ಕೆಜಿಎಫ್ 2, ಕಾಂತಾರ ಮೂಲಕ ಬಾಕ್ಸ್ಆಫೀಸ್ ಕಿಂಗ್ ಆಗಿರುವ ಹೊಂಬಾಳೆ ಫಿಲ್ಮ್ಸ್ನ ಮುಂದಿನ 7 ನಾಯಕರಿವರು
ಭಾರತ ಚಲನಚಿತ್ರರಂಗದಲ್ಲಿ ಸದ್ಯಕ್ಕೆ ಅತಿಹೆಚ್ಚು ಜನಪ್ರಿಯತೆ ಗಳಿಸಿರುವ ಹಾಗೂ ಅತಿಹೆಚ್ಚು ಯಶಸ್ಸು ಸಾಧಿಸಿ ಸಾಲು ಸಾಲು ಬ್ಲಾಕ್ಬಸ್ಟರ್, ಇಂಡಸ್ಟ್ರಿ ಹಿಟ್ ನೀಡುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ ಎಂದರೆ ಎಲ್ಲರಿಗೂ ಥಟ್ ಅಂತ ನೆನಪಾಗುವುದೇ ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್. ಮಂಡ್ಯ ಜಿಲ್ಲೆಯ ಕಿರಗಂದೂರಿನ ವಿಜಯ್ ರಾಜ್ಕುಮಾರ್ ಅವರ ಪಕ್ಕಾ ಅಭಿಮಾನಿಯಾಗಿದ್ದು ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಮೊದಲಿಗೆ ಪುನೀತ್ ರಾಜ್ಕುಮಾರ್ ನಟನೆಯ ನಿನ್ನಿಂದಲೇ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ನಂತರ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರಕ್ಕೂ ಸಹ ಹಣ ಹೂಡಿದ್ದರು ವಿಜಯ್ ಕಿರಗಂದೂರು.
ಹೀಗೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಗೊಂಡ ಈ ಮೊದಲೆರಡು ಚಿತ್ರಗಳು ಚಿತ್ರಗಳು ನಿರೀಕ್ಷೆಯನ್ನು ಮುಟ್ಟಿದಿದ್ದರೂ ನಷ್ಟವನ್ನು ಮಾಡಲಿಲ್ಲ. ಹೀಗೆ ಎರಡು ಸಾಧಾರಣ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಚಿನ್ನದ ಬೆಳೆ ಬೆಳೆದದ್ದು ತಮ್ಮ ನಿರ್ಮಾಣದ ಮೂರನೇ ಚಿತ್ರ ರಾಜಕುಮಾರ ಮೂಲಕ. ಈ ಚಿತ್ರ ಆ ಕಾಲಕ್ಕೆ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಹೊಡೆದುರುಳಿಸಿ 'ಆಲ್ ಟೈಮ್ ಇಂಡಸ್ಟ್ರಿ ಹಿಟ್' ಆಗಿ ಹೊರಹೊಮ್ಮಿತ್ತು.
ಹೀಗೆ ರಾಜಕುಮಾರ ಚಿತ್ರದ ಮೂಲಕ ಬಿಗ್ಗೆಸ್ಟ್ ಹಿಟ್ ರುಚಿ ಕಂಡ ಹೊಂಬಾಳೆ ಫಿಲ್ಮ್ಸ್ ಇಲ್ಲಿಯವರೆಗೂ ತಿರುಗಿ ನೋಡಿಲ್ಲ. ಹೊಂಬಾಳೆ ಫಿಲ್ಮ್ಸ್ ಮುಟ್ಟಿದ್ದೆಲ್ಲಾ ಚಿನ್ನ. ರಾಜಕುಮಾರ ಬಳಿಕ ಬಂದ ಕೆಜಿಎಫ್ ಚಾಪ್ಟರ್ 1 ಕೂಡ ಇಂಡಸ್ಟ್ರಿ ಹಿಟ್, ನಂತರ ಬಂದ ಯುವರತ್ನ ಕೂಡ ದೊಡ್ಡ ಓಪನಿಂಗ್ ಪಡೆದುಕೊಂಡು ಕೊರೊನಾ ಕಾರಣದಿಂದಾಗಿ ಒಂದೇ ವಾರಕ್ಕೆ ಆಟ ನಿಲ್ಲಿಸಿತಾದರೂ ಚಿತ್ರ ಕೊಟ್ಟದ್ದು ಒಳ್ಳೆಯ ಲಾಭವನ್ನೇ! ಇನ್ನು ಯುವರತ್ನ ಸಿನಿಮಾ ಬಳಿಕ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಮೂಡಿಬಂದ ಕೆಜಿಎಫ್ ಚಾಪ್ಟರ್ 2 ಕೂಡ ಇಂಡಸ್ಟ್ರಿ ಹಿಟ್ ಆಗಿ ಈ ವರ್ಷದ ಬಾಕ್ಸ್ ಆಫೀಸ್ ಮಾನ್ಸ್ಟರ್ ಎನಿಸಿಕೊಂಡಿದೆ.
