'ಕೆ ಮಂಜು ಯಾರು ಗೊತ್ತಿಲ್ಲ, ಕೆಲವರಿಗೆ ನಾನು ಖಳನಾಯಕ ಆಗಿದ್ದೇನೆ' - ಸಚಿವ ಸುಧಾಕರ್
ಚಿತ್ರಮಂದಿರಗಳಲ್ಲಿ ಮತ್ತೆ 50 ಪರ್ಸೆಂಟ್ ಆದೇಶ ಹೊರಡಿಸಿದ್ದಕ್ಕೆ ಚಿತ್ರರಂಗದ ಹಲವರು ವಿರೋಧ ವ್ಯಕ್ತಪಡಿಸಿದ್ದರು. ನಿರ್ಮಾಪಕ ಕೆ ಮಂಜು ಮಾತನಾಡಿ ''ಸಚಿವ ಸುಧಾಕರ್ ಅವರಿಗೆ ಖಾತೆ ಬದಲಾಯಿಸಿ, ಬೇರೆ ಯಾರಿಗಾದರೂ ಖಾತೆಯ ಜವಾಬ್ದಾರಿ ಕೊಡಿ'' ಎಂದು ಆಗ್ರಹಿಸಿದ್ದರು.
ಕೆ ಮಂಜು ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ ಸುಧಾಕರ್ ''ಕೆ ಮಂಜು ಯಾರು ಎಂದೇ ಗೊತ್ತಿಲ್ಲ, ಕೆಲವರಿಗೆ ನಾನು ಖಳನಾಯಕ ಆಗಿ ಕಾಣುತ್ತಿದ್ದೇನೆ'' ಎಂದಿದ್ದಾರೆ
''ಕೆ ಮಂಜು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಕೆಲವರ ಪಾಲಿಗೆ ನಾನು ಖಳನಾಯಕನಾಗಿ ಕಾಣಿಸುತ್ತಿದ್ದೇನೆ. ಆದರೆ, ಬಹಳಷ್ಟು ಜನರಿಗೆ ಒಬ್ಬ ನಾನು ಆರೋಗ್ಯ ಸಚಿವನಾಗಿ ಏನು ಮಾಡಬೇಕು ಅದನ್ನು ಅಂತಃಕರಣದಿಂದ ಮಾಡುತ್ತಿದ್ದೇನೆ. ಹಾಗಾಗಿ, ಇಂತಹದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ'' ಎಂದು ಹೇಳಿದ್ದಾರೆ.

ಪ್ರತಿ ಬಾರಿ ಮಾತನಾಡಬೇಕಾದರೂ 'ಜನರ ಆರೋಗ್ಯ ಮುಖ್ಯ' ಎಂದು ಒತ್ತಿ ಒತ್ತಿ ಹೇಳುತ್ತಿದ್ದ ಸುಧಾಕರ್ ಅವರು, ಥಿಯೇಟರ್ಗಳ ವಿಚಾರದಲ್ಲಿ ಹೆಚ್ಚುವರಿಯಾಗಿ ಕಾಲಾವಕಾಶ ಕೊಟ್ಟಿದ್ದೇಕೆ ಎಂಬ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್ ''ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆಗಿರುತ್ತದೆ, ಹಣ ಹಿಂತಿರುಗಿಸಲು ಸಾಧ್ಯವಿಲ್ಲ ಎಂಬ ಬೇಡಿಕೆಯನ್ನು ಸಿಎಂ ಮುಂದೆ ಇಟ್ಟಿದ್ದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಈ ನಿರ್ಧಾರ ಪ್ರಕಟಿಸಿದ್ದಾರೆ'' ಎಂದು ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೂ ಮುಂಚೆ ಮಾಧ್ಯಮಗಳ ಜೊತೆ ಮಾತನಾಡಿದ್ದ ನಿರ್ಮಾಪಕ ಕೆ ಮಂಜು ''60-70 ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡಿರ್ತಾರೆ. 1ನೇ ತಾರೀಖು ಸಿನಿಮಾ ರಿಲೀಸ್ ಆಗುತ್ತೆ, 2ನೇ ತಾರೀಖು 50 ಪರ್ಸೆಂಟ್ ಅಂದ್ರೆ ಹೇಗೆ? ಏಕಾ ಏಕಿ ಈ ನಿರ್ಧಾರ ಏಕೆ? ಪದೇ ಪದೇ ಚಿತ್ರರಂಗ ಮತ್ತು ಜಿಮ್ ಟಾರ್ಗೆಟ್ ಮಾಡುವುದು ಏಕೆ?'' ಎಂದು ಪ್ರಶ್ನಿಸಿದ್ದರು.


Click it and Unblock the Notifications











