ರಿಯಲ್ ಸ್ಟಾರ್ ಉಪ್ಪಿಗೆ ತಮ್ಮನಾಗಿ ಗೌರೀಶ್ ಅಕ್ಕಿ ಎಂಟ್ರಿ
ಕನ್ನಡ ಕಿರುತೆರೆಯಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿದ್ದ ಗೌರೀಶ್ ಅಕ್ಕಿ ಈಗ ಬೆಳ್ಳಿಪರದೆ ಮೇಲೆ ತಮ್ಮದೇ ಆದಂತಹ ಛಾಪು ಮೂಡಿಸಲು ಹೊರಟಿದ್ದಾರೆ. ಸುವರ್ಣ ನ್ಯೂಸ್ ಗೆ ಗುಡ್ ಬೈ ಹೇಳಿದ ಮೇಲೆ ಅವರು ಚಿತ್ರ ನಿರ್ದೇಶನ ಮಾಡುವುದಾಗಿ ಹೇಳಿದ್ದರು.
ಈಗ ಅದಕ್ಕೂ ಮುನ್ನ ಬಣ್ಣ ಹಚ್ಚುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ತಮ್ಮನಾಗಿ ಪಾರ್ಟ್ ಮಾಡುತ್ತಿದ್ದಾರೆ. ಶ್ರೀನಿವಾಸರಾಜು ನಿರ್ದೇಶಿಸುತ್ತಿರುವ 'ಬಸವಣ್ಣ' ಚಿತ್ರದಲ್ಲಿ ಗೌರೀಶ್ ಅಕ್ಕಿ ಅವರದು ಸೈಂಟಿಸ್ಟ್ ಪಾತ್ರ. ಸದ್ಯಕ್ಕೆ ಬಸವಣ್ಣ ಚಿತ್ರದ ಶೂಟಿಂಗ್ ಕಾರೈಕುಡಿಯಲ್ಲಿ ಭರದಿಂದ ಸಾಗಿದೆ.
ಗೌರೀಶ್ ನಿರ್ದೇಶಿಸಲಿರುವ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ಆಯ್ಕೆ ಮಾಡಿಕೊಂಡಿರುವ ಕಥೆ ಗಾಂಧಿನಗರಕ್ಕೆ ಸಂಬಂಧಪಟ್ಟಿದ್ದು. ಹಾಗಾಗಿ ಚಿತ್ರಕ್ಕೆ "ಸಿನಿಮಾ ಮೈ ಡಾರ್ಲಿಂಗ್" ಎಂದು ಹೆಸರಿಟ್ಟಿದ್ದಾರೆ. ಗಾಂಧಿನಗರದ ಸುತ್ತ ಸುತ್ತವ ಕಥೆ ಇದು ಎನ್ನಲಾಗಿದೆ.'ಅಗಮ್ಯ' ಚಿತ್ರದಲ್ಲಿ ಅಭಿನಯಿಸಿದ್ದ ಬಿಹಾನ್ ಗೌಡ ಚಿತ್ರದ ನಾಯಕ ನಟ. ಈ ಚಿತ್ರದ ಇನ್ನೊಬ್ಬ ನಾಯಕ ನಟ 'ಮಧುರ ಪ್ರೇಮ ಕಾವ್ಯ' ಚಿತ್ರದಲ್ಲಿ ಅಭಿನಯಿಸಿದ್ದ ಮನೋಜವಂ. ಚಿತ್ರದಲ್ಲಿ ರಂಗಾಯಣ ರಘು ಅವರು ಪ್ರಮುಖ ಪಾತ್ರವೊಂದನ್ನು ಪೋಷಿಸಲಿದ್ದಾರೆ. ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕು. ಸುದೀರ್ಘ ಸಮಯದ ಬಳಿಕ ರಘು ದೀಕ್ಷಿತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಉಳಿದಂತೆ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ.
ಕಳೆದ ಮೂರು ವರ್ಷಗಳಿಂದ ಸುವರ್ಣ ಸುದ್ದಿ ವಾಹಿನಿಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಗೌರೀಶ್ ಕಾರ್ಯನಿರ್ವಹಿಸಿದ್ದಾರೆ. ಟಿವಿ9 ಕನ್ನಡ, ಈಟಿವಿ ಕನ್ನಡ ವಾಹಿನಿಯಲ್ಲೂ ಅವರು ನಿರೂಪಕರಾಗಿ, ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಕೆಲಸ ನಿರ್ವಹಿಸಿದ್ದರು. ಈಗ ಅವರ ಪಯಣ ಬೆಳ್ಳಿತೆರೆ ಕಡೆಗೆ ಸಾಗಿದೆ. ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ ಎರಡರಲ್ಲೂ ಪಳಗಿದ್ದ ಗೌರೀಶ್ ಬೆಳ್ಳಿತೆರೆಯ ಮೇಲೆ ಏನು ಮ್ಯಾಜಿಕ್ ಮಾಡಲಿದ್ದಾರೆ ಎಂಬ ಕುತೂಹಲವಿದ್ದೇ ಇದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












