'ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರ'
ಗೋಲ್ಡನ್ ಸ್ಟಾರ್ ಗಣೇಶ್ ಆರು ತಿಂಗಳ ನಂತರ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಲಾಕ್ಡೌನ್ನಿಂದಾಗಿ ಮುಖಕ್ಕೆ ಬಣ್ಣ ಬಳಿಯದೇ, ಕ್ಯಾಮೆರಾ ಎದುರು ಬಾರದೆ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಗಿತ್ತು. ಇದೀಗ, ಆರು ತಿಂಗಳ ನಂತರ ಗಣೇಶ್ ಮತ್ತು ಖುಷಿಯಿಂದ ತಮ್ಮ ಕೆಲಸ ಆರಂಭಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ''ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು, ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೊ. 6 ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ "ಕ್ಯಾಮೆರಾ", "ತ್ರಿಬಲ್ ರೈಡಿಂಗ್" ಚಿತ್ರೀಕರಣ ಶುರು ನಿಮ್ಮ ಹಾರೈಕೆಯಿರಲಿ'' ಎಂದು ಖುಷಿಯಾಗಿದ್ದಾರೆ.
ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ. ಕೊರೊನಾ ವೈರಸ್ ಭೀತಿಯ ನಡುವೆಯೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಶೂಟಿಂಗ್ಗೆ ಹಾಜರಾಗಿದ್ದಾರೆ ಗಣೀ.

'ತ್ರಿಬಲ್ ರೈಡಿಂಗ್' ಸಿನಿಮಾ ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, ಲವ್, ಕಾಮಿಡಿ, ಆಕ್ಷನ್ ಹಾಗೂ ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿದೆ. ಈ ಹಿಂದೆ ವಿನೋದ್ ಪ್ರಭಾಕರ್ ನಟನೆಯ ರಗಡ್ ಚಿತ್ರ ನಿರ್ದೇಶನ ಮಾಡಿದ್ದ ಮಹೇಶ್ ಗೌಡ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರಾಮ್ ಗೋಪಾಲ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಸಾಯಿ ಕಾರ್ತಿಕ್ ಸಂಗೀತ ಇರಲಿದೆ. ಸಾಧುಕೋಕಿಲಾ, ರವಿಶಂಕರ್, ಕುರಿ ಪ್ರತಾಪ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ.


Click it and Unblock the Notifications











