'ಕಾಂತಾರ' ಹಾಗೂ ದೈವದ ವಿರುದ್ಧ ಹೇಳಿಕೆ: ಸಾಹಿತಿ ಬಿಟಿ ಲಲಿತಾ ನಾಯಕ್ ವಿರುದ್ಧ ದೂರು
'ಕಾಂತಾರ' ಹಾಗೂ ದೈವದ ವಿರುದ್ಧ ಹೇಳಿಕೆ: ಸಾಹಿತಿ ಬಿಟಿ ಲಲಿತಾ ನಾಯಕ್ ವಿರುದ್ಧ ದೂರು
ತುಳುನಾಡಿನ ದೈವಾರಾಧನೆ ಸಂಸ್ಕೃತಿಯನ್ನು ವಿಷಯವಾಗಿಟ್ಟುಕೊಂಡು ನಿರ್ಮಿಸಲಾಗಿರುವ 'ಕಾಂತಾರ' ಸಿನಿಮಾ ದೇಶದಾದ್ಯಂತ ದೊಡ್ಡ ಹಿಟ್ ಆದ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೂ ಏರ್ಪಟ್ಟು, ಕೆಲವು ಹಿರಿಯ ಸಾಹಿತಿಗಳು, ಪತ್ರಕರ್ತರು ಹಲವರು ಸಿನಿಮಾದ ಬಗ್ಗೆ, ಸಿನಿಮಾದಲ್ಲಿ ತೋರಿಸಲಾಗಿರುವ ದೈವ ಸಂಸ್ಕೃತಿ ಆಚರಣೆ ಬಗ್ಗೆ ಮಾತನಾಡಿದ್ದರು.
ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ರಿಷಬ್ ಶೆಟ್ಟಿ, ನರೇಂದ್ರ ಮೋದಿಯವರನ್ನು ಅದ್ಭುತ ನಾಯಕನೆಂದು, ರಾಹುಲ್ ಗಾಂಧಿಯ ಬಗ್ಗೆ ಏನೂ ಹೇಳದೆ 'ನೋ ಕಮೆಂಟ್ಸ್' ಎಂಬ ಬಳಿಕವಂತೂ ಬಿಜೆಪಿಯನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿರುವ ಕೆಲವು ಸಾಹಿತಿಗಳು 'ಕಾಂತಾರ' ಸಿನಿಮಾ ಹಾಗೂ ಅದರಲ್ಲಿ ತೋರಿಸಲಾಗಿರುವ ದೈವಾರಾಧನೆ ಬಗ್ಗೆ ಕೆಲವು ಹೇಳಿಕೆಗಳನ್ನು ನೀಡಿದ್ದರು. ಅದರಲ್ಲಿ ಹಿರಿಯ ಸಾಹಿತಿ ಬಿಟಿ ಲಲಿತಾ ನಾಯಕ್ ಸಹ ಒಬ್ಬರು.
ತುಳುನಾಡಿನ ಭೂತಾರಾಧನೆ ಮೂಢನಂಬಿಕೆ, ಅವರ ಮೈಮೇಲೆ ದೇವರು ಬರುವುದು ಸುಳ್ಳು ಎಂದು ಸಾಹಿತಿ ಬಿಟಿ ಲಲಿತಾ ನಾಯಕ್ ಹೇಳಿದ್ದರು. ಇದೇ ಕಾರಣಕ್ಕಾಗಿ ಲಲಿತಾ ನಾಯಕ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಗೆ ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಉಮೇಶ್ ಪಕ್ಕಲು ಎಂಬವರು ದೂರು ನೀಡಿದ್ದಾರೆ. ಭಾರತೀಯ ದಂಡಸಂಹಿತೆ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಲಿಖಿತ ದೂರು ನೀಡಲಾಗಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ನಿಯಮದಡಿ ಪ್ರಕರಣ ದಾಖಲಿಸುವಂತೆ ಉಡುಪಿ ನಗರ ಠಾಣೆಗೆ ದೂರು ನೀಡಲಾಗಿದೆ.

ಧಾರ್ಮಿಕ ನಂಬಿಕೆ ಮತ್ತು ಭಾವನೆಗೆ ಘಾಸಿ: ಶ್ರೀಕಾಂತ್ ಶೆಟ್ಟಿ
ಮುಂದೆ ನ್ಯಾಯಾಲಯದಲ್ಲೂ ಖಾಸಗಿ ದೂರು ದಾಖಲಿಸುವ ಎಚ್ಚರಿಕೆಯನ್ನು ಹಿಂದೂ ಜಾಗರಣ ವೇದಿಕೆ ನೀಡಿದೆ. ಲಲಿತಾ ನಾಯಕ್ ಹೇಳಿಕೆಯಿಂದ ಧಾರ್ಮಿಕ ನಂಬಿಕೆ ಮತ್ತು ಭಾವನೆಗೆ ಘಾಸಿಯಾಗಿದೆ. ಒಂದು ವರ್ಗ, ಸಮುದಾಯದ ಅವಹೇಳನವಾದಾಗ ಜಾರಿಯಾಗುವ ಸೆಕ್ಷನ್ ಹಾಕುವಂತೆ ಮನವಿ ಮಾಡಿದ್ದೇವೆ. ಮೂರು ವರ್ಷ ಶಿಕ್ಷೆ, ದಂಡ ವಿಧಿಸಬೇಕು ಎಂದು ಹಿಂದು ಜಾಗರಣಾ ವೇದಿಕೆ ಒತ್ತಾಯ ಮಾಡಿದೆ ಎಂದಿದ್ದಾರೆ ಉಮೇಶ್ ಪಕ್ಕಲು.

