Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ಸಬ್ಸಿಡಿ: ಕಾದು ಸುಸ್ತಾದ ನಿರ್ಮಾಪಕ
ಕೊರೊನಾ ಹೊಡೆತಕ್ಕೆ ಸಿಲುಕಿ ಚಿತ್ರರಂಗ ಜರ್ಜರಿತವಾಗಿದೆ. ಸಾಲ ತಂದು ಸಿನಿಮಾ ಆರಂಭಿಸಿದ್ದ, ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಕಾಯುತ್ತಿದ್ದ ನಿರ್ಮಾಪಕರಂತೂ ಅರೆಜೀವವಾಗಿದ್ದಾರೆ. ತಂದ ಸಾಲಕ್ಕೆ ಬಡ್ಡಿಗಳು ಬೆಳೆಯುತ್ತಲೇ ಇವೆ.
ಭಾರಿ ನಿರ್ಮಾಪಕರು ಎನಿಸಿಕೊಂಡವರು ಹಾಗೋ-ಹೀಗೋ ಸಹಿಸಿಕೊಂಡಿದ್ದಾರೆ. ಆದರೆ ಹಲವು ನಿರ್ಮಾಪಕರಿಗೆ ಲಾಕ್ಡೌನ್ ದೊಡ್ಡ ಪೆಟ್ಟು ನೀಡಿದೆ. ಇದೇ ಸಮಯಕ್ಕೆ ಸರಿಯಾಗಿ ಸರ್ಕಾರವೂ ಸಹ ಸಿನಿಮಾ ಸಬ್ಸಿಡಿಗಳನ್ನು ಬಿಡುಗಡೆ ಮಾಡದೆ ಸತಾಯಿಸುತ್ತಿದೆ.
ಉತ್ತಮ ಗುಣಮಟ್ಟದ ಸಿನಿಮಾ ನಿರ್ಮಾಣವನ್ನು ಉತ್ತೇಜಿಸಲೆಂದು ಕರ್ನಾಟಕ ಸರ್ಕಾರುವ ಪ್ರತಿವರ್ಷ 125 ಕನ್ನಡ ಸಿನಿಮಾಗಳಿಗೆ ಸಬ್ಸಿಡಿ ನೀಡುತ್ತದೆ. ಆದರೆ ಈಗ ಕಳೆದ ಮೂರು ವರ್ಷದಿಂದಲೂ ಸಬ್ಸಿಡಿ ಬಿಡುಗಡೆಯೇ ಆಗಿಲ್ಲ. ಸಂಕಷ್ಟದಲ್ಲಿರುವ ನಿರ್ಮಾಪಕನಿಗೆ ಸಹಕಾರಿ ಆಗಬಹುದಾಗಿದ್ದ ಸಬ್ಸಿಡಿ ಕೈಗೆಟುಗದ ಹುಳಿ ದ್ರಾಕ್ಷಿಯಂಥಾಗಿದೆ.
''ನಿರ್ಮಾಪಕ ಸಂಕಷ್ಟದಲ್ಲಿದ್ದಾನೆ, ಸಬ್ಸಿಡಿ ಹಣ ಬಿಡುಗಡೆ ಮಾಡಿ''
ಸಿನಿಮಾ ಸಬ್ಸಿಡಿ ಬಿಡುಗಡೆಯಲ್ಲಿ ವಿಳಂಬ ವಿಚಾರವಾಗಿ 'ಫಿಲ್ಮೀಬೀಟ್ ಕನ್ನಡ'ದೊಂದಿಗೆ ಮಾತನಾಡಿದ ನಿರ್ಮಾಪಕ, ನಿರ್ದೇಶಕ ಜೆಜೆ.ಶ್ರೀನಿವಾಸ್, ''ಪ್ರತಿ ವರ್ಷವೂ ಸಿನಿಮಾ ಸಬ್ಸಿಡಿ ಬಿಡುಗಡೆ ಮಾಡುವುದು ನಿಯಮ. ಆದರೆ 2018 ರಿಂದ ಮೊದಲುಗೊಂಡು ಈವರೆಗೆ ಸಿನಿಮಾ ಸಬ್ಸಿಡಿ ಬಿಡುಗಡೆ ಆಗಿಲ್ಲ. ಬಾಕಿ ಇರುವ ಸಬ್ಸಿಡಿ ವಿತರಣೆ ಮಾಡಿದರೆ ಸಂಕಷ್ಟದಲ್ಲಿರುವ ನಿರ್ಮಾಪಕರಿಗೆ ಸಹಾಯ ಮಾಡಿದಂತಾಗುತ್ತದೆ'' ಎಂದಿದ್ದಾರೆ.
