ಎಲ್ಲಾ ಪ್ಯಾನ್ ಇಂಡಿಯಾ ಮಾಡ್ತಿರೋವಾಗ ಗಣೇಶ್ ಯಾಕೆ ಮಾಡ್ತಿಲ್ಲ? ಅವರೇ ಕೊಟ್ರು ಉತ್ತರ
ಪ್ಯಾನ್ ಇಂಡಿಯಾ ಎಂಬುದು ಈಗ ದೊಡ್ಡ ಟ್ರೆಂಡ್ ಆಗಿದ್ದು, ಸ್ಟಾರ್ ನಟರಿಂದ ಹಿಡಿದು ಈಗ ತಾನೇ ಚಿತ್ರರಂಗ ಪ್ರವೇಶಿಸಿರುವ ಯುವ ನಟರೂ ಸಹ ಈ ಟ್ರೆಂಡ್ ಹಿಂದೆ ಬಿದ್ದಿದ್ದಾರೆ. ಹಾಗಂತ ಈ ಪ್ಯಾನ್ ಇಂಡಿಯಾ ಎಂಬುದು ಹೊಸ ವಿಷಯವೇನಲ್ಲ. ಈ ಹಿಂದೆ 1959ರಲ್ಲಿ ಬಿಡುಗಡೆಯಾಗಿದ್ದ ಡಾ ರಾಜ್ ಕುಮಾರ್ ಅಭಿನಯದ ಕನ್ನಡ ಚಿತ್ರ ಮಹಿಷಾಸುರ ಮರ್ಧಿನಿ ಪ್ಯಾನ್ ಇಂಡಿಯಾ ಚಿತ್ರವೇ ಆಗಿತ್ತು.
ಹೀಗೆ ದಶಕಗಳ ಹಿಂದೆಯೇ ಹುಟ್ಟುಕೊಂಡಿದ್ದ ಪ್ಯಾನ್ ಇಂಡಿಯಾ ಕ್ರೇಜ್ ಬೆಳೆದದ್ದು ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಸರಣಿ ಮೂಲಕ. ಬಾಹುಬಲಿ ಮೂಲಕ ದಕ್ಷಿಣ ಭಾರತದ ಚಿತ್ರಗಳನ್ನು ಉತ್ತರ ಭಾರತದ ಸಿನಿ ಪ್ರೇಕ್ಷಕರು ಮೆಚ್ಚಿಕೊಳ್ತಾರೆ ಎಂಬ ವಿಷಯವೂ ಸಹ ಹೊರಬಿತ್ತು. ಬಳಿಕ ಇದೇ ಮಾದರಿಯನ್ನು ಹಲವು ಚಿತ್ರಗಳು ಪಾಲಿಸಿದರೂ ಸಹ ಯಶಸ್ವಿಯಾದದ್ದು ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಶನ್ನ ಕೆಜಿಎಫ್ ಚಿತ್ರ ಸರಣಿ.
ಇನ್ನು ಕೆಜಿಎಫ್ ಪ್ಯಾನ್ ಇಂಡಿಯಾ ಚಿತ್ರವಾಗಿ ಗೆದ್ದ ನಂತರ ಬಂದ ಹಲವು ದೊಡ್ಡ ಬಜೆಟ್ನ ಚಿತ್ರಗಳೆಲ್ಲಾ ಬಿಡುಗಡೆಗೊಂಡದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ. ವಿಶೇಷವೆಂದರೆ ಬಾಲಿವುಡ್ ಚಿತ್ರಗಳೂ ಸಹ ದಕ್ಷಿಣ ಭಾರತದ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಗೊಂಡವು. ಈ ಪೈಕಿ ಹಲವು ಚಿತ್ರಗಳು ಗೆದ್ದರೆ ಇನ್ನೂ ಕೆಲ ಚಿತ್ರಗಳು ನಿರೀಕ್ಷಿಸಿದಷ್ಟು ತಲುಪಲಿಲ್ಲ. ಇನ್ನು ಇತ್ತೀಚೆಗಷ್ಟೆ ದೊಡ್ಡ ಸಕ್ಸಸ್ ಕಂಡಿರುವ ಕಾಂತರ ಕೂಡ ಪ್ಯಾನ್ ಇಂಡಿಯಾ ಚಿತ್ರವೇ ಆಗಿದ್ದು ಈಗ ಎಲ್ಲಾ ನಟರೂ ಇದೇ ಟ್ರೆಂಡ್ನಲ್ಲಿ ಸಿನಿಮಾ ಮಾಡ್ತಾರಾ ಎಂಬುದು ಸದ್ಯಕ್ಕಿರುವ ಪ್ರಶ್ನೆ. ಇದೇ ಪ್ರಶ್ನೆಯನ್ನು ಸದ್ಯ ತ್ರಿಬಲ್ ರೈಡಿಂಗ್ ಚಿತ್ರದ ಪತ್ರಿಕಾಗೋಷ್ಟಿ ವೇಳೆ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೂ ಕೇಳಲಾಗಿದ್ದು ಇದಕ್ಕೆ ಗಣೇಶ್ ಸಹ ಉತ್ತರಿಸಿದ್ದಾರೆ.