ಸದ್ಯ ಹೊಂಬಾಳೆ ಫಿಲ್ಮ್ಸ್ ತನ್ನ ಏಳನೇ ಚಿತ್ರವಾದ ಕಾಂತಾರ ಮೂಲಕವೂ ಮತ್ತೊಂದು ಸೆಂಚುರಿ ಬಾರಿಸಿದೆ. ಇನ್ನು ಕೇವಲ ಯಶ್ ಹಾಗೂ ಪುನೀತ್ ರಾಜ್ಕುಮಾರ್ ಚಿತ್ರಗಳಿಗೆ ಮಾತ್ರ ಬಂಡವಾಳ ಹೂಡಿದ್ದ ಹೊಂಬಾಳೆ ಫಿಲ್ಮ್ಸ್ ಇದೇ ಮೊದಲ ಬಾರಿಗೆ ಈ ಇಬ್ಬರು ನಟರಿಲ್ಲದ ಚಿತ್ರನನ್ನು ಬಿಡುಗಡೆಗೊಳಿಸಿ ಗೆದ್ದಿದೆ. ಹೀಗೆ ಗೆಲುವಿನ ಟ್ರ್ಯಾಕ್ನಲ್ಲಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಲ್ಲಿ ನಟನಾಗಿ ನಟಿಸುವುದು ಪ್ರತಿ ನಟನ ಕನಸು ಎಂದೇ ಹೇಳಬಹುದು. ಹಾಗಿದ್ದರೆ ಹೊಂಬಾಳೆ ಫಿಲ್ಮ್ಸ್ ಮುಂದಿನ ಚಿತ್ರಗಳಲ್ಲಿ ನಟರಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿರುವ ನಟರು ಯಾರು ಎಂಬುದರ ಕುರಿತಾದ ವಿವರ ಈ ಕೆಳಕಂಡಂತಿದೆ.

ಯಾರು ಆ 7 ನಾಯಕರು?
ಜಗ್ಗೇಶ್: ಚಿತ್ರ- ರಾಘವೇಂದ್ರ ಸ್ಟೋರ್ಸ್, ನಿರ್ದೇಶಕ - ಸಂತೋಷ್ ಆನಂದ್ರಾಮ್
ಪ್ರಭಾಸ್: ಚಿತ್ರ - ಸಲಾರ್ ( ತೆಲುಗು ), ನಿರ್ದೇಶಕ - ಪ್ರಶಾಂತ್ ನೀಲ್
ಪೃಥ್ವಿರಾಜ್ ಸುಕುಮಾರನ್: ಚಿತ್ರ - ಟೈಸನ್ ( ಮಲಯಾಳಂ ), ನಿರ್ದೇಶಕ- ಪೃಥ್ವಿರಾಜ್ ಸುಕುಮಾರನ್
ಶ್ರೀ ಮುರಳಿ: ಚಿತ್ರ: ಭಘೀರ, ನಿರ್ದೇಶಕ - ಡಾ,ಸೂರಿ
ರಕ್ಷಿತ್ ಶೆಟ್ಟಿ - ಚಿತ್ರ ರಿಚರ್ಡ್ ಆಂಟನಿ, ನಿರ್ದೇಶಕ - ರಕ್ಷಿತ್ ಶೆಟ್ಟಿ
ಫಹಾದ್ ಫಾಸಿಲ್ - ಚಿತ್ರ: ಧೂಮಮ್ ( ಮಲಯಾಳಂ ), ನಿರ್ದೇಶಕ - ಪವನ್ ಕುಮಾರ್
ಯುವ ರಾಜ್ಕುಮಾರ್ - ಸಂತೋಷ್ ಆನಂದ್ರಾಮ್ ನಿರ್ದೇಶನ

ಪುನೀತ್ ರಾಜ್ಕುಮಾರ್ ಮತ್ತೆರಡು ಸಿನಿಮಾಗೆ ಹೂಡಿಕೆ ಮಾಡಲು ಸಿದ್ಧವಿತ್ತು ಹೊಂಬಾಳೆ
