ಪೊಲೀಸ್ ಠಾಣೆಗೆ ಹಂಸಲೇಖ ಆಗಮನ ಸಾಧ್ಯತೆ: ಉದ್ರಿಕ್ತ ವಾತಾವರಣ!
ಪೇಜಾವರ ಶ್ರೀಗಳ ಕುರಿತಾದ ಹೇಳಿಕೆ ವಿಚಾರವಾಗಿ ಹಂಸಲೇಖ ವಿರುದ್ಧ ನೀಡಿರುವ ದೂರಿಗೆ ಸಂಬಂಧಿಸಿದಂತೆ ಇಂದು ಸಂಗೀತ ನಿರ್ದೇಶಕ ಹಂಸಲೇಖ ಅವರು ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಲಿದ್ದಾರೆ.
ಹಂಸಲೇಖ ಆಗಮಿಸುವ ಸುದ್ದಿ ಕೇಳಿ ಭಜರಂಗದಳ ಸದಸ್ಯರು ಪೊಲೀಸ್ ಠಾಣೆ ಬಳಿ ಜಮಾಯಿಸಿ ಹಂಸಲೇಖರಿಂದ ಕ್ಷಮೆಗೆ ಒತ್ತಾಯಿಸುವ ಸಾಧ್ಯತೆ ಇದೆ. ಹಂಸಲೇಖ ಜೊತೆಗೆ ನಟ ಚೇತನ್ ಸಹ ಠಾಣೆಗೆ ಆಗಮಿಸುವೆ ಎಂದಿದ್ದು, ಇದು ಠಾಣೆ ಬಳಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ.
''ಹಂಸಲೇಖ ಪೊಲೀಸ್ ಠಾಣೆಗೆ ಹಾಜರಾದರೆ ಅವರೊಟ್ಟಿಗೆ ನಾನು ಸಹ ಠಾಣೆಗೆ ಬರುತ್ತೇನೆ'' ಎಂದು ನಟ ಚೇತನ್ ಈಗಾಗಲೇ ಹೇಳಿದ್ದಾರೆ. ಆದರೆ ಇದನ್ನು ಭಜರಂಗದಳ ಸದಸ್ಯರು ವಿರೋಧಿಸಿದ್ದಾರೆ. ಚೇತನ್ಗೂ ಈ ಪ್ರಕರಣಕ್ಕೆ ನಂಟಿಲ್ಲ ಹಾಗಿದ್ದಾಗ ಚೇತನ್ ಏಕೆ ಬರಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಒಂದೊಮ್ಮೆ ಚೇತನ್ ಏನಾದರೂ ಹಂಸಲೇಖ ಜೊತೆ ಬಂದರೆ ನಾವು ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಭಜರಂಗದಳದ ಮುಖಂಡ ತೇಜಸ್ ಮಾತನಾಡಿ, ''ಹಂಸಲೇಖ ಅವರ ಕ್ಷಮೆಯಿಂದ ತೃಪ್ತಿಯಾಗಿಲ್ಲ. ಹಂಸಲೇಖ ಬೇಷರತ್ತು ಕ್ಷಮೆಯಾಚಿಸಬೇಕು. ಈ ವಿಷಯದಲ್ಲಿ ಚೇತನ್ ಬರುವ ಅವಶ್ಯಕತೆ ಇಲ್ಲ. ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಚೇತನ್ ಈ ದೇಶದ ಪ್ರಜೆ ಅಲ್ಲ. ಚೇತನ್ ಸಸ್ಯಾಹಾರಿ ಹಾಗೂ ಮಾಂಸಹಾರಿಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಪೋಲಿಸ್ ಠಾಣೆ ಒಳಗೆ ಚೇತನ್ ಅವರನ್ನು ಬಿಡಬಾರದು. ಚೇತನ್ ಠಾಣೆಗೆ ಆಗಮಿಸಿದರೆ ಅವರ ವಿರುದ್ಧ ವಿರುದ್ದ ಕಪ್ಪುಪಟ್ಟಿ ಪ್ರದರ್ಶಿಸತ್ತೇವೆ'' ಎಂದಿದ್ದಾರೆ.
