ಹಂಸಲೇಖ ಆರೋಗ್ಯ ಚೆನ್ನಾಗಿದೆ, ಮತ್ತೆ ಶೂಟಿಂಗ್ ಗೆ ಬಂದ ನಾದಬ್ರಹ್ಮ
ನಾದಬ್ರಹ್ಮ ಹಂಸಲೇಖ ಅವರ ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ ಮಂಗಳವಾರ ಸಂಜೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿತ್ತು. ಆದ್ರೀಗ, ಹಂಸಲೇಖ ಅವರು ಫಿಟ್ ಅಂಡ್ ಫೈನ್ ಆಗಿದ್ದು, ಮತ್ತೆ ಶೂಟಿಂಗ್ ಗೆ ಹಾಜರಾಗಿದ್ದಾರೆ.
ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಜೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಸರಿಗಮಪ' ಕಾರ್ಯಕ್ರಮದ ಚಿತ್ರೀಕರಣದ ವೇಳೆ ಅವರಿಗೆ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಸಾಗರ್ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿತ್ತು.

ಇದನ್ನ ಅಲ್ಲೆಗೆಳೆದಿರುವ ಹಂಸಲೇಖ ಅವರು ''ನಾನು ಹೋಗಿದ್ದು ರೆಗ್ಯೂಲರ್ ಚೆಕಪ್ ಗೆ ಅಷ್ಟೇ'' ಎಂದಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬಂದಿದ್ದ ಹಂಸಲೇಖ ''ಖುಷಿ ಖುಷಿಯಿಂದ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದೇನೆ. ನನಗೆ ಏನೂ ಆಗಿಲ್ಲ. ಆತಂಕ ಪಡಬೇಡಿ. ನಾನು ಹೋಗಿದ್ದು ರೆಗ್ಯೂಲರ್ ಚೆಕಪ್ ಗೆ ಅಷ್ಟೇ. ಆದ್ರೆ, ಆತಂಕದಲ್ಲಿ ಬೇರೆಯದ್ದೇ ಸುದ್ದಿ ಹರಡಿದೆ'' ಎಂದು ಸ್ಪಷ್ಟ ಪಡಿಸಿದ್ದಾರೆ.
ಅಂದು ಏನಾಯಿತು ಎಂಬುದರ ಬಗ್ಗೆ ಮಾತನಾಡಿದ ಹಂಸಲೇಖ '' ಅದೊಂದು ರೆಗ್ಯೂಲರ್ ಚೆಕಪ್ ಅಷ್ಟೇ. ನನಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿ 14 ವರ್ಷ ಆಗಿದೆ. ಅದನ್ನ ಬೈಪಾಸ್ ಸರ್ಜರಿ ಅಂತಾರೆ. 14 ವರ್ಷದಿಂದ ಪ್ರತಿ 6 ತಿಂಗಳಿಗೊಂದು ಸಲ ಚೆಕಪ್ ಮಾಡಿಸಿಕೊಳ್ಳುವುದು ವಾಡಿಕೆ. ಹಾಗಾಗಿಯೇ ಮೊನ್ನೆ ಚೆಕಪ್ ಮಾಡಿಸಿಕೊಳ್ಳುವ ಉದ್ದೇಶದಿಂದ ಆಸ್ಪತ್ರೆಗೆ ಹೋಗಿದ್ದೆ. ಸೆಟ್ ನಲ್ಲಿ ಕೂತಿದ್ದಾಗ ಎದ್ದು ಹೋಗಿದ್ದು ಇಷ್ಟು ದೊಡ್ಡ ಸುದ್ದಿಯಾಗಲು ಕಾರಣವಾಗಿದೆ'' ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಕಾಡುತ್ತಿದ್ದ ಆತಂಕಕ್ಕೆ ತೆರೆ ಎಳೆದಿದ್ದಾರೆ.
''ಮೊದಲು ಸಾಗರ್ ಅಪೋಲೋಗೆ ಹೋಗಿದ್ದೆ. ಅಲ್ಲಿ ಎಲ್ಲರೂ ಖುಷಿಯಿಂದ ಮಾತನಾಡಿಸಿದರು. ನಂತರ ಫೋಟೋಗಳು ತೆಗೆದುಕೊಂಡರು. ನಾನು ರೆಗ್ಯೂಲರ್ ಆಗಿ ಫೋರ್ಟೀಸ್ ಆಸ್ಪತ್ರೆಯಲ್ಲಿ ಚೆಕಪ್ ಮಾಡಿಸಿಕೊಳ್ಳುವುದು. ನಂತರ ಫೋರ್ಟೀಸ್ ಗೆ ಹೋಗಿದ್ದೆ. ಚೆಕಪ್ ನಂತರ ಮನೆಗೆ ಹೋಗಿದ್ದೆ. ಯಾರೂ ಆತಂಕಕ್ಕೆ ಒಳಗಾಗಬೇಡಿ. ನಾನು ಶೂಟಿಂಗ್ ನಲ್ಲಿ ಭಾಗವಹಿಸಿದ್ದೀನಿ'' ಎಂದು ಜೀ ಕನ್ನಡ ಸೆಟ್ ನಲ್ಲಿ ನಡೆಯುತ್ತಿರುವ ಚಿತ್ರೀಕರಣದ ವೇಳೆ ಖಚಿತ ಪಡಿಸಿದ್ದಾರೆ.
ಹಂಸಲೇಖ ಅವರ ಮಾತನಾಡಿರುವ ವಿಡಿಯೋ ನೋಡಿ


Click it and Unblock the Notifications