ಇನ್ನು ಪುನೀತ್ ರಾಜ್ಕುಮಾರ್ ಇದ್ದಿದ್ದರೆ ಈ ಸಮಯಕ್ಕೆ ಪವನ್ ಕುಮಾರ್ ಮತ್ತು ಅಪ್ಪು ಕಾಂಬಿನೇಷನ್ನ ದ್ವಿತ್ವ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗುತ್ತಿತ್ತು ಎನ್ನಬಹುದು. ಈ ಚಿತ್ರಕ್ಕೂ ಸಹ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿತ್ತು. ಅಷ್ಟೇ ಅಲ್ಲದೇ ನಿನ್ನಿಂದಲೇ, ರಾಜಕುಮಾರ, ಯುವರತ್ನ ಬಳಿಕ ಮತ್ತೊಮ್ಮೆ ಸಂತೋಷ್ ಆನಂದ್ರಾಮ್, ಪುನೀತ್ ರಾಜ್ಕುಮಾರ್ ಮತ್ತು ಹೊಂಬಾಳೆ ಫಿಲ್ಮ್ಸ್ ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದವು. ಆದರೆ ಈ ಎರಡೂ ಚಿತ್ರಗಳ ಚಿತ್ರೀಕರಣ ಶುರುವಾಗುವ ಮುನ್ನ ಅಪ್ಪು ದೂರಾಗಿದ್ದಾರೆ.

ತಮಿಳಿಗೂ ಕಾಲಿಡಲಿದೆ ಹೊಂಬಾಳೆ
ಇನ್ನು ಕನ್ನಡದಲ್ಲಿ ಗೆದ್ದಿರುವ ಹೊಂಬಾಳೆ ಫಿಲ್ಮ್ಸ್ ಟಾಲಿವುಡ್ ಪ್ರವೇಶಿಸಿ ಪ್ರಭಾಸ್ಗೆ ಸಲಾರ್ ಚಿತ್ರ ನಿರ್ಮಿಸುತ್ತಿದೆ, ಮಲಯಾಳಂನಲ್ಲಿ ಟೈಸನ್ ಹಾಗೂ ಧೂಮಮ್ ಚಿತ್ರಗಳಿಗೆ ಬಂಡವಾಳ ಹೂಡುತ್ತಿದೆ ಹಾಗೂ ಇದರ ನಡುವೆಯೇ ಸೂರರೈ ಪೊಟ್ರು ನಿರ್ದೇಶಕಿ ಸುಧಾ ಕೊಂಗರು ನಿರ್ದೇಶನದ ತಮಿಳು ಸಿನಿಮಾಗೂ ಬಂಡವಾಳ ಹೂಡುವ ಸುದ್ದಿ ಹೊರಬಿದ್ದಿದೆ. ಇನ್ನು ಈ ಚಿತ್ರದಲ್ಲಿ ಸಿಂಬು ನಾಯಕನಾಗಬಹುದು ಎಂಬ ಊಹೆಯೂ ಇದೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್ ಸೌತ್ ಇಂಡಸ್ಟ್ರಿಯ ಪರಿಪೂರ್ಣ ಬ್ಯಾನರ್ ಆಗಲಿದೆ.


Click it and Unblock the Notifications











