ರೂಪಾ ಅಯ್ಯರ್ 'ಚಂದ್ರ' ಚಿತ್ರಕ್ಕೆ ನಟ ಗಣೇಶ ಬಂದ
ತಮಿಳು ಚಿತ್ರರಂಗದ ನಟ ಗಣೇಶ್ ವೆಂಕಟರಾಮನ್ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರು ಈ ಹಿಂದೆಯೇ ಕನ್ನಡಕ್ಕೆ ಎಂಟ್ರಿ ಕೊಡಬೇಕಿತ್ತು. ಪ್ರಕಾಶ್ ರೈ ಚೊಚ್ಚಲ ನಿರ್ದೇಶನದ ಕನ್ನಡ ಚಿತ್ರ 'ನಾನು ನನ್ನ ಕನಸು' ಚಿತ್ರದಲ್ಲೇ ಅವರ ಆಗಮನ ನಿರೀಕ್ಷಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಆ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಾಗಿರಲಿಲ್ಲ.
ಈಗ ಕಾಲ ಕೂಡಿಬಂದಿದೆ ಅನ್ನಿಸುತ್ತದೆ. ರೂಪಾ ಅಯ್ಯರ್ ನಿರ್ದೇಶದನ ಚಂದ್ರ ಚಿತ್ರದಲ್ಲಿ ಗಣೇಶ್ ವೆಂಕಟರಾಮನ್ ಅಮೆರಿಕ ಮೂಲದ ಯುವಕನಾಗಿ ಕಾಣಿಸಲಿದ್ದಾರೆ. ಚಿತ್ರದ ನಾಯಕ ನಟ ಲವ್ಲಿ ಸ್ಟಾರ್ ಪ್ರೇಮ್ ಜೊತೆ ಮತ್ತೊಬ್ಬ ನಾಯಕನಟನಾಗಿ ಅಭಿನಯಿಸುತ್ತಿರುವ ಬಗ್ಗೆ ಗಣೇಶ್ಗೆ ಏನೂ ಬೇಸರವಿಲ್ಲವಂತೆ.
ಚಿತ್ರದಲ್ಲಿ ಅವರದು ನಿರ್ಣಾಯಕ ಪಾತ್ರವಂತೆ. ಇದೊಂದು ತ್ರಿಕೋನ ಪ್ರೇಮಕತೆ. ಹಾಗಾಗಿ ನನ್ನ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ತಮ್ಮ ಭಾಗದ ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ಅಲ್ಪ ಸ್ವಲ್ಪ ಕನ್ನಡ ಕಲಿಯಬೇಕು ಎಂಬ ಉತ್ಸಾಹ ಗಣೇಶ್ಗೆ ಇದೆಯಂತೆ.
ಈ ಚಿತ್ರದಲ್ಲಿ ಶ್ರಿಯಾ ಅವರು ಯುವರಾಣಿಯಾಗಿ ಕಾಣಿಸಲಿದ್ದಾರೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಹಾಗೂ ಕಲಾವಿದ ಗಿರೀಶ್ ಕಾರ್ನಾಡ್ ಹಾಗೂ ರಮ್ಯಾ ಕೃಷ್ಣ ಪೋಷಕ ಪಾತ್ರಗಳಲ್ಲಿ ಕಾಣಿಸಲಿದ್ದಾರೆ. ನ್ಯೂಯಾರ್ಕ್, ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಿಸಲು ಉದ್ದೇಶಿಸಲಾಗಿದೆ.
ಗಣೇಶ್ ವೆಂಕಟರಾಮನ್ ಅವರು ತಮಿಳು, ಮಲಯಾಳಂ ಹಾಗೂ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ ಆಫ್ ಇಂಡಿಯಾ) ಜಾಹೀರಾತಿನಲ್ಲೂ ಗಣೇಶ್ ಅಭಿನಯಿಸಿದ್ದಾರೆ. ತಮಿಳಿನ ಅಭಿಯುಂ ನಾನುಂ (ಕನ್ನಡದಲ್ಲಿ ನಾನು ನನ್ನ ಕನಸು) ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟಿದ್ದರು.
ಅವರನ್ನೇ ಕನ್ನಡಕ್ಕೂ ಕರೆತರುವ ಉದ್ದೇಶ ಪ್ರಕಾಶ್ ರೈ ಅವರಿಗಿತ್ತು. ಆ ಚಿತ್ರಕ್ಕೆ ನಾಯಕಿಯಾಗಿ ಮೊದಲು ಗೋಲ್ಡನ್ ಗರ್ಲ್ ರಮ್ಯಾರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸಂಭಾವನೆ ವಿಚಾರವಾಗಿ ರಮ್ಯಾ ಚಿತ್ರದಿಂದ ಹೊರಬಿದ್ದಿದ್ದರು. ರಮ್ಯಾರಿಗೆ ಕೈತಪ್ಪಿದ ಅವಕಾಶ ಅಮೂಲ್ಯ ಅವರ ಪಾಲಾಗಿತ್ತು.
ರೂಪಾ ಅಯ್ಯರ್ ನಿರ್ದೇಶಿಸುತ್ತಿರುವ ಚಂದ್ರ ಚಿತ್ರ ಕನ್ನಡ, ತಮಿಳು ದ್ವಿಭಾಷಾ ಚಿತ್ರ. ಈ 'ಚಂದ್ರ' ಚಿತ್ರದ ಹುಣ್ಣಿಮೆ ಚಂದ್ರ ಶ್ರಿಯಾ ಸರನ್. ಅಂದಹಾಗೆ ಚಿತ್ರದ ಶೀರ್ಷಿಕೆ ನೋಡಿ ಇದ್ಯಾವುದೋ ಚಂದಮಾಮನ ಕತೆ ಎಂದುಕೊಳ್ಳುವಂತಿಲ್ಲ. ಕೆಲವೊಂದು ವಾಸ್ತವಗಳನ್ನು ಇಟ್ಟಿಕೊಂಡು ಹೆಣೆದಿರುವ ಕತೆ.
ಭಾರತದಲ್ಲಿ ಸ್ವಾತಂತ್ರ್ಯಾ ನಂತರ ಸರಕಾರವು ರಾಜಮನೆತನಗಳ ಆಸ್ತಿ ಹಾಗೂ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡಾಗ, ಆ ಮನೆತನಗಳ ಸದಸ್ಯರು ತ್ರಿಶಂಕು ಸ್ಥಿತಿಯನ್ನು ಅನುಭವಿಸಬೇಕಾಯಿತು. ಅಂತಹ ಮನೆತನಕ್ಕೆ ಸೇರಿದ ಯುವರಾಣಿಯ ಕತೆ ಇದು. ಚಿತ್ರದಲ್ಲಿ ಕೆಲವೊಂದು ನೈಜ ಘಟನೆಗಳಿಗೆ ತಮ್ಮದೇ ಆದಂತಹ ಕಾಲ್ಪನಿಕ ಆಯಾಮವನ್ನು ನೀಡಿದ್ದಾರೆ ರೂಪಾ ಅಯ್ಯರ್. (ಏಜೆನ್ಸೀಸ್)


Click it and Unblock the Notifications











