ಖ್ಯಾತ ಲೇಖಕ ಎಚ್.ಎಸ್.ವಿ ಅವರ 'ಹಸಿರು ರಿಬ್ಬನ್' ಹಾಡುಗಳು ಲೋಕಾರ್ಪಣೆ
ಕನ್ನಡದ ಖ್ಯಾತ ಕವಿ ಮತ್ತು ಲೇಖಕ ಎಚ್.ಎಸ್. ವೆಂಕಟೇಶಮೂರ್ತಿ ಅವರು ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾ 'ಹಸಿರು ರಿಬ್ಬನ್' ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಯುವ ನಟ ರಕ್ಷಿತ್ ಶೆಟ್ಟಿ ಚಿತ್ರದ ಹಾಡುಗಳುನ್ನ ಲೋಕಾರ್ಪಣೆ ಮಾಡಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಸೆಟ್ಟೇರಿದ್ದ 'ಹಸಿರು ರಿಬ್ಬನ್' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿ ಈಗ ಹಾಡುಗಳಿಂದ ಗಮನ ಸೆಳೆಯುತ್ತಿದೆ. ಉಪಾಸನ ಮೋಹನ್ ಅವರು ಚಿತ್ರಕ್ಕೆ ಸಂಗೀತ ಒದಗಿಸಿದ್ದು, ಇದು ಇವರ ಮೊದಲ ಸಿನಿಮಾ. ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು, ಎಲ್ಲ ಹಾಡುಗಳಿಗೂ ಹೆಚ್.ಎಸ್.ವಿ ಅವರೇ ಸಾಹಿತ್ಯ ಬರೆದಿದ್ದಾರೆ.

ಅಂದ್ಹಾಗೆ ಎಚ್.ಎಸ್.ವಿ ಅವರಿಗೆ ಸಿನಿಮಾ ನಿರ್ದೇಶಿಸಬೇಕು ಎಂಬುದು ಬಹುದಿನದ ಆಸೆಯಾಗಿತ್ತು. ಈ ಆಸೆಯನ್ನ 'ಹಸಿರು ರಿಬ್ಬನ್' ಮೂಲಕ ಈಡೇರಿಸಿಕೊಳ್ಳುತ್ತಿದ್ದಾರೆ. 'ಚಿನ್ನಾರಿ ಮುತ್ತ' ಚಿತ್ರದಿಂದ ಆರಂಭಿಸಿ ಹಲವು ಜನಪ್ರಿಯ ಹಾಡುಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಹೆಗ್ಗಳಿಕೆ ಅವರದು. ಅವರ ಹಲವು ಹಾಡುಗಳು ಸಿನಿಮಾ, ಧಾರಾವಾಹಿಗಳಲ್ಲಿ ಬಳಕೆಯಾಗಿವೆ.
ವೆಂಕಟೇಶಮೂರ್ತಿ ಅವರು ಕವಿತೆ, ನಾಟಕ, ಪ್ರಬಂಧಗಳ ಮೂಲಕ ಹೆಸರಾದವರು. ಚಿತ್ರ ಜಗತ್ತಿನೊಂದಿಗೆ ಅವರ ಸಂಬಂಧ ಬಹುಕಾಲದ್ದು. 'ಚಿನ್ನಾರಿ ಮುತ್ತ'ದಿಂದ ಈ ಸಂಬಂಧ ಆರಂಭಗೊಂಡಿತು. 'ಕೊಟ್ರೇಶಿ ಕನಸು', 'ಕ್ರೌರ್ಯ', 'ಅಮೆರಿಕ ಅಮೆರಿಕ', 'ಕೊಟ್ಟ', ಒಂದೂರಿನಲ್ಲಿ ಕಥೆಯನ್ನು ಒಳಗೊಂಡ ಈ ಪಯಣ ಈಗ 'ಹಸಿರು ರಿಬ್ಬನ್'ವರೆಗೆ ಬಂದಿದೆ.

ಹೆಚ್.ಎಸ್.ವಿ ಅವರ 'ಅನಾತ್ಮಕಥನ' ಕೃತಿಯ ಭಾಗವೊಂದನ್ನು ಸಿನಿಮಾ ಮಾಡುತ್ತಿದ್ದಾರೆ. ಹಸಿರು ಕನಸೊಂದರ ಬೆನ್ನಟ್ಟಿದ ಅಮಾಯಕ ಕುಟುಂಬವೊಂದರ ತಳಮಳ ಈ ಕಥನದಲ್ಲಿದೆ. ಎರಡು ಕುಟುಂಬಗಳ ಸಂಬಂಧ, ಬಿಕ್ಕಟ್ಟನ್ನು ನೋಡುಗರಿಗೆ ಚೊಕ್ಕಟವಾಗಿ ಹೇಳುವ ಪ್ರಯತ್ನಕ್ಕೆ ಅವರು ಮುಂದಾಗಿದ್ದಾರೆ. ನಿಖಿಲ್ ಮಂಜು ನಾಯಕರಾಗಿ ನಟಿಸುತ್ತಿದ್ದು, ಗಿರಿಜಾ ಲೋಕೇಶ್ ತಾಯಿ ಪಾತ್ರ ನಿರ್ವಹಿಸಲಿದ್ದಾರೆ. ಬೇಬಿ ಋತ್ವಿ ಈ ಚಿತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











