ಲಿ ದೊಡ್ಡಣ್ಣ ಸಹಕಾರಿಯಾಗಿದ್ದಾರೆ. ಈ ಸಿನಿಮಾದ ಮೊದಲ ಪುಟದಿಂದಲೂ ದೊಡ್ಡಣ್ಣ ಜೊತೆಗಿದ್ದಾರೆ. ವಿಶೇಷ ಅಂದ್ರೆ ಒಂದು ಪಾತ್ರವನ್ನು ಕೂಡ ದೊಡ್ಡಣ್ಣ ಮಾಡಲಿದ್ದಾರೆ.

ಶ್ರೀನಿವಾಸ ಮೂರ್ತಿ
ಮದಕರಿ ನಾಯಕ ಚಿತ್ರಕ್ಕೆ ಅಡಿಪಾಯ ಹಾಕಿದ್ದೇ ಶ್ರೀನಿವಾಸ ಮೂರ್ತಿ. ಈ ಚಿತ್ರ ನಿರ್ಮಾಣದಲ್ಲಿ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರ ಸಹಕಾರ ದೊಡ್ಡದಿದೆ. ಕುರುಕ್ಷೇತ್ರ ಸಮಯದಲ್ಲಿ ರಾಕ್ಲೈನ್ ಅವರು ಈ ರೀತಿ ಒಂದು ಸಿನಿಮಾ ಮಾಡೋಣ ಎಂದು ಚರ್ಚಿಸುತ್ತಿರುವಾಗ, ಅವರಿಗೆ ಮದಕರಿ ನಾಯಕ ಕಥೆ ಸಲಹೆ ನೀಡಿದ್ದು ಇದೇ ಶ್ರೀನಿವಾಸ ಮೂರ್ತಿ. ಅಲ್ಲಿಂದ ಇಲ್ಲಿಯವರೆಗೂ ಚಿತ್ರತಂಡದ ಜೊತೆ ನಿಂತ, ಚಿತ್ರಕಥೆ ಮಾಡಿ ಮುಗಿಸಿದ್ದಾರೆ. ಸಿನಿಮಾದಲ್ಲೂ ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ.

ಎಸ್ ವಿ ರಾಜೇಂದ್ರ ಸಿಂಗ್ ಬಾಬು
ಕನ್ನಡದ ಹಿರಿಯ ಹಾಗೂ ಯಶಸ್ವಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಈ ಹಿಂದೆ ಎರಡು ಸಲ ಮದಕರಿ ನಾಯಕನ ಚಿತ್ರಕ್ಕೆ ಕೈ ಹಾಕಿ, ಹಿಂದೆ ಸರಿದಿದ್ದರು. ಈಗ, ಮೂರನೇ ಸಲ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಮದಕರಿ ನಾಯಕ ಚಿತ್ರದ ಕ್ಯಾಪ್ಟನ್ ಆಗಿರುವ ಬಾಬು ಅವರ ಅನುಭವ ಈ ಚಿತ್ರಕ್ಕೆ ಹೆಚ್ಚಿನ ಸಹಕಾರಿಯಾಗಲಿದೆ. ಮದಕರಿ ನಾಯಕನ ಬಗ್ಗೆ ಬಹಳ ತಿಳಿದುಕೊಂಡಿರುವ ವ್ಯಕ್ತಿಯೂ ಇವರಾಗಿರುವುದರಿಂದ ಸಿನಿಮಾ ಚೆನ್ನಾಗಿ ಬರುತ್ತೆ ಎಂಬ ಕುತೂಹಲ ಇದೆ.


Click it and Unblock the Notifications











