ಸೂಪರ್ ಸ್ಟಾರ್ ರಜನಿಕಾಂತ್ ಎಂದೂ ಮರೆಯದ ಹೋಳಿ ಹಬ್ಬ
ಇಂದು ಹೋಳಿ ಹಬ್ಬ. ಬರಿದಾದ ಬದುಕಿನಲ್ಲಿ ಬಣ್ಣದ ರಂಗನ್ನ ಚೆಲ್ಲೋ ರಂಗು ರಂಗಿನ ಹಬ್ಬ ಈ ಹೋಳಿ. ಬಣ್ಣದ ಓಕುಳಿಯನ್ನ ಎರಚಾಡಿ ಸಂಭ್ರಮಿಸೋ ಈ ಹಬ್ಬ ಸೂಪರ್ ಸ್ಟಾರ್ ರಜನಿಕಾಂತ್ ಪಾಲಿಗೆ ಸೂಪರ್ ಟ್ವಿಸ್ಟ್ ಕೊಟ್ಟ ದಿನ ಅನ್ನೋದು ಅನೇಕರಿಗೆ ಗೊತ್ತಿಲ್ಲ.
ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೇನೆ ಎಂಟರ್ಟೇನ್ಮೆಂಟ್ ಗಾಡ್. ದಕ್ಷಿಣ ಭಾರತದ 'ತಲೈವಾ' ಇಂದು ವಿಶ್ವದಾದ್ಯಂತ ಹಬ್ಬಿಸಿರುವ ಫ್ಯಾನ್ ಫೀವರ್ ಅಂತಿಂಥದ್ದಲ್ಲ. ಒಂದ್ಕಾಲದಲ್ಲಿ ಬಿಟಿಎಸ್ ಬಸ್ ಕಂಡಕ್ಟರ್ ಆಗಿ ಟಿಕೆಟ್ ಹರೀತಿದ್ದ ಶಿವಾಜಿ ಇಂದು 'ಸ್ಟಾರ್' ಆಗಿರುವುದರ ಹಿಂದೆ ಸ್ಟೈಲ್ ಕಿಂಗ್ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. [ಗೆಲುವಿಗಾಗಿ ಸೂಪರ್ ಸ್ಟಾರ್ ರಜನಿ ಮಾಡಿರುವ ಪ್ಲಾನ್ ಇದು...]

ಶ್ರಮದ ಜೊತೆಗೆ ಶಿವಾಜಿಗೆ ಕೈಹಿಡಿದದ್ದು ಲಕ್ಕು. ಹಾಗೆ ರಜನಿಕಾಂತ್ ಗೆ ಅದೃಷ್ಟ ಹೊದ್ದುಕೊಂಡು ಬಂದಿದ್ದು ಇದೇ ಹೋಳಿ ಹಬ್ಬದ ದಿನ. ಅದು ಸರಿಯಾಗಿ 40 ವರ್ಷಗಳ ಹಿಂದೆ.
ಹೌದು, ಅಂದು ಬೆಂಗಳೂರಿನ ಬೀದಿಗಳಲ್ಲಿ ರೈಟ್ ರೈಟ್ ಅಂತ ಸೀಟಿ ಹಾಕುತ್ತಿದ್ದ ಶಿವಾಜಿ ರಾಜ್ ಗಾಯಕ್ವಾಡ್, ಇಂದು ರಜನಿಕಾಂತ್ ಆಗಿ ಅಭಿಮಾನಿಗಳಿಂದ ಸೀಟಿ ಹೊಡೆಸಿಕೊಳ್ತಾರೆ ಅಂದ್ರೆ ಅದಕ್ಕೆ ಕಾರಣ ಹೋಳಿ ಹಬ್ಬ. ಯಾಕಂದ್ರೆ, ಶಿವಾಜಿ ರಾವ್ ಗಾಯಕ್ವಾಡ್ ಗೆ ನಿರ್ದೇಶಕ ಕೆ.ಬಾಲಚಂದರ್ 'ರಜನಿಕಾಂತ್' ಅಂತ ನಾಮಕರಣ ಮಾಡಿದ್ದು ಇದೇ ದಿನ. [ರಜನಿಕಾಂತ್ ಬಗ್ಗೆ ರಾಕ್ ಲೈನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ]