125 ಉತ್ತಮ ಸಿನಿಮಾಗಳಿಗೆ ಸಬ್ಸಿಡಿ ನೀಡಲಾಗುತ್ತದೆ
ಪ್ರತಿ ವರ್ಷ ಬಿಡುಗಡೆ ಆದ ಸಿನಿಮಾಗಳಲ್ಲಿ ರೀಮೆಕ್ ಅಲ್ಲದ, ಡಬ್ ಅಲ್ಲದ 125 ಸಿನಿಮಾಗಳಿಗೆ ಸಬ್ಸಿಡಿ ನೀಡುವುದು ನಿಯಮ. ಆಯಾ ವರ್ಷ ಸೆನ್ಸಾರ್ ಆದ ಸಿನಿಮಾಗಳಿಗೆ ಮುಂದಿನ ವರ್ಷ ಸಬ್ಸಿಡಿ ಹಣ ನೀಡುವುದು ವಾಡಿಕೆ. 2017 ರಲ್ಲಿ ಸೆನ್ಸಾರ್ ಆದ ಸಿನಿಮಾಗಳಿಗೆ ಮೂರು ವರ್ಷ ಕಾದ ಬಳಿಕ ಕೆಲವು ತಿಂಗಳ ಹಿಂದೆ ಸಬ್ಸಿಡಿ ಹಣ ಬಂದಿದೆ. ಆದರೆ 2017 ರ ಬಳಿಕ ಸೆನ್ಸಾರ್ ಆದ ಯಾವ ಸಿನಿಮಾಕ್ಕೂ ಸಬ್ಸಿಡಿ ಬಿಡುಗಡೆ ಮಾಡಿಲ್ಲ ರಾಜ್ಯ ಸರ್ಕಾರ.
ನಾಲ್ಕು ವರ್ಷದಿಂದ ಸಬ್ಸಿಡಿ ಬಾಕಿ ಇದೆ: ಶ್ರೀನಿವಾಸ್
''ಪ್ರತಿ ವರ್ಷವೂ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನಿಸಲಾಗುತ್ತದೆ. ಆದರೆ 2019, 2020 ರಲ್ಲಿಯಂತೂ ಸಬ್ಸಿಡಿಗೆ ಅರ್ಜಿಯನ್ನು ಸಹ ಕರೆಯಲಾಗಿಲ್ಲ. 2021 ಸಹ ಅರ್ಧ ವರ್ಷ ಮುಗಿದಿದೆ. ಈ ವರ್ಷವೂ ಸಬ್ಸಿಡಿಗೆ ಅರ್ಜಿ ಆಹ್ವಾನಿಸುವುದು ಅನುಮಾನದಂತೆಯೇ ಗೋಚರಿಸುತ್ತಿದೆ. 2017 ರ ಸಬ್ಸಿಡಿ ಹಣವನ್ನು ಪಡೆಯಲು ಮೂರು ವರ್ಷ ಕಾಯಿಸಿದೆ ಸರ್ಕಾರ. ಇನ್ನು ಈವರೆಗೆ ಬಾಕಿ ಇರುವ ಮೂರು ವರ್ಷದ ಸಬ್ಸಿಡಿ ಹಣ ಪಡೆಯಲು ಎಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಜೆ.ಜೆ.ಶ್ರೀನಿವಾಸ್.
ಉದ್ದೇಶವೇ ವ್ಯರ್ಥವಾದಂತಾಗುತ್ತದೆ: ಜೆಜೆ ಶ್ರೀನಿವಾಸ್
''ಕಾದಂಬರಿ ಆಧರಿತ ಅಥವಾ ಬಹಳ ಒಳ್ಳೆಯ ಕತೆಯುಳ್ಳ, ಸಂಸ್ಕೃತಿ ಪ್ರತಿಬಿಂಬಿಸುವ ಸಿನಿಮಾಗಳು ಐದನ್ನು ಆಯ್ಕೆ ಮಾಡಿ ಅವಕ್ಕೆ 25 ಲಕ್ಷ ರು ಹಣ ಸಬ್ಸಿಡಿ ನೀಡಲಾಗುತ್ತದೆ. ಮಕ್ಕಳ ಸಿನಿಮಾ, ತುಳು, ಬ್ಯಾರಿ ಇತರೆ ವಿಭಾಗದ ಸಿನಿಮಾಗಳಿಗೆ 15 ಲಕ್ಷ, ಇತರೆ ನೂರು ಉತ್ತಮ ಸಿನಿಮಾಗಳಿಗೆ ತಲಾ 10 ಲಕ್ಷ ಹಣ ಸಬ್ಸಿಡಿಯಾಗಿ ನೀಡಲಾಗುತ್ತದೆ. ಈ ಸಬ್ಸಿಡಿಯನ್ನು ಚಿತ್ರರಂಗದ ಉತ್ತೇಜನೆಗೆಂದು ಕೊಡಲಾಗುತ್ತಿದೆ. ಆದರೆ ಇಂಥಹಾ ಸಂಕಷ್ಟದ ಸಮಯದಲ್ಲಿಯೇ ಸಬ್ಸಿಡಿ ಹಣ ನಿರ್ಮಾಪಕರಿಗೆ ಸಿಗಲಿಲ್ಲವೆಂದರೆ ಅದರ ಉದ್ದೇಶವೇ ವ್ಯರ್ಥವಾಗುತ್ತದೆ'' ಎಂದು ಮಾಹಿತಿ ಬಿಚ್ಚಿಟ್ಟರು ಶ್ರೀನಿವಾಸ್.
