ಕೆ.ಎಫ್.ಸಿ.ಸಿಗೆ ನಿರ್ಮಾಪಕ ಎ.ಗಣೇಶ್ ಬರೆದಿರುವ ಪತ್ರದಲ್ಲೇನಿದೆ?
ವಿವಾದಗಳ ಗೂಡಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ಬೆಳಗ್ಗಿನಿಂದ ನಿರ್ಮಾಪಕರ ಪ್ರತಿಭಟನೆ ನಡೆಯುತ್ತಿದೆ. ಕೆ.ಎಫ್.ಸಿ.ಸಿ ಪದಾಧಿಕಾರಿಗಳ ಜೊತೆ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಮಾತುಕತೆ ನಡೆಸಿ, ನಾಳೆ ಕಲಾವಿದರ ಸಂಘ, ವಿತರಕರ ಸಂಘ ಮತ್ತು ಪ್ರದರ್ಶಕರ ಸಂಘದೊಂದಿಗೆ ಸಭೆ ನಡೆಸುವುದಾಗಿ ತೀರ್ಮಾನಿಸಿದ್ದಾರೆ.
ಈ ವೇಳೆ, ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಎ.ಗಣೇಶ್, ಮಾನ್ಯ ಅಧ್ಯಕ್ಷರಿಗೊಂದು ಪತ್ರ ಬರೆದಿದ್ದಾರೆ. ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ನಿರ್ಮಾಪಕರ ಸಮಸ್ಯೆ ಬಗೆಹರಿಯದಿದ್ದರೆ ಚಿತ್ರೋದ್ಯಮ ಬಂದ್ ಮಾಡುವುದಾಗಿ ಪತ್ರದಲ್ಲಿ ಎ.ಗಣೇಶ್ ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ, ಪತ್ರದಲ್ಲೇನಿದೆ..? ಮುಂದೆ ಓದಿ..... [ನಟ ರಮೇಶ್ ಅರವಿಂದ್ ವಿರುದ್ಧ ತಿರುಗಿಬಿದ್ದ ಕೃಷ್ಣೇಗೌಡ]

ಇಂದ,
ಶ್ರೀ ಎ.ಗಣೇಶ್
ಉಪಾಧ್ಯಕ್ಷರು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಬೆಂಗಳೂರು
ಗೆ,
ಮಾನ್ಯ ಅಧ್ಯಕ್ಷರು
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಬೆಂಗಳೂರು
ಮಾನ್ಯರೇ,
ವಿಷಯ : ಕನ್ನಡ ಚಲನಚಿತ್ರ ನಿರ್ಮಾಪಕರ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ
ವಾಣಿಜ್ಯ ಮಂಡಳಿಯು ದಿನಾಂಕ 31-5-2015 ರಂದು ಆಯೋಜಿಸಿದ್ದ ನಿರ್ಮಾಪಕರ ಮಹಾಸಭೆಯಲ್ಲಿ ಸುಮಾರು 250ಕ್ಕೂ ಹೆಚ್ಚು ನಿರ್ಮಾಪಕರು ಭಾಗವಹಿಸಿ, ಸುದೀರ್ಘವಾಗಿ ಚರ್ಚಿಸಿದ ನಂತರ ಕೆಳಕಂಡ ಸಮಸ್ಯೆಗಳ ಬಗ್ಗೆ ವಾಣಿಜ್ಯ ಮಂಡಳಿ ಕೂಡಲೆ ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು.[ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳುವವರೆಗೂ ದಿನಾಂಕ 1-6-2015 ರಿಂದ ವಾಣಿಜ್ಯ ಮಂಡಳಿಯ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸುವುದಲ್ಲದೇ, ಇಂದಿನಿಂದ ಹೊಸ ಚಿತ್ರಗಳ ಚಿತ್ರೀಕರಣವನ್ನು ಮಾಡುವುದಿಲ್ಲ.[ಒಗ್ಗೂಡದ ಕಲಾವಿದರ ಬಗ್ಗೆ ನಟ ಜಗ್ಗೇಶ್ ಗರಂ]
ಹಾಗೆಯೇ, ದಿನಾಂಕ 10-6-2015ರೊಳಗೆ ನಿರ್ಮಾಪಕರುಗಳ ಪ್ರಮುಖ ಸಮಸ್ಯೆಗಳನ್ನು ಇತ್ಯರ್ಥಪಡಿಸದಿದ್ದ ಪಕ್ಷದಲ್ಲಿ ನಿರ್ಮಾಪಕರೆಲ್ಲರೂ ಸರಣಿ ಸತ್ಯಾಗ್ರಹ ನಡೆಸುವುದಾಗಿ ನಿರ್ಧರಿಸಿರುತ್ತಾರೆ. ಆದ್ದರಿಂದ ಕೂಡಲೆ ಕಾರ್ಯಕಾರಿ ಸಮಿತಿ ಸಭೆ ಕರೆದು ಕೆಳಕಂಡ ಸಮಸ್ಯೆಗಳನ್ನು ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳಬೇಕಾಗಿ ನಿರ್ಮಾಪಕ ಸದಸ್ಯರೆಲ್ಲರ ಪರವಾಗಿ ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಒಂದು ವೇಳೆ ವಾಣಿಜ್ಯ ಮಂಡಳಿಯು ಈ ಕೂಡಲೆ ಸಮಸ್ಯೆಗಳನ್ನು ಇತ್ಯರ್ಥಪಡಿಸದಿದ್ದರೆ, ದಿನಾಂಕ 1-7-2015 ರಂದು ಚಿತ್ರೀಕರಣ ನಡೆಸದೆ ಚಿತ್ರೋದ್ಯಮ ಬಂದ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆಂಬ ಅಂಶವನ್ನು ತಮ್ಮ ಆದ್ಯ ಗಮನಕ್ಕೆ ತರುತ್ತಿದ್ದೇವೆ.

