ಈ ಸಿನಿಮಾವನ್ನು ಟೀಕೆ ಮಾಡೋಕೆ ಆಗತ್ತಾ? 'ಆಕ್ಟ್ 1978' ಸಿನಿಮಾದ ಬಗ್ಗೆ ಹಂಸಲೇಖ ಮಾತು
ಕೊರೊನಾ ಲಾಕ್ ಡೌನ್ ಬಳಿಕ ಕನ್ನಡದಲ್ಲಿ ರಿಲೀಸ್ ಆದ ಮೊದಲ ಸಿನಿಮಾ, ಆಕ್ಟ್ 1978 ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಿನಿಮಾ ನೋಡಿ ಹಾಡಿಹೊಗಳುತ್ತಿದ್ದಾರೆ. ಕೊರೊನಾ ಬಳಿಕ ಕನ್ನಡದ ಸಿನಿಮಾವೊಂದಕ್ಕೆ ವ್ಯಕ್ತವಾಗಿರುವ ಅದ್ಭುತ ಪ್ರತಿಕ್ರಿಯೆ ನೋಡಿ ಇಡೀ ಕನ್ನಡ ಚಿತ್ರರಂಗ ನಿಟ್ಟುಸಿರು ಬಿಟ್ಟಿದೆ.
ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆಕ್ಟ್ 1978 ಸಿನಿಮಾ ನೋಡಿ ನಾದಬ್ರಹ್ಮ ಹಂಸಲೇಖ ಕೂಡ ಮೆಚ್ಚಿಕೊಂಡಿದ್ದಾರೆ. ಕುಟುಂಬ ಸಮೇತರಾಗಿ ಸಿನಿಮಾ ನೋಡಿದ ಹಂಸಲೇಖ ಚಿತ್ರಮಂದಿರದಿಂದ ಹೊರಬರುತ್ತಿದ್ದಂತೆ ವಿಡಿಯೋ ಮೂಲಕ ವಿಮರ್ಶೆ ಹಂಚಿಕೊಂಡಿದ್ದಾರೆ. 'ಏನ್ ಸಿನಿಮಾ ರೀ ಅದು? ಅದನ್ನೇನು ಟೀಕೆ ಮಾಡೋಕೆ ಆಗತ್ತಾ? ಒಂದು ಅದ್ಭುತವಾದ ಕಥೆಯುಳ್ಳ ಕನ್ನಡದ ಸಿನಿಮಾ' ಎಂದಿದ್ದಾರೆ ಎಂದು ಹಂಸಲೇಖ ಹಾಡಿ ಹೊಗಳಿದ್ದಾರೆ. ಮುಂದೆ ಓದಿ..

ಕುತೂಹಲದಿಂದ ಚಿತ್ರಮಂದಿರಕ್ಕೆ ಹೋದೆವು
'ಕೊರೊನಾ ವೈರಸ್ ಆದ್ಮೇಲೆ ಏನು ಮಾಡಬೇಕು ಎಂಬುದೇ ನಮಗೆ ಗೊತ್ತಿರಲಿಲ್ಲ. ಎಲ್ಲರೂ ದೂರ ಆಗಿದ್ದೆವು. ಒಬ್ಬರನ್ನೊಬ್ಬರು ಭೇಟಿ ಮಾಡಲು ಆಗುತ್ತಿರಲಿಲ್ಲ. ಈಗ ಸಿನಿಮಾ ಥಿಯೇಟರ್ಗಳು ಓಪನ್ ಆಗಿವೆ. ಸಿನಿಮಾ ನೋಡುವಂತಹ ವಾತಾವರಣ ನಿರ್ಮಾಣ ಆಗಿದೆ. ಇವತ್ತು ಬಹಳ ಸಂತೋಷದಿಂದ ನಾನು, ನನ್ನ ಹೆಂಡತಿ, ಮಗಳು ಮತ್ತು ಗೆಳೆಯರೆಲ್ಲ ಚಿತ್ರಮಂದಿರಕ್ಕೆ ಬಂದೆವು. ಆಕ್ಟ್ 1978 ಸಿನಿಮಾ ಪೋಸ್ಟರ್ ನಮ್ಮನ್ನು ಸೆಳೆಯಿತು. ಕುತೂಹಲದಿಂದ ಚಿತ್ರಮಂದಿರದೊಳೆಗೆ ಹೋದೆವು.

ಏನ್ ಸಿನಿಮಾ ರೀ ಅದು?
ಏನ್ ಸಿನಿಮಾ ರೀ ಅದು? ಅದನ್ನೇನು ಟೀಕೆ ಮಾಡೋಕೆ ಆಗತ್ತಾ? ಒಂದು ಅದ್ಭುತವಾದ ಕಥೆಯುಳ್ಳ ಕನ್ನಡದ ಸಿನಿಮಾ' ಎಂದಿದ್ದಾರೆ ಹಂಸಲೇಖ. ವಿಷಯ ನೋಡಿ ಮುಖಕ್ಕೆ ರಾಚಿದಂತಾಯಿತು 'ನಿರ್ದೇಶಕ ಮಂಸೋರೆ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ನನಗೆ ಅವರು ಯಾರೆಂದು ಗೊತ್ತಿಲ್ಲ. ಆರಂಭದಿಂದ ಕೊನೆವರೆಗೂ ನಾನು ಕಣ್ಣಿನಿಂದ ಸಿನಿಮಾ ನೋಡಿಲ್ಲ. ಹೃದಯದಿಂದ ನೋಡಿದೆ. ಅದ್ಭುತವಾದ ಥೀಮ್, ಅದ್ಭುತವಾದ ಚಿತ್ರಕಥೆ ಇದರಲ್ಲಿ ಇದೆ.

