ಎರಡೇ ವಾರಗಳಲ್ಲಿ 'ಅಂದರ್ ಬಾಹರ್' ಎತ್ತಂಗಡಿ
ಏಪ್ರಿಲ್ 5ರಂದು ಬಿಡುಗಡೆಯಾದ 'ಅಂದರ್ ಬಾಹರ್' ಚಿತ್ರಕ್ಕೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶಿವಣ್ಣ ಅಭಿನಯದ ಸದಭಿರುಚಿಯ ಚಿತ್ರಗಳಲ್ಲಿ ಇದೂ ಒಂದು. ಉತ್ತಮ ವಿಮರ್ಶೆಗೂ ಪಾತ್ರವಾಗಿದೆ. ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ಎತ್ತಂಗಡಿ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈಗ ಬೆಂಗಳೂರು ಕೆ.ಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ತೆಲುಗಿನ 'ಗೌರವಂ' ಚಿತ್ರ ಬಿಡುಗಡೆಯಾಗಿದೆ. 'ಅಂದರ್ ಬಾಹರ್' ಚಿತ್ರಕ್ಕೆ ಕಲೆಕ್ಷನ್ ಕಡಿಮೆಯಾಗಿದ್ದೇ ಚಿತ್ರವನ್ನು ತೆಗೆಯಲು ಕಾರಣ ಎನ್ನಲಾಗಿದೆ. (ಅಂದರ್ ಬಾಹರ್ ಚಿತ್ರ ವಿಮರ್ಶೆ ಓದಿ)
ಶಿವಣ್ಣ ಅಭಿನಯದ ಚಿತ್ರ ಎರಡೇ ವಾರಗಳಲ್ಲಿ ಎತ್ತಂಗಡಿಯಾಗುತ್ತಿರುವುದು ಇದೇ ಮೊದಲು. ಆದರೆ ಕಲೆಕ್ಷನ್ ಇಲ್ಲ ಎಂದರೆ ಇನ್ನೇನು ಮಾಡಲಾಗುತ್ತದೆ. ಹಾಗಾಗಿ ಚಿತ್ರವನ್ನು ಅಲ್ಲಿಂದ ತೆಗೆಯಲಾಗಿದೆ ಎನ್ನುತ್ತದೆ ನಿರ್ಮಾಪಕರ ತಂಡ.
ಅಂದರ್ ಬಾಹರ್ ಚಿತ್ರ ಸಂತೋಷ್ ಚಿತ್ರಮಂದಿರದಿಂದ ಎತ್ತಂಗಡಿಯಾಗಿದ್ದರೂ ಉಳಿದೆಡೆ ಮಾತ್ರ ಎಂದಿನಂತೆ ಪ್ರದರ್ಶನ ಕಾಣುತ್ತಿದೆ. ರಾಜ್ಯದ ಉಳಿದ ಕೇಂದ್ರಗಳಲ್ಲಿ ಅಂದರ್ ಬಾಹರ್ ಕಲೆಕ್ಷನ್ ಆವರೇಜ್ ಆಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಚಿತ್ರ ಸುದೀರ್ಘವಾಯಿತು ಎಂಬ ಕಾರಣಕ್ಕೆ ಹದಿನೆಂಟು ನಿಮಿಷಗಳಷ್ಟು ಮೊಟಕುಗೊಳಿಸಲಾಗಿತ್ತು. ಹೊಸ ಪ್ರಿಂಟ್ ನೊಂದಿಗೆ ಚಿತ್ರ ಪ್ರದರ್ಶನವಾಗುತ್ತಿದೆ. ಶಿವಣ್ಣನ ಜೊತೆ ಪಾರ್ವತಿ ಮೆನನ್ ಅಭಿನಯಿಸಿದ್ದು ತಾರಾಬಳಗದಲ್ಲಿ ಶಶಿಕುಮಾರ್, ಶ್ರೀನಾಥ್, ಅರುಂಧತಿ ನಾಗ್, ಸೃಜನ್ ಲೋಕೇಶ್, ರಘು ರಾಮ್, ಜೋಶ್ವಾ ಮುಂತಾದವರಿದ್ದಾರೆ.


Click it and Unblock the Notifications












