ಇಂದ್ರಜಿತ್ ಕೊಟ್ಟ ದೂರಿನಲ್ಲಿ ದರ್ಶನ್ ಹೆಸರೇ ಇಲ್ಲ: ಮನವಿ ಪತ್ರದಲ್ಲಿ ಏನಿದೆ?
ಮೈಸೂರಿನ ಸಂದೇಶ್ ಹೋಟೆಲ್ನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಮತ್ತು ಸ್ನೇಹಿತರು ಹಲ್ಲೆ ಮಾಡಿದ್ದಾರೆ, ಅವರ ವಿರುದ್ಧ ಕ್ರಮ ಜರುಗಿಸಿ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ. ಹೋಟೆಲ್ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ಮಾತ್ರವಲ್ಲ ಸ್ವಾರ್ಥಕ್ಕಾಗಿ ಮಹಿಳೆ ಅರುಣಾಕುಮಾರಿಯನ್ನು ಬಳಕೆ ಮಾಡಿಕೊಂಡಿದ್ದಾರೆ ದೂರಿದ್ದಾರೆ.
Recommended Video
ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕ್ರಮ ಜರುಗಿಸುವಂತೆ ಮನವಿ ಮಾಡಲಾಗಿದೆ. ಇಂದ್ರಜಿತ್ ಮನವಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ''ಇಂದ್ರಜಿತ್ ಒಂದು ಪತ್ರ ಕೊಟ್ಟಿದ್ದಾರೆ, ಅದನ್ನು ಯಥಾವತ್ತಾಗಿ ಮೈಸೂರು ಪೊಲೀಸ್ ಆಯುಕ್ತರಿಗೆ ಕಳುಹಿಸುತ್ತೇನೆ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ'' ಎಂದಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ, ಮಾಧ್ಯಮಗಳ ಮುಂದೆ ನಟ ದರ್ಶನ್, ರಾಕೇಶ್ ಪಾಪಣ್ಣ, ಹರ್ಷ ಸೇರಿದಂತೆ ಇನ್ನಿತರರ ವಿರುದ್ಧ ಗುಡುಗಿರುವ ಇಂದ್ರಜಿತ್ ಗೃಹಸಚಿವರಿಗೆ ನೀಡಿರುವ ಪತ್ರದಲ್ಲಿ ಯಾರೊಬ್ಬರ ಹೆಸರು ಉಲ್ಲೇಖಿಸಿಲ್ಲ. ಹಾಗಾದ್ರೆ, ಇಂದ್ರಜಿತ್ ಕೊಟ್ಟ ಪತ್ರದಲ್ಲಿ ಏನಿದೆ? ಮುಂದೆ ಓದಿ...

ಇಂದ್ರಜಿತ್ ಲಂಕೇಶ್ ಮನವಿ ಪತ್ರದಲ್ಲಿ ಏನಿದೆ?
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಮಿತಿ ಮೀರಿವೆ. ಮಾದಕ ವಸ್ತುಗಳ ಮಾರಾಟ ಜಾಲ ತನ್ನ ಕಬಂಧ ಬಾಹುವನ್ನು ಜಿಲ್ಲೆಯಾದ್ಯಂತ ವಿಸ್ತರಿಸಿದೆ. ಯುವಕ-ಯುವತಿಯರು ಈ ಮಾದಕ ಜಾಲದ ಸುಳಿಗೆ ಸಿಲುಕಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನೀವು ಗಮನಹರಿಸಿ: ಪತ್ರಿಕಾಗೋಷ್ಠಿ ನಡೆಸಿ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಹಾಗೂ ಅಭಿನಂದನಾರ್ಹ.

ಸೆಲೆಬ್ರಿಟಿಗಳಿಂದ ದೌರ್ಜನ್ಯ ಆಗ್ತಿದೆ
''ಆದರೆ ಪ್ರಭಾವಿಗಳು, ಉದ್ಯಮಿಗಳು: ಸೆಲೆಬ್ರಿಟಿಗಳ ದೌರ್ಜನ್ಯ ಪ್ರಕರಣಗಳ ನಡೆಯುತ್ತಿದ್ದು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳುವಲ್ಲಿ ಜಿಲ್ಲಾ ಪೊಲೀಸರು ವಿಫಲರಾಗಿದ್ದಾರೆ'' ಎಂದು ಇಂದ್ರಜಿತ್ ಬರೆದಿದ್ದಾರೆ. ಆದರೆ ಯಾರೊಬ್ಬರು ಹೆಸರು ಸಹ ನಮೂದಿಸಿಲ್ಲ.

ಹೋಟೆಲ್ ಘಟನೆಗೆ ಬಗ್ಗೆ ಪ್ರಸ್ತಾಪ
ಇತ್ತೀಚಿಗೆ ಸಂದೇಶ್ ನಾಗರಾಜ್ ಅವರ ಹೋಟೆಲ್ನಲ್ಲಿ ದಲಿತ ಸಮುದಾಯ ವೇಟರ್ ಮೇಲೆ ಸ್ಟಾರ್ ನಟರೊಬ್ಬರು ಹಲ್ಲೆ ನಡೆಸಿದ್ದು: ಆತನ ಕಣ್ಣುಗಳಿಗೆ ಹಾನಿಯಾಗಿದೆ. ಈ ವಿಚಾರಚಾಗಿ ಹೋಟೆಲ್ನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಿ: ಅಲ್ಲಿನ ವೇಟರ್ಗಳ ವಿಚಾರಣೆಯನ್ನೂ ತುರ್ತಾಗಿ ನಡೆಸಿ, ತನಿಖೆಗೆ ಆದೇಶಿಸಬೇಕಿದೆ. ಈ ಘಟನೆಯಿಂದಾಗಿ ದಲಿತರಲ್ಲಿ ಅವ್ಯಕ್ತವಾದ ಭಯದ ವಾತಾವರಣ ನಿರ್ಮಾಣವಾಗಿದೆ. ದಲಿತರು, ಬಡವರು, ಜನಸಾಮಾನ್ಯರು, ಶೋಷಿತರ ಜೀವಕ್ಕೆ ಯಾವುದೇ ಸುರಕ್ಷತೆಯಿಲ್ಲದಂತಹ ಪರಿಸ್ಥಿತಿ ಇದೆ.

ಮಹಿಳೆ ಅರುಣಾಕುಮಾರಿ ಘಟನೆ ಬಗ್ಗೆ ಚರ್ಚೆ
ಲೋನ್ ವಿವಾದದಲ್ಲಿ ಮಹಿಳೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡು, ಪೊಲೀಸರ ಮೇಲೆ ಒತ್ತಡ ತಂದು ಪ್ರಭಾವಿಗಳು ಮಾತ್ರ ಪ್ರಕರಣದಿಂದ ನುಣುಚಿಕೊಳ್ಳುತ್ತಿದ್ದಾರೆ.ಇದು ಸಾಮಾನ್ಯ ಮಹಿಳೆಯರಲ್ಲಿ ನ್ಯಾಯದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಿದೆ. ಇದೇ ಸಾಮಾನ್ಯ ವ್ಯಕ್ತಿಯಾಗಿದ್ದರೆ ಸುಮ್ಮನೆ ಬಿಡುತ್ತಿದ್ದರಾ? ಜನಸಾಮಾನ್ಯರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಮತ್ತೊಂದು ನ್ಯಾಯವೇ? ಎಂದು ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.


Click it and Unblock the Notifications











