ಜೋಡೆತ್ತುಗಳ ವಿರುದ್ಧ ಸಿಎಂ ಕುಮಾರಸ್ವಾಮಿ ಗರಂ: ಯಾರದು ಡಿ ಬಾಸ್?
ಮಂಡ್ಯ ಲೋಕಸಭೆ ಕ್ಷೇತ್ರ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಸುಮಲತಾ ಅವರ ಪರ 'ಜೋಡೆತ್ತು' ಎನಿಸಿಕೊಂಡಿರುವ ದರ್ಶನ್ ಮತ್ತು ಯಶ್ ನಿಂತಿದ್ರೆ, ಈ ಕಡೆ ಪುತ್ರನ ಪರವಾಗಿ ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಅಖಾಡಕ್ಕೆ ಇಳಿದಿದ್ದಾರೆ.
ಇಷ್ಟು ದಿನ ಮಂಡ್ಯ ಶಾಸಕರು, ಜೆಡಿಎಸ್ ಕಾರ್ಯಕರ್ತರು ದರ್ಶನ್-ಯಶ್ ಬಗ್ಗೆ ಮಾತನಾಡುತ್ತಿದ್ದರು. ಆದ್ರೀಗ, ಸಿಎಂ ಕುಮಾರಸ್ವಾಮಿ ಅವರೇ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
''ಇದು ಜೋಡೆತ್ತುಗಳಲ್ಲ, ಕಳ್ಳೆತ್ತುಗಳು...ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಯಾರದು? ಎಲ್ಲಿದ್ರು ಇಷ್ಟು ದಿನ'' ಎಂದು ದರ್ಶನ್ ಮತ್ತು ಯಶ್ ವಿರುದ್ಧ ಸಿಎಂ ಕುಮಾರಣ್ಣ ಫುಲ್ ಗರಂ ಆಗಿ ಮಾತನಾಡಿದ್ದಾರೆ. ಅಷ್ಟಕ್ಕೂ, ಸಿಎಂ ಆಕ್ರೋಶಗೊಂಡಿದ್ದೇಕೆ? ದರ್ಶನ್ ಬಗ್ಗೆ ಏನಂದ್ರು?

ಇದು ಜೋಡೆತ್ತುಗಳಲ್ಲ, ಕಳ್ಳೆತ್ತು
ಸುಮಲತಾ ಅವರನ್ನ ಗೆಲ್ಲಿಸಲು ದರ್ಶನ್ ಒಬ್ಬರೇ ಸಾಕು ಎಂಬ ಮಾತಿಗೆ ಪ್ರತಿಕ್ರಿಯಿಸಿದ್ದ ದರ್ಶನ್, ''ಇಲ್ಲ ನನ್ನ ಜೊತೆಯಲ್ಲಿ ನಮ್ಮ ಹೀರೋ (ಯಶ್) ಇದ್ದಾರೆ. ನಮ್ಮದು ಜೋಡಿ ಎತ್ತಿನ ಗಾಡಿ'' ಎಂದಿದ್ದರು. ಆದ್ರೀಗ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದು ಜೋಡೆತ್ತುಗಳಲ್ಲ, ಕಳ್ಳೆತ್ತುಗಳು ಎಂದಿದ್ದಾರೆ.

ಯಾರದು ಡಿ ಬಾಸ್?
''ಸಿನಿಮಾದಲ್ಲಿ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್....ಜನಗಳಿಗೆ ಯಾವುತ್ತು ಡಿ ಬಾಸ್ ಆಗೋಕೆ ಆಗಲ್ಲ. ಮಂಡ್ಯದಲ್ಲಿ 39ಜನ ನೀರಿಗೆ ಬಿದ್ದಾಗ ಯಾರಪ್ಪಾ ಬಂದಿದ್ದು? ಆಗ ಎಲ್ಲೋಗಿದ್ರು ಇವರು. ಈಗ ಅಮ್ಮನ ಪರ ಬಂದಿದ್ದಾರಂತೆ'' ಎಂದು ಪ್ರಶ್ನಿಸಿದ್ದಾರೆ.

ಆಡಿಯೋ ಬಾಂಬ್
ದರ್ಶನ್ ಅವರ ಧ್ವನಿ ಎಂದು ಹೇಳಲಾಗುತ್ತಿರುವ ಆಡಿಯೋ ಬಗ್ಗೆಯೂ ಸಿಎಂ ಪ್ರಸ್ತಾಪಿಸಿದ್ದಾರೆ. ''ದರ್ಶನ್ ಧ್ವನಿ ಎಂದು ಬಿಂಬಿತವಾಗಿರುವ ಆಡಿಯೋದಲ್ಲಿ ಮಂಡ್ಯ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಸಂಭಾಷಣೆಯನ್ನ ಕೇಳಿದ್ರೆ ಮಂಡ್ಯಕ್ಕೆ ಕಾಲಿಡಲು ಬಿಡಲ್ಲ'' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ
ಇನ್ನು ನಟ ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು " ನಟ ದರ್ಶನ್ ಮನೆಗೆ ಕಲ್ಲು ಹೊಡೆದ ಮರುಕ್ಷಣವೇ ಆ ಭಾಗದ ಅಧಿಕಾರಿಗಳಿಗೆ ಸಿಸಿಟಿವಿ ಫೂಟೇಜ್ ಸೀಜ್ ಮಾಡಲು ಹೇಳಿದ್ದೆ. ಆದರೆ ಸಿಸಿಟಿವಿ ಆಫ್ ಆಗಿತ್ತಂತೆ. ಹಾಗಾದ್ರೆ ಅದನ್ನು ಯಾರು ಆಫ್ ಮಾಡಿದ್ದು...'' ಎಂದು ಪ್ರಶ್ನಿಸಿದ್ದಾರೆ.

ಒಬ್ಬ ನಿಖಿಲ್ ಕುಮಾರ್
ಒಬ್ಬ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಇಂದು ಯಾರೆಲ್ಲಾ ಒಂದಾಗಿದ್ದಾರೆ ಎಂಬುದು ಗಮನಿಸುತ್ತಿದ್ದೇವೆ. ಎಲ್ಲರ ವಿಷ್ಯವೂ ನಮಗೆ ಗೊತ್ತಿದೆ. ಇಂಚಿಂಚು ಮಾಹಿತಿಯೂ ನನಗೆ ಬರುತ್ತೆ. ಎಲ್ಲವನ್ನ ಸಭೆಯಲ್ಲಿ ಹೇಳ್ತೀನಿ'' ಎಂದು ಕುಮಾರಸ್ವಾಮಿ ಅವರು ನಿನ್ನೆ ರಾತ್ರಿ ಮಾಧ್ಯಮಗಳ ಜೊತೆ ಮಾತನಾಡಿದ್ರು.


Click it and Unblock the Notifications