ಪ್ಯಾನ್ ಇಂಡಿಯಾ ಚಿತ್ರ ಯಾವಾಗ ಮಾಡ್ತೀರ?
ಅಭಿಮಾನಿಗಳಲ್ಲಿ ಗಣೇಶ್ ಅವರು ಪ್ಯಾನ್ ಇಂಡಿಯಾ ಚಿತ್ರವನ್ನು ಯಾವಾದ ಮಾಡ್ತಾರೆ ಎಂಬ ಪ್ರಶ್ನೆ ಇದೆ ಇದಕ್ಕೆ ಏನು ಹೇಳ್ತಿರ ಎಂದು ಪ್ರಶ್ನೆ ಎದುರಾದಾಗ " ನಂಗೆ ಯಾವ ರೀತಿ ಎಂದರೆ ನಮ್ಮ ಸಿನಿಮಾವನ್ನು ಎಲ್ಲರೂ ನಮ್ಮ ಭಾಷೆಯಲ್ಲೇ ನೋಡಬೇಕು ಅಂತ ಆಸೆ. ಅದಾದ ಮೇಲೆ ಪ್ಯಾನ್ ಇಂಡಿಯಾಗೆ ಹೋಗಬೇಕು ಅಂತ. ಒಂದೆರಡು ಚಿತ್ರಗಳ ಮಾತುಕತೆ ನಡೀತಿದೆ. ಈ ವರ್ಷ ಮಾಡಿಕೊಂಡು ಹೋಗ್ತೇನೆ" ಎಂದು ಗಣೇಶ್ ಉತ್ತರಿಸಿದರು.

ದರ್ಶನ್ ಕೂಡ ಪ್ಯಾನ್ ಇಂಡಿಯಾದತ್ತ
ಇನ್ನು ಕನ್ನಡ ನಟರ ವಿಚಾರಕ್ಕೆ ಬಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ತಮ್ಮ ಮುಂದಿನ ಚಿತ್ರ ಕ್ರಾಂತಿ ಮೂಲಕ ಪ್ಯಾನ್ ಇಂಡಿಯಾ ಕದ ತಟ್ಟಲಿದ್ದಾರೆ. ಈಗಾಗಲೇ ಚಿತ್ರದ ಪ್ರಚಾರ ಕೆಲಸಗಳು ಆರಂಭಗೊಂಡಿದ್ದು ಚಿತ್ರ ಜನವರಿ 26ರ ಗಣರಾಜ್ಯೋತ್ಸವ ಪ್ರಯುಕ್ತ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಈ ಹಿಂದೆ ಯಜಮಾನ ಚಿತ್ರ ನಿರ್ದೇಶಿಸಿದ್ದ ವಿ ಹರಿಕೃಷ್ಣ ನಿರ್ದೇಶನವಿರದ್ದು ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ.

ಕಾಂತಾರ ಮೊದಲಿಗೆ ಪ್ಯಾನ್ ಇಂಡಿಯಾವಾಗಿರಲಿಲ್ಲ
ಇನ್ನು ಎಲ್ಲಾ ಚಿತ್ರಗಳಂತೆ ಕಾಂತಾರ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂಬ ಉದ್ದೇಶದಿಂದ ತಯಾರಿಸಿರಲಿಲ್ಲ. ಪ್ರೇಕ್ಷಕರ ಪ್ರತಿಕ್ರಿಯೆ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದು ಗೆಲ್ಲಿಸಿತು. ಗಣೇಶ್ ಅವರ ಹೇಳಿಕೆ ಕಾಂತಾರ ಯಶಸ್ಸು ಎರಡಕ್ಕೂ ಸಾಮ್ಯತೆ ಇದೆ. ಅವರು ಹೇಳಿದಂರೆ ಕಾಂತಾರ ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆಗೊಂಡಿತು, ಎಲ್ಲರೂ ಚಿತ್ರವನ್ನು ಕನ್ನಡ ಭಾಷೆಯಲ್ಲೇ ವೀಕ್ಷಿಸಿದರು ತದನಂತರ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಯಿತು.


Click it and Unblock the Notifications