ಸಕಲಕಲಾವಲ್ಲಭ ಕಮಲ್ ಹಾಸನ್ ಅಭಿನಯದ 'ಅಪೂರ್ವ ರಾಗಂಗಳ್' ಚಿತ್ರದ ಸಣ್ಣ ಪಾತ್ರಕ್ಕಾಗಿ ಕೆ.ಬಾಲಚಂದರ್ ತಲಾಶ್ ಮಾಡ್ತಿದ್ದಾಗ ಸೆಲೆಕ್ಟ್ ಆಗಿದ್ದು ಕಂಡಕ್ಟರ್ ಶಿವಾಜಿ ರಾವ್ ಗಾಯಕ್ವಾಡ್. ಸ್ಕ್ರೀನ್ ನೇಮ್ ಕ್ಯಾಚಿ ಆಗಿರ್ಬೇಕು ಅನ್ನುವ ಕಾರಣಕ್ಕೆ ನಿರ್ದೇಶಕ ಕೆ.ಬಾಲಚಂದರ್ ಶಿವಾಜಿಗೆ 'ರಜನಿಕಾಂತ್' ಅಂತ ಮರುನಾಮಕರಣ ಮಾಡಿದ್ರು.
ಅಲ್ಲದೇ ಆಗ 'ಕಾಂತ್' ಸೀರೀಸ್ ಹೆಸರುಗಳು ಟ್ರೆಂಡ್ ಸೆಟ್ಟಿಂಗ್ ಆಗಿದ್ರಿಂದ 'ಚಂದ್ರಕಾಂತ್', 'ಶ್ರೀಕಾಂತ್' ಮತ್ತು 'ರಜನಿಕಾಂತ್' ಅನ್ನುವ ಮೂರು ಹೆಸರುಗಳನ್ನ ಕೊಟ್ಟು ಅದ್ರಲ್ಲಿ ಇಷ್ಟವಾದ ಹೆಸ್ರನ್ನ ಆಯ್ಕೆ ಮಾಡಿಕೊಳ್ಳುವಂತೆ ಶಿವಾಜಿಗೆ ಬಾಲಚಂದರ್ ಹೇಳಿದ್ರಂತೆ. [ಇದೆಲ್ಲಾ ಸ್ಟೈಲ್ ಕಿಂಗ್ 'ರಜನಿ'ಯಿಂದ ಮಾತ್ರ ಸಾಧ್ಯ!]

ಆದ್ರೆ, ''ಗುರು ದೇವೋ ಮಹೇಶ್ವರ'' ಅನ್ನೋದನ್ನ ನಂಬಿದ್ದ ಶಿವಾಜಿ, ಆಯ್ಕೆ ವಿಚಾರವನ್ನ ನಿರ್ದೇಶಕರಿಗೆ ಬಿಟ್ಟರಂತೆ. ಆಗ ಬಾಲಚಂದರ್ ಸೂಚಿಸಿದ್ದು 'ರಜನಿಕಾಂತ್' ಹೆಸರನ್ನ.
ಬಣ್ಣದ ಲೋಕದಲ್ಲಿ ಸದಾ ರಂಜಿಸಬೇಕಂತ ಬೆಟ್ಟದಷ್ಟು ಕನಸುಹೊತ್ತಿದ್ದ ರಜನಿಕಾಂತ್, ಬಣ್ಣದ ಹಬ್ಬದಿಂದ್ಲೇ ಎಲ್ಲರನ್ನ ರಂಜಿಸುವುದಕ್ಕೆ ಶುರುಮಾಡಿದ್ದು ಕಾಕತಾಳೀಯವೇನೋ ಹೌದು. ಆದ್ರೂ, ರಜನಿಗೆ ಹೋಳಿ ಹಬ್ಬ ಅಂದ್ರೆ ಒಂಥರಾ ಖುಷಿ. [ಸೂಪರ್ ಸ್ಟಾರ್ ರಜನಿ ಹುಟ್ಟುಹಬ್ಬಕ್ಕೆ 'ಅಚ್ಚರಿ' ಗಿಫ್ಟ್!]

ಬಣ್ಣ ಬಣ್ಣದ ಓಕುಳಿಯನ್ನ ಎರಚಾಡಿ ಹೋಳಿ ಹಬ್ಬವನ್ನ ಸಡಗರದಿಂದ ರಜನಿ ಆಚರಿಸದಿದ್ದರೂ, ಪ್ರತಿ ಹೋಳಿ ಹಬ್ಬಕ್ಕೂ ತನ್ನ ಕೆರಿಯರ್ ಗೆ ಟ್ವಿಸ್ಟ್ ಕೊಟ್ಟ ನಿರ್ದೇಶಕ ಬಾಲಚಂದರ್ ನ ಮೀಟ್ ಮಾಡಿ ಥ್ಯಾಂಕ್ಸ್ ಹೇಳ್ತಾರೆ. ಆದ್ರೆ, ಈ ವರ್ಷ ಬಾಲಚಂದರ್ ನೆನಪು ಮಾತ್ರ. ಹಳೇ ನೆನಪುಗಳನ್ನ ಮೆಲುಕು ಹಾಕ್ತಾ, ನೆಚ್ಚಿನ ನಿರ್ದೇಶಕರ ಸ್ಮರಣೆ ಮಾಡುತ್ತಾ ರಜನಿಕಾಂತ್ ಇಂದು ಹೋಳಿ ಹಬ್ಬದ ಸಂಭ್ರಮದಲ್ಲಿದ್ದಾರೆ.


Click it and Unblock the Notifications











