ಕನ್ನಡ ಆಯ್ತು ಈಗ ಅಣ್ಣಾವ್ರಿಗೆ ಅವಮಾನ: ಗುಮಾನಿ ವ್ಯಕ್ತಪಡಿಸಿದ ಕುಮಾರಸ್ವಾಮಿ
ಡಾ.ರಾಜ್ಕುಮಾರ್ ಭಾವಚಿತ್ರವನ್ನು ಪರಭಾಷೆಯ ಸಿನಿಮಾ ಜೊತೆಗೆ ಸೇರಿಸಿದ್ದಲ್ಲದೆ ರಾಜ್ಕುಮಾರ್ ಹೆಸರ ಕೆಳಗೆ 'ಹಾಫ್ ಬಾಯ್ಲ್' ಎಂದು ಹೆಸರನ್ನು ನೀಡಲಾಗಿದೆ. ಈ ಅಪಸವ್ಯ ನಡೆದಿರುವುದು ಗೂಗಲ್ನಿಂದ.
'ವಿಕ್ರಂ-ವೇದ' ಹೆಸರಿನ ತಮಿಳು ಸಿನಿಮಾದಲ್ಲಿ ನಟಿಸಿರುವವರ ಮಾಹಿತಿಯನ್ನು ಗೂಗಲ್ ನೀಡಿದೆ. ಆ ಪಟ್ಟಿಯಲ್ಲಿ ಡಾ.ರಾಜ್ಕುಮಾರ್ ಹೆಸರು ಮತ್ತು ಭಾವಚಿತ್ರವಿದೆ. ಜೊತೆಗೆ 'ವಿಕ್ರಂ-ವೇದ' ಸಿನಿಮಾದಲ್ಲಿ 'ಹಾಫ್ ಬಾಯ್ಲ್' ಎಂಬ ಪಾತ್ರದಲ್ಲಿ ರಾಜ್ಕುಮಾರ್ ನಟಿಸಿದ್ದರು ಎಂಬ ಮಾಹಿತಿ ನೀಡಲಾಗಿದೆ.
ಹೀಗೆ ಪರಭಾಷೆಯ ಸಿನಿಮಾ ಒಂದರಲ್ಲಿ ಕನ್ನಡದ ಮೇರು ನಟ ರಾಜ್ಕುಮಾರ್ ನಟಿಸಿದ್ದಾರೆ ಎಂದು ತಪ್ಪಾಗಿ ಮಾಹಿತಿ ನೀಡಿರುವುದು ಹಾಗೂ ಅದಕ್ಕಿಂತ ಹೆಚ್ಚಾಗಿ ಕೆಟ್ಟ ಪಾತ್ರವೊಂದರ ಹೆಸರೊಂದನ್ನು ರಾಜ್ಕುಮಾರ್ ಹೆಸರಿಗೆ ಅಂಟಿಸಿರುವುದಕ್ಕೆ ಕನ್ನಡಿಗರ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಹ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಕುಮಾರ್ ವಿಚಾರದಲ್ಲಿ ಅಪಮಾನ ಆಗುತ್ತಿದೆ: ಕುಮಾರಸ್ವಾಮಿ
''ಕನ್ನಡ ಆಯ್ತು, ಈಗ ಕನ್ನಡಿಗರ ಕಣ್ಮಣಿ ರಾಜ್ಕುಮಾರ್ ಅವರ ವಿಚಾರದಲ್ಲಿ ಅಪಮಾನ ಆಗುತ್ತಿದೆ. ಇವೆಲ್ಲ ಯಾಕಾಗುತ್ತಿವೆ, ಯಾರು ಮಾಡುತ್ತಿದ್ದಾರೆ, ಕನ್ನಡಿಗರಿಗೇ ಹೀಗೆ ಏಕೆ ಆಗುತ್ತಿದೆ, ಬೇರೆ ಭಾಷೆಗಿಲ್ಲದ ಪ್ರಾರಬ್ದ ನಮಗೇ ಏಕೆ? ಇಂಥ ಅಪಸವ್ಯಗಳ ಕಡೆಗೆ ಸರ್ಕಾರಗಳು ಪರಿಣಾಮಕಾರಿಯಾಗಿ ನಡೆದುಕೊಳ್ಳಬೇಕು, ಸಂಬಂಧಪಟ್ಟವರು ಸೂಕ್ಷ್ಮವಾಗಬೇಕು'' ಎಂದಿದ್ದಾರೆ ಎಚ್ಡಿ ಕುಮಾರಸ್ವಾಮಿ.

ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು: ಕುಮಾರಸ್ವಾಮಿ
''ಡಾ. ರಾಜ್ಕುಮಾರ್ ಅವರಿಗೆ ಅಪಮಾನ ಮಾಡಿದ್ದು, ಕನ್ನಡ ಕೆಟ್ಟ ಭಾಷೆ ಎಂದು ಕರೆದಿದ್ದು, ಕನ್ನಡದ ಧ್ಜಜಕ್ಕೆ ಅಪಮಾನ ಮಾಡಿದ್ದು ಎಲ್ಲವೂ ಅಂತರ್ಜಾಲ ವೇದಿಕೆಯಲ್ಲಿಯೇ. ಈ ಪ್ರಕರಣಗಳ ಹಿಂದೆ ಯಾರೋ ಕನ್ನಡ ವಿರೋಧಿ ಪಟ್ಟಭದ್ರರು ಇದ್ದಂತೆ ಕಾಣಿಸುತ್ತಿದೆ. ಈ ನಿಟ್ಟಿನಲ್ಲಿ ಗಂಭೀರವಾಗಿ ತನಿಖೆಗಳಾಗಬೇಕು. ಆ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು'' ಎಂದು ಒತ್ತಾಯಿಸಿದ್ದಾರೆ ಕುಮಾರಸ್ವಾಮಿ.

ಒಂದು ಪರಭಾಷೆ ಸಿನಿಮಾದಲ್ಲಷ್ಟೆ ನಟಿಸಿದ್ದಾರೆ
ಡಾ.ರಾಜ್ಕುಮಾರ್ ಅವರು ತಮ್ಮ ಸುಮಾರು ಐದು ದಶಕದ ತಮ್ಮ ನಟನಾ ವೃತ್ತಿಯಲ್ಲಿ ಕೇವಲ ಒಂದು ಪರಭಾಷಾ ಸಿನಿಮಾದಲ್ಲಿ ನಟಿಸಿದ್ದಾರೆ. ರಾಜ್ಕುಮಾರ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಮೊದಲ ಸಿನಿಮಾ 'ಬೇಡರ ಕಣ್ಣಪ್ಪ' ಸಿನಿಮಾದ ತೆಲುಗು ರೀಮೇಕ್ 'ಕಾಳಹಸ್ತಿ ಮಹಾತ್ಮೆ' ಎಂಬ ತೆಲುಗು ಸಿನಿಮಾದಲ್ಲಿ ಡಾ.ರಾಜ್ಕುಮಾರ್ ನಟಿಸಿದ್ದರು. ಅದರಲ್ಲಿಯೂ ಬಹುತೇಕ ಕನ್ನಡದ ನಟರೇ ಇದ್ದರು. ಆ ಸಿನಿಮಾ 1954 ರಲ್ಲಿ ಬಿಡುಗಡೆ ಆಗಿತ್ತು. ಆ ನಂತರ ಯಾವುದೇ ಪರಭಾಷೆ ಸಿನಿಮಾದಲ್ಲಿ ಡಾ.ರಾಜ್ಕುಮಾರ್ ನಟಿಸಲಿಲ್ಲ.
Recommended Video

ರಿಪೋರ್ಟ್ ಮಾಡುವಂತೆ ಒತ್ತಾಯ
ರಾಜ್ಕುಮಾರ್ ಚಿತ್ರವನ್ನು ತೋರಿಸಲಾಗುತ್ತಿರುವ 'ವಿಕ್ರಂ-ವೇದ' ತಮಿಳು ಸಿನಿಮಾವು 2017 ರಲ್ಲಿ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ವಿಜಯ್ ಸೇತುಪತಿ ಹಾಗೂ ಮಾಧವನ್ ನಟಿಸಿದ್ದಾರೆ. ಸಿನಿಮಾದಲ್ಲಿ ಕನ್ನಡಿಗ ಅಚ್ಯುತ್ ಕುಮಾರ್ ಸಹ ನಟಿಸಿದ್ದಾರೆ. ರಾಜ್ಕುಮಾರ್ ಬಗ್ಗೆ ತಪ್ಪು ಮಾಹಿತಿ ನೀಡಿರುವ ಈ ಸಿನಿಮಾದ ಪುಟವನ್ನು ರಿಪೋರ್ಟ್ ಮಾಡಿ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಹಲವರು ಒತ್ತಾಯ ಮಾಡಿದ್ದಾರೆ.


Click it and Unblock the Notifications