ಈ ವಿಷಯ ನೋಡಿ ಮುಖಕ್ಕೆ ರಾಚಿದಂತಾಯಿತು
ನಿರ್ದೇಶಕರು ಲಿಮಿಟೆಡ್ ಬಜೆಟ್ ನಲ್ಲಿ ಕರ್ಮಷಿಯಲ್ ಟಚ್ ಕೊಡದೇ ಸಿಂಪಲ್ ಆಗಿ ಕಥೆ ಹೇಳಿಕೊಂಡು ಹೋಗಿದ್ದಾರೆ. ಇವತ್ತು ಆ ಸಿನಿಮಾ ನೋಡುತ್ತಿರುವ ನಾವೆಲ್ಲ ಒಂದು ರೀತಿಯಲ್ಲಿ ಲಂಚಾವತಾರದ ವ್ಯವಸ್ಥೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ಎನಿಸಿತು. ನಾವು ಯಾರೂ ಅದರಿಂದ ತಪ್ಪಿಸಿಕೊಂಡಿಲ್ಲ ಎನಿಸುತ್ತದೆ. ಆ ಕಥೆ ಕೇಳಿ, ವಿಷಯ ನೋಡಿ ಮುಖಕ್ಕೆ ರಾಚಿದಂತಾಯಿತು' ಎಂಬುದು ಹಂಸಲೇಖ ಮಾತುಗಳು.

ಕನ್ನಡದ ಗೌರವವನ್ನು ಹೆಚ್ಚಿಸಿರುವ ಸಿನಿಮಾ
'ಒಬ್ಬ ರೈತ ತನ್ನ ಸಾವಿನಿಂದ ಒಂದೆರಡು ಲಕ್ಷ ರೂಪಾಯಿ ಸಿಗುತ್ತೆ ಎಂದು ತೆಂಗಿನ ಮರದಿಂದ ಬಿದ್ದು ಸಾಯುವ ದೃಶ್ಯ ಇದೆಯಲ್ಲ, ಅದೊಂದು ಸಾಕು ಈ ಸಿನಿಮಾ ಚೆನ್ನಾಗಿದೆ ಎಂದು ಹೇಳಲು. ಚಲನಚಿತ್ರ ರಂಗವನ್ನು ಉದ್ದಾರ ಮಾಡುವ ಉದ್ದೇಶದಿಂದ ನಾನು ಮಾತನಾಡುತ್ತಿಲ್ಲ. ಇದು ಕನ್ನಡದ ಗೌರವವನ್ನು ಹೆಚ್ಚಿಸಿರುವ ಸಿನಿಮಾ. ದಯವಿಟ್ಟು ಎಲ್ಲರೂ ಸಿನಿಮಾ ನೋಡಿ. ನಾನು ಪ್ರಚಾರಕ್ಕಾಗಿ ಈ ಮಾತನ್ನು ಹೇಳುತ್ತಿಲ್ಲ. ಬಹಳ ಖುಷಿಯಾಗಿ ಹೇಳುತ್ತಿದ್ದೇನೆ' ಎಂದಿದ್ದಾರೆ ಹಂಸಲೇಖ.
Recommended Video

ಅಂಜಿಕೆ ಇಲ್ಲದ ಸಮಾಜವಾಗಿದೆ ನಮ್ಮದು
'ಈ ಚಿತ್ರದ ಕಡೆಯಲ್ಲಿ ಒಂದು ಮಾತು ಇದೆ. ನಿರ್ದೇಶಕ ಮಂಸೋರೆ ಅವರು ಆ ಮಾತನ್ನು ಯಾಕೆ ಹೇಳಿದ ಅಂತ ನನಗೆ ಗೊತ್ತಿಲ್ಲ. ಅಂಜಲಿ ಎಂಬ ಹೆಸರನ್ನು ಹೇಳಿ ಸಿನಿಮಾ ಮುಕ್ತಾಯ ಮಾಡಲಾಗಿದೆ. ಅದು ಒಂದು ಹೆಸರು ಎಂದು ಅವರು ಮಾಡಿದ್ದಾರೆ. ಆದರೆ ನನಗೆ ಏನು ಅನಿಸಿತು ಎಂದರೆ, ನಮ್ಮ ಸರ್ಕಾರಿ ಅಧಿಕಾರಿಗಳು ಲಂಚ ತೆಗೆದುಕೊಳ್ಳುವುದಕ್ಕೂ ಮುಂಚೆ ಸ್ವಲ್ಪ ಅಂಜಲಿ. ಅಂಜಿಕೆ ಇಲ್ಲದ ಸಮಾಜ ಆಗಿದೆ ನಮ್ಮದು. ಈ ಸಮಾಜವನ್ನು ಸುಧಾರಿಸಲು ಅವರ ಆತ್ಮಸಾಕ್ಷಿಯಿಂದ ಒಂದು ಚೂರು ತಪ್ಪು ಮಾಡುವುದಕ್ಕಿಂತ ಮುಂಚೆ ಅಂಜಲಿ. ದಯವಿಟ್ಟು ಈ ಸಿನಿಮಾವನ್ನು ಗೆಲ್ಲಿಸಿ' ಎಂದು ಹಂಸಲೇಖ ಹೇಳಿದ್ದಾರೆ.


Click it and Unblock the Notifications