''ನಮ್ಮ ಒಕ್ಕೂಟಗಳ ಒಳ ರಾಜಕೀಯಗಳು ಸಹ ಕಾರಣ''
''ಸಬ್ಸಿಡಿ ಹಣ ಬಿಡುಗಡೆ ತಡವಾಗುತ್ತಿರುವುದು ಇದು ಮೊದಲೇನಲ್ಲ. ಆದರೆ ಈ ಸಂಕಷ್ಟದ ಸಮಯದಲ್ಲಾದರೂ ಸರ್ಕಾರ ಶೀಘ್ರವಾಗಿ ಸ್ಪಂದಿಸುವುದು ಸೂಕ್ತ. ಆದರೆ ಎಲ್ಲದಕ್ಕೂ ಸರ್ಕಾರವನ್ನು ಹೊಣೆಯನ್ನಾಗಿಸುವುದು ಸಹ ಸೂಕ್ತವಲ್ಲ. ನಮ್ಮ ಚಿತ್ರರಂಗದ ಸಂಘಗಳಲ್ಲಿನ ಒಳ ರಾಜಕೀಯಗಳು, ಒಗ್ಗಟ್ಟಿನ ಕೊರತೆ ಸಹ ಸರ್ಕಾರದಿಂದ ನಮಗೆ ನಿಜಕ್ಕೂ ತಲುಪಬೇಕಾದುದ್ದು ತಲುಪದೇ ಇರಲು ಕಾರಣವಾಗಿವೆ'' ಎಂದು ನಿರ್ಮಾಪಕರ ಸಂಘ, ಅಕಾಡೆಮಿ ಇನ್ನಿತರೆ ಒಕ್ಕೂಟಗಳ ಒಳರಾಜಕೀಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
Recommended Video
ಸಚಿವರನ್ನು ಭೇಟಿ ಮಾಡಲಿದ್ದೇವೆ: ಜೆಜೆ ಶ್ರೀನಿವಾಸ್
''ನಾವು ಕೆಲವು ಸಮಾನ ಮನಸ್ಕ ನಿರ್ಮಾಪಕರು ಸೇರಿ ವಾರ್ತಾ ಇಲಾಖೆ ಮುಖ್ಯ ಕಾರ್ಯದರ್ಶಿ ಅವರನ್ನು ಇಲಾಖೆ ಸಚಿವರನ್ನು ಭೇಟಿಯಾಗಿ ಸಬ್ಸಿಡಿ ಹಣ ಶೀಘ್ರ ಬಿಡುಗಡೆ ಮಾಡುವಂತೆ ಒತ್ತಡ ಹಾಕಲು ನಿರ್ಣಯಿಸಿದ್ದೇವೆ. ಅದು ಮಾತ್ರವೇ ಅಲ್ಲದೆ ರಾಜ್ಯದಲ್ಲಿ ಬಿಡುಗಡೆ ಆಗುವ ಎಲ್ಲ ಸ್ವಮೇಕ್ ಸಿನಿಮಾಗಳಿಗೂ ಸಬ್ಸಿಡಿ ಹಣ ನೀಡುವಂತೆಯೂ ಒತ್ತಾಯ ಮಾಡಲಿದ್ದೇವೆ. ಒಂದೊಮ್ಮೆ ನಾವುಗಳು ಸುಮ್ಮನೆ ಕೂತರೆ ಸರ್ಕಾರ ಇನ್ನಷ್ಟು ತಡ ಮಾಡುವ ಅಥವಾ ಸಬ್ಸಿಡಿ ಬಿಡುಗಡೆ ಬಗ್ಗೆ ನಿರ್ಲಕ್ಷ್ಯ ತಾಳುವ ಅಪಾಯ ಇದೆ'' ಎಂದಿದ್ದಾರೆ ಜೆಜೆ.ಶ್ರೀನಿವಾಸ್.