ನಾನಿನ್ನೂ ನಟನೆಯಲ್ಲಿ ಯುಕೆಜಿ; ಗೋಲ್ಡನ್ ಸ್ಟಾರ್
'ಮುಂಗಾರು ಮಳೆ' ಮೂಲಕ 'ಗೋಲ್ಡನ್ ಸ್ಟಾರ್' ಪಟ್ಟ ಗಿಟ್ಟಿಸಿದ ಗಣೇಶ್, ನಾಯಕರಾಗಿ ನಟಿಸಿದ ಮೊದಲ ಚಿತ್ರ 'ಚೆಲ್ಲಾಟ'ದಲ್ಲೇ ತಾವೊಬ್ಬ ಸಮರ್ಥ ನಟ ಎಂಬುದನ್ನು ಸಾಬೀತುಪಡಿಸಿದ್ದರು. ಅದಕ್ಕೂ ಮೊದಲು, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಟೈಮ್' ಮೂಲಕ ಗಣೇಶ್, ಕರ್ನಾಟಕದಾದ್ಯಂತ ಭಾರಿ ಪ್ರಸಿದ್ಧರಾಗಿದ್ದರು. ಈಗಂತೂ ಗಣೇಶ್ ಅತ್ಯುತ್ತಮ ನಟ ಎಂದು ಎಲ್ಲರೂ ಒಪ್ಪಿಯಾಗಿದೆ. ಆದರೆ...!
ಆದರೂ ಆಶ್ಚರ್ಯವೆಂಬಂತೆ, ಗಣೇಶ್ ವೃತ್ತಿಜೀವನ ತೂಗುಯ್ಯಾಲೆ ಆಡುತ್ತಿದೆ. ಮುಂಗಾರು ಮಳೆ ನಂತರ ಗಣೇಶ್ ನಟಿಸಿರುವ ಚಿತ್ರಗಳಲ್ಲಿ 'ಚೆಲುವಿನ ಚಿತ್ತಾರ' ಮಾತ್ರ ಸೂಪರ್ ಹಿಟ್. ಮಿಕ್ಕಂತೆ, 'ಹುಡುಗಾಟ', 'ಗಾಳಿಪಟ' ಹಿಟ್ ಚಿತ್ರಗಳ ಸಾಲಿಗೆ ಸೇರಿವೆ. ಆದರೆ ನಂತರ ಬಂದ 'ಅರಮನೆ', 'ಕೃಷ್ಣ', 'ಮಳೆಯಲಿ ಜೊತೆಯಲಿ' ಇವೆಲ್ಲ ಗಣೇಶ್ ಯಶಸ್ಸಿನ ಹ್ಯಾಂಗೋವರ್ ನಲ್ಲಿ ಕೆಲದಿನಗಳು ಓಡಿರುವ ಚಿತ್ರಗಳಷ್ಟೇ!
'ಶೈಲೂ' ಹಾಗೂ ಇತ್ತೀಚಿನ 'ರೋಮಿಯೋ' ಚಿತ್ರಗಳನ್ನು ಬಿಟ್ಟರೆ ಗಣೇಶ್ ಚಿತ್ರಗಳದ್ದು ಸಾಲು ಸಾಲು ಸೋಲು! ಆದರೂ ಗಣೇಶ್ ಅವರಿಗೆ ಬರುತ್ತಿರುವ ಚಿತ್ರಗಳ ಆಫರ್ ಕಡಿಮೆಯೇನಲ್ಲ. ಅದಕ್ಕೂ ಕಾರಣವಿದೆ. ಮೊದಲನೆಯದಾಗಿ ಎಂತಹ ಪಾತ್ರಕ್ಕಾದರೂ ಗಣೇಶ್ ಹೊಂದಿಕೊಂಡು ಸೂಕ್ತವಾಗಿ ಅಭಿನಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಎರಡನೆಯದು, ಗಣೇಶ್ ನಿರ್ಮಾಪಕರು ಹಾಗೂ ನಿರ್ದೇಶಕರ ಜೊತೆ ಹೊಂದಿಕೊಂಡು ಕೆಲಸ ಮಾಡುವ ನಟ.
ಆದರೆ ಎರಡನೇ ಕಾರಣಕ್ಕೆ, ಶಿಲ್ಪಾರನ್ನು ಮದುವೆಯಾದ ನಂತರ ಚಿಕ್ಕ ಕಲ್ಲು ಬಿದ್ದಿದೆ ಎನ್ನಬಹುದು. ಗಣೇಶ್ ಸಂಭಾವಿತರಾದರೂ ಮಡದಿ ಶಿಲ್ಪಾ ಕಿರಿಕಿರಿ ಪಾರ್ಟಿ ಎಂದು ದೂರುವ ನಿರ್ಮಾಪಕರು ಹಾಗೂ ನಿರ್ದೇಶಕರು ಸಾಕಷ್ಟಿದ್ದಾರೆ. ಆದರೆ ಗಣೇಶ್ ಇವೆರಡನ್ನೂ ಹೇಗೋ ಬ್ಯಾಲೆನ್ಸ್ ಮಾಡಿಕೊಂಡು ವೃತ್ತಿಜೀವನದಲ್ಲಿ ಮತ್ತೆ ಮೇಲೇಳುತ್ತಿದ್ದಾರೆ. ಈಗಂತೂ ಗಣೇಶ್ ಮತ್ತೆ ಗೆಲುವಿನ ಚಿತ್ತಾರ ಬಿಡಿಸಲು ಹೊರಟಂತಿದೆ.
ಅವೆಲ್ಲಾ ಒತ್ತಟ್ಟಿಗಿರಲಿ, ಗಣೇಶ್ ಇದೀಗ ನಟಿಸುತ್ತಿರುವ ಚಿತ್ರ 'ಶ್ರಾವಣಿ ಸುಬ್ರಹ್ಮಣ್ಯ'ಕ್ಕೆ ಈ ಮೊದಲಿನ ಸೂಪರ್ ಹಿಟ್ ಚಿತ್ರ 'ಚೆಲುವಿನ ಚಿತ್ತಾರ'ದಲ್ಲಿ ಗಣೇಶ್ ಜೋಡಿಯಾಗಿದ್ದ ಅಮೂಲ್ಯಾ ಜತೆಯಾಗಿದ್ದಾರೆ. ಶಿಶಿರ ಎಂಬ ಸದಭಿರುಚಿ ಚಿತ್ರ ನಿರ್ಮಿಸಿದ್ದ ನಾಗತಿಹಳ್ಳಿ ಚಂದ್ರಶೇಖರ್ ಶಿಷ್ಯರಾದ ಮಂಜು ಸ್ವರಾಜ್ ಈ 'ಶ್ರಾವಣಿ ಸುಬ್ರಮಣ್ಯ' ಚಿತ್ರದ ನಿರ್ದೇಶಕರು. ಈ ಚಿತ್ರಕ್ಕೆ ಮೈಸೂರಿನಲ್ಲಿ ಶೂಟಿಂಗ್ ಭರದಿಂದ ಸಾಗಿದೆ. ಮುಂದಿನ ಪುಟ ನೋಡಿ...


Click it and Unblock the Notifications












