ಕುಮಾರಣ್ಣನ ಬಜೆಟ್: ಮೈಸೂರಿನಿಂದ ರಾಮನಗರಕ್ಕೆ ಫಿಲ್ಮ್ ಸಿಟಿ ಶಿಫ್ಟ್
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದೆ. ಬಹಳ ಕುತೂಹಲ ಮೂಡಿಸಿದ್ದ ಬಜೆಟ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇನು ಎಂದು ನೋಡುವ ಸಿನಿಮಾ ಮಂದಿಗೆ ಸರ್ಪ್ರೈಸ್ ಎದುರಾಗಿದೆ.
ಕುಮಾರಸ್ವಾಮಿ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ದೊಡ್ಡ ಮಟ್ಟದ ಬಂಪರ್ ಇಲ್ಲವಾದರೂ, ಚಿತ್ರರಂಗದ ಕನಸಿನ ಕೂಸು ಫಿಲ್ಮಿಸಿಟಿಯ ಸ್ಥಳಾಂತರವಾಗಿರುವುದು ವಿಶೇಷ. ಈ ಹಿಂದೆ ಮೈಸೂರಿನಲ್ಲಿ ನಿರ್ಮಾಣವಾಗಲಿದೆ ಎನ್ನಲಾಗಿದ್ದ ಫಿಲ್ಮ್ ಸಿಟಿ ಈಗ ರಾಮನಗರಕ್ಕೆ ಶಿಫ್ಟ್ ಆಗಿದೆ. ಇನ್ನುಳಿದಂತೆ ಚಿತ್ರರಂಗಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು ಇಂತಿವೆ....

* ಡಾ|| ರಾಜ್ಕುಮಾರ್ ಸ್ಮರಣಾರ್ಥ ಶ್ರೀ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸುಸಜ್ಜಿತವಾದ ಯೋಗ ಕೇಂದ್ರ ಸ್ಥಾಪಿಸಲಾಗುವುದು. (ಇದನ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಂತಿಮ ಬಜೆಟ್ ನಲ್ಲಿ ಘೋಷಿಸಿದ್ದರು)
* ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯವನ್ನು ತೆರೆಯಲು 30 ಕೋಟಿ ರೂ.ಗಳ ಬಂಡವಾಳ ನೀಡಲಾಗುತ್ತಿದೆ.
''ಚಲನಚಿತ್ರ ಉದ್ಯಮವು ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ. ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಿತ್ರದ ತಯಾರಿಕೆ ಬಗ್ಗೆ, ನಿರ್ದೇಶನ, ಛಾಯಾಚಿತ್ರ, ಧ್ವನಿ, ಸಂಕಲನ ಇತ್ಯಾದಿ ವಿಷಯಗಳಲ್ಲಿ ತರಬೇತಿ ನೀಡಿದಲ್ಲಿ ಚಿತ್ರೋದ್ಯಮಕ್ಕೆ ಸಾಕಷ್ಟು ಅನುಕೂಲವಾಗುತ್ತದೆ'' ಎಂದು ಸಿಎಂ ತಿಳಿಸಿದ್ದಾರೆ.
* ರಾಮನಗರದ ಫಿಲ್ಮ್ ಸಿಟಿಯಲ್ಲಿ ಛಾಯಾಚಿತ್ರ, ಸಂಕಲನ, ಸೌಂಡ್ ರೆರ್ಕಾಡಿಂಗ್ ಮಾಡುವ ಸಂಸ್ಥೆ, ಅನಿಮೇಷನ್ ಸ್ಟುಡಿಯೋಗಳು, ಕಂಪ್ಯೂಟರ್ ಗ್ರಾಫಿಕ್ ಸ್ಟುಡಿಯೋಗಳು ಹಾಗೂ ಚಲನಚಿತ್ರ ರಂಗಕ್ಕೆ ಸೇವೆ ಸಲ್ಲಿಸುವ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು 40 ಕೋಟಿ ರೂ.ಗಳ ಬಂಡವಾಳ ಹೂಡಿಕೆ.
* ಹೊರದೇಶ ದಿಂದ ಚಿತ್ರ ನಿರ್ಮಾಣಕ್ಕಾಗಿ ಬರುವ ಕಲಾವಿದರು ಮತ್ತು ತಂತ್ರಜ್ಞರಿಗೆ ವಸತಿ ಹಾಗೂ ಇನ್ನಿತರೆ ಅವಶ್ಯಕ ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕಾಗಿ 20 ಕೋಟಿ ರೂ.ಗಳು ನೀಡಲಾಗುತ್ತಿದೆ.


Click it and Unblock the Notifications