'ಬಿಟಿ ಲಲಿತಾ ನಾಯಕ್ ಕೆಟ್ಟದಾಗಿ ಮಾತನಾಡಿದ್ದಾರೆ'
''ಧೈವಾರಾಧನೆ ಮೂಡನಂಬಿಕೆ, ವೇಷ ಕಟ್ಟಿ ಕುಣಿತಾರೆ, ಅದೊಂದು ಮಾನಸಿಕ ಸಮಸ್ಯೆ'' ಅಂತೆಲ್ಲ ಲಲಿತಾ ನಾಯಕ್ ಮಾತನಾಡಿದ್ದಾರೆ. ಬಿಟಿ ಲಲಿತಾ ನಾಯಕ್ ಅವರ ಹೇಳಿಕೆ ಕಟುವಾಗಿ ಖಂಡಿಸುತ್ತೇವೆ. ತುಳುನಾಡಿನ ಕೋಟ್ಯಾಂತರ ಜನರ ಭಾವನೆಗೆ ಧಕ್ಕೆಯಾಗಿದೆ. ಹಿಂದೂ ಜಾಗರಣ ವೇದಿಕೆ ಬಲವಾಗಿ ಖಂಡಿಸುತ್ತದೆ. ತುಳು ನಾಡಿನ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿರುವುದು ಸಹಿಸಲು ಸಾಧ್ಯವಿಲ್ಲ. ಬಯಲು ಸೀಮೆಯವರಿಗೆ ತುಳುನಾಡಿನ ಧೈವಾರಾದನೆ ಬಗ್ಗೆ ಸ್ಪಷ್ಟ ಚಿತ್ರಣ, ಕಲ್ಪನೆ ಇಲ್ಲ. ಆಪ್ತಮಿತ್ರ, ನಾ ನಿನ್ನ ಬಿಡಲಾರೆ ಮೊದಲಾದ ಚಿತ್ರಗಳಲ್ಲಿ ಬರುವ ದೈವಗಳು ಆರಾಧನೆ ಆಗಲ್ಲ ಅಂತಾ ಶ್ರೀಕಾಂತ್ ಶೆಟ್ಟಿ ಕಿಡಿಕಾರಿದ್ದಾರೆ.

'ದೈವಾರಾಧಕರನ್ನು ಬಿ.ಟಿ ಲಲಿತಾ ನಾಯಕ್ ಹೀಯಾಳಿಸಿದ್ದಾರೆ'
ದೈವಾರಾಧನೆ ನಮ್ಮ ಜೀವನದ ಅವಿಭಾಜ್ಯ ಅಂಗ. ನಾವು ನಮ್ಮ ಮನೆಗಳಲ್ಲಿ ದೈವಕ್ಕೆ ಮೊದಲು ಕೈ ಮುಗಿದು ಮುಂದಿನ ಕೆಲಸ ಮಾಡುವುದು ಸಂಪ್ರದಾಯ. ನಮ್ಮಲ್ಲಿ ನಮ್ಮ ನೆಲಮೂಲದ ಧೈವಗಳಿಗೆ ಮೊದಲ ಸ್ಥಾನ ಆನಂತರದಲ್ಲಿ ದೇವರಿಗೆ ಸ್ಥಾನ.ದೈವಾರಾದನೆ ಕುರಿತು ಹಾದಿ ಬೀದಿಯಲ್ಲಿ ಹೋಗುವವರು ಹಗುರವಾಗಿ ಮಾತನಾಡಿದ್ರೆ ಸಹಿಸಲು ಆಗಲ್ಲ. ದೈವಾರಾಧಕರನ್ನು ಬಿ.ಟಿ ಲಲಿತಾ ನಾಯಕ್ ಹೀಯಾಳಿಸಿದ್ದಾರೆ ಎಂದಿದ್ದಾರೆ ಶ್ರೀಕಾಂತ್ ಶೆಟ್ಟಿ.

ತುಳುನಾಡಿನ ಜನ ಸುಮ್ಮನಿರಲ್ಲ: ಶ್ರೀಕಾಂತ್ ಶೆಟ್ಟಿ
ಸರ್ಕಾರಕ್ಕೆ ಮಾಸಾಶನ ನಿಲ್ಲಿಸಲು ಲಲಿತಾ ನಾಯಕ್ ಮನವಿ ಮಾಡಿದ್ದಾರೆ. ಬಡವರ ಶೋಷಿತರ ಪರ ಎನ್ನುವ ವಿಚಾರವಾದಿಗಳು. ತಳಸಮುದಾಯ ಎಂದು ಗುರುತಿಸಿಕೊಂಡಿರುವ ಪಾಣಾರ, ಪಂಬದ, ನಲಿಕೆ ಸಮುದಾಯ ಹೀಗೆ ಈ ಸಮುದಾಯದ ಹಿರಿಯರಿಗೆ ಸಣ್ಣ ಮಾಸಾಶನ ನೀಡಲು ಮುಂದಾಗಿದೆ ಸರ್ಕಾರ. ಈ ಸಣ್ಣ ಮಾಸಾಶನವನ್ನೂ ಕಿತ್ತುಕೊಳ್ಳಲು ಹೊರಟಿರುವುದು ಅಕ್ಷಮ್ಯ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ದೈವಾರಾದನೆ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದರೆ ತುಳುನಾಡಿನ ಜನರು ಸುಮ್ಮನಿರಲ್ಲ ಅಂತಾ ಶ್ರೀಕಾಂತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











