'ಕಾಂತಾರ' ವಿರುದ್ಧ ಹೇಳಿಕೆ: ನಟ ಚೇತನ್ ಎಫ್ಐಆರ್ ರದ್ದಿಗೆ ಕೋರ್ಟ್ ನಕಾರ
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಮಾಡುತ್ತಿರುವ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ದೊಡ್ಡ ಮಟ್ಟಿಗಿನ ಚರ್ಚೆ ಹುಟ್ಟುಹಾಕಿತ್ತು.
'ಕಾಂತಾರ' ಸಿನಿಮಾದ ಚುಂಗು ಹಿಡಿದು ಎಡ-ಬಲದ ರಾಜಕೀಯ ಹೇಳಿಕೆಗಳನ್ನು ಹಲವರು ಹರಿಬಿಟ್ಟಿದ್ದರು. ಅದೇ ಸಮಯದಲ್ಲಿ ಸಿನಿಮಾದ ಬಗ್ಗೆ ಮಾತನಾಡಿದ್ದ ನಟ ಚೇತನ್ ಅಹಿಂಸ, 'ದೈವಾರಾಧನೆ ಹಿಂದೂ ಧರ್ಮದ ಭಾಗವಲ್ಲ'' ಎಂದಿದ್ದರು.
ಫೇಸ್ಬುಕ್ನಲ್ಲಿಯೂ ಈ ಬಗ್ಗೆ ಬರೆದುಕೊಂಡಿದ್ದ ''ರಿಷಬ್ ಶೆಟ್ಟಿ ಅವರು ಚಿತ್ರದಲ್ಲಿ ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿದ್ದು ಎಂದು ಹೇಳಿದ್ದಾರೆ, ಆದರೆ ಇದು ನಿಜವಲ್ಲ ಎಂದಿದ್ದಾರೆ. ಇನ್ನೂ ಮುಂದುವರಿದು ಬರೆದುಕೊಂಡಿರುವ ಚೇತನ್ ಅಹಿಂಸಾ ಪಂಬದ / ನಲಿಕೆ / ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕೂ ಮೊದಲೇ ಇದ್ದವು, ಹೀಗಾಗಿ ಅವು ಹಿಂದೂ ಧರ್ಮಕ್ಕೆ ಸೇರುವುದಿಲ್ಲ ಅವು ಹಿಂದೂ ಧರ್ಮಕ್ಕೂ ಮುನ್ನ ಇದ್ದ ಮೂಲನಿವಾಸಿಗಳ ಆಚರಣೆ'' ಎಂದಿದ್ದರು. ಚೇತನ್ರ ಹೇಳಿಕೆ ಖಂಡಿಸಿ ಹಲವೆಡೆ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.

ಭಜರಂಗದ ದಳ ಕಾರ್ಯಕರ್ತ ಶಿವಕುಮಾರ್ ಎಂಬುವರು ಶೇಷಾದ್ರಿಪುರ ಠಾಣೆಯಲ್ಲಿ ದೂರು ನೀಡಿ, ಕಾಂತಾರ ಚಿತ್ರದಲ್ಲಿನ ದೈವದ ಬಗೆಗಿನ ನಂಬಿಕೆ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಚೇತನ್ ಸಮಾಜದಲ್ಲಿ ಅಶಾಂತಿ ಮೂಡಿಸಿದ್ದಾರೆ. ಆ ಆರೋಪ ಹಿನ್ನೆಲೆ ಐಪಿಸಿ ಸೆ.505 ಅಡಿ ಎಫ್ಐಆರ್ ದಾಖಳಿಸಿ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರು. ಅಂತೆಯೇ ದೂರಿನನ್ವಯ ಎಫ್ಐಆರ್ ಸಹ ದಾಖಲಾಗಿತ್ತು.
ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವಾಗಲೇ ಪ್ರಕರಣವನ್ನು ರದ್ದು ಮಾಡುವಂತೆ ನಟ ಚೇತನ್ ಅಹಿಂಸ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದಲ್ಲಿ ಚೇತನ್ಗೆ ಹಿನ್ನಡೆ ಆಗಿದ್ದು, ಎಫ್ಐಆರ್ ರದ್ದು ಮಾಡಲು ನ್ಯಾಯಾಲಯ ನಿರಾಕರಿಸಿದೆ. ಹಾಗಾಗಿ ಚೇತನ್ ವಿರುದ್ಧ ತನಿಖೆ ಮುಂದುವರೆಯಲಿದೆ.
ನಟ ಚೇತನ್ ಮಾತ್ರವೇ ಅಲ್ಲದೆ, ಸಾಹಿತಿ ಬಿ.ಟಿ.ಲಲಿತಾ ನಾಯಕ್ ಸಹ 'ಕಾಂತಾರ' ಸಿನಿಮಾ ಹಾಗೂ ಅದರಲ್ಲಿ ಬಳಸಿಕೊಳ್ಳಲಾಗಿರುವ ಭೂತಕೋಲದ ಬಗ್ಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದರು. ಇಬ್ಬರ ವಿರುದ್ಧವೂ ಕೆಲವೆಡೆ ದೂರುಗಳು ದಾಖಲಾಗಿದ್ದವು. ದೈವ ಕೋಲ ಮಾಡುವವರು, ಭಕ್ತರು ಸುದ್ದಿಗೋಷ್ಠಿಗಳನ್ನು ನಡೆಸಿ ಚೇತನ್ ಹೇಳಿಕೆಯನ್ನು ಖಂಡಿಸಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಹ ಚೇತನ್ ಹೇಳಿಕೆಯನ್ನು ಖಂಡಿಸಿದ್ದರು.


Click it and Unblock the Notifications