- ಕಲಾವಿದರು ನಿರ್ಮಾಪಕರಿಗೆ ಸಂಪೂರ್ಣ ಸಹಕಾರ ನೀಡುವ ಬಗ್ಗೆ, (ರಿಯಾಲಿಟಿ ಶೋನಲ್ಲಿ ಕಲಾವಿದರು ಭಾಗವಹಿಸುತ್ತಿರುವುದು, ಚಿತ್ರದ ಪ್ರಚಾರ, ಇತರೆ) ಟಿವಿ, ಸ್ಯಾಟೆಲೈಟ್ ಹಕ್ಕು ಮಾರಾಟ ಆಗದಿರುವ ಬಗ್ಗೆ.
- ಯು.ಎಫ್.ಓ ಕ್ಯೂಬ್ ನವರು ಚಿತ್ರದ ಪ್ರಾರಂಭ ಮತ್ತು ಮಧ್ಯಂತರದ ಜಾಹೀರಾತುಗಳನ್ನು ಪ್ರಚಾರ ಮಾಡುತ್ತಿದ್ದು ಇದರಿಂದ ಬರುವ ಆದಾಯದಲ್ಲಿ ನಿರ್ಮಾಪಕರಿಗೂ ಪಾಲು ನೀಡುವ ಬಗ್ಗೆ.
- ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಚಿತ್ರಗಳನ್ನು ಶೇಕಡಾವಾರು ಪದ್ದತಿಯಲ್ಲಿ ಪ್ರದರ್ಶಿಸುತ್ತಿದ್ದು, ಅದೇ ರೀತಿ ಏಕಪರದೆ ಚಿತ್ರಮಂದಿರಗಳಲ್ಲಿಯೂ ಸಹ ಶೇಕಡಾವಾರಿನಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಬಗ್ಗೆ.[ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು]
- ಕನ್ನಡ ಚಿತ್ರಗಳಿಗೆ ಬಿಡುಗಡೆಯ ಮುನ್ನವೇ ಕೆಲವು ಚಿತ್ರಮಂದಿರಗಳಲ್ಲಿ ಸಂಬಂಧಪಟ್ಟ ನಿರ್ಮಾಪಕರು/ವಿತರಕರಿಂದ ಮುಂಗಡ ಹಣ ಪಡೆಯುತ್ತಿರುವ ಬಗ್ಗೆ.
- ಎಫ್.ಎಂ ರೇಡಿಯೋಗಳಲ್ಲಿ ಕನ್ನಡ ಚಿತ್ರಗಳ ಹಾಡುಗಳನ್ನ ಪ್ರಸಾರ ಮಾಡದಿರುವ ಬಗ್ಗೆ.
ಮೇಲ್ಕಂಡ ಸಮಸ್ಯೆಗಳನ್ನು ತುರ್ತು ಎಂದು ಪರಿಗಣಿಸಿ ಕೂಡಲೆ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ವಂದನೆಗಳು,
ತಮ್ಮ ವಿಶ್ವಾಸಿ
ಎ.ಗಣೇಶ್.


Click it and Unblock the Notifications