ಹಂಸಲೇಖ ಆಗಮಿಸಲಿರುವ ಕಾರಣ ಬಸವನಗುಡಿ ಪೊಲೀಸ್ ಠಾಣೆ ಮುಂಬಾಗ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ನೆರೆದಿದ್ದು ಬ್ಯಾರಿಕೇಡ್ ಹಾಕಿ ಭದ್ರತೆ ಬಿಗಿ ಭದ್ರತೆ ಹೆಚ್ಚಿಸಿದ್ದಾರೆ.
ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಅಸ್ಪೃಶ್ಯತೆ ದೇಶಕ್ಕಂಟಿದ ಶಾಪ ಎಂಬ ವಿಷಯವಾಗಿ ಮಾತನಾಡುತ್ತಿದ್ದ ಹಂಸಲೇಖ, ಪೇಜಾವರ ಶ್ರೀಗಳು ದಲಿತರ ಕೇರಿಗೆ ಹೋದರಾದರೂ ಅಲ್ಲಿಯೂ ಅವರು ಬ್ರಾಹ್ಮಣ್ಯವನ್ನೇ ಪ್ರತಿಪಾದಿಸಿದರು ಎಂಬರ್ಥದ ಮಾತಗಳನ್ನು ಹೇಳುತ್ತಾ, ''ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?'' ಎಂದು ಪ್ರಶ್ನೆ ಮಾಡಿದ್ದರು.
ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಆಡಿದ್ದ ಮಾತುಗಳಿಗೆ ಕೃಷ್ಣ ಮಠದ ವಿಶ್ವೇಶ್ವರ ಪ್ರಸನ್ನ ಸ್ವಾಮೀಜಿ ಸೇರಿದಂತೆ ಹಲವು ಶಾಸಕರು, ಸಂಸದರು, ಬ್ರಾಹ್ಮಣ ಸಂಘ, ಹಿಂದುಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಆ ಬಳಿಕ ಹಂಸಲೇಖ ತಮ್ಮ ಮಾತುಗಳಿಗೆ ಕ್ಷಮೆಯನ್ನೂ ಕೇಳಿದರು. ಆದರೂ ಕೆಲವು ಬ್ರಾಹ್ಮಣ ಸಂಘಗಳು ಹಂಸಲೇಖ ವಿರುದ್ಧ ದೂರು ಸಹ ದಾಖಲಿಸಿದ್ದಲ್ಲದೆ, ಹಂಸಲೇಖ, ಶ್ರೀಗಳ ಬೃಂದಾವನದ ಮುಂದೆ ಬಂದು ಕ್ಷಮೆ ಕೇಳಬೇಕು'' ಎಂದು ಒತ್ತಾಯಿಸಿದ್ದಾರೆ.
ಹಂಸಲೇಖ ವಿರುದ್ಧ ಸತತ ದೂರುಗಳು ದಾಖಲಾದ ಬಳಿಕ ಹಾಗೂ ಸಂಸದರು, ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಬಳಿಕ ನಟ ಚೇತನ್ ಹಂಸಲೇಖರಿಗೆ ಬೆಂಬಲ ಸೂಚಿಸಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಮಾತನಾಡಿದ್ದ ಚೇತನ್, ''ಹಂಸಲೇಖ ಅವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಅವರ ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಕೆಲವು ವಿಚಾರಗಳ ಬಗ್ಗೆ ಮಾತನಾಡ ಬಾರದು ಎನ್ನುವಂತೆ ಕಟ್ಟಿ ಹಾಕಲಾಗುತ್ತಿದೆ. ವಾಕ್ಸ್ವಾತಂತ್ರ ಕಿತ್ತು ಕೊಳ್ಳುವ ಪ್ರಯತ್ನ ಇದು. ಎಲ್ಲರಿಗೂ ಮಾತನಾಡುವ ಮತ್ತು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವ ಹಕ್ಕಿದೆ. ಅದನ್ನು ಯಾರು ಕಸಿದು ಕೊಳ್ಳ ಬಾರದು'' ಎಂದಿದ್ದಾರೆ.


Click it and Unblock the Notifications











