ದುಬೈಯಲ್ಲಿ ಬಿಡುಗಡೆಗೊಂಡ "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರದ ಟ್ರೇಲರ್
ವಿಭಿನ್ನ ಕಥಾ ಹಂದರವನ್ನಿಟ್ಟುಕೊಂಡು ಮಾಡಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ಮತ್ತು ರಾಧಿಕಾ ಚೇತನ್ ಅಭಿನಯದ "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚಿಗೆ ದುಬೈಯಲ್ಲಿ ನಡೆದಿದೆ.
ದುಬೈಯ ಕರಾಮದಲ್ಲಿರುವ ಇಂಡಿಯನ್ ಹೈಸ್ಕೂಲಿನ ಶೇಕ್ ರಾಶಿದ್ ಆಡಿಟೋರಿಯಂನಲ್ಲಿ ದುಬೈ ಕನ್ನಡಿಗರು ಆಯೋಜಿಸಿದ್ದ ಖ್ಯಾತ ಸ್ಯಾಂಡಲ್ ವುಡ್ ಗಾಯಕ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಲೈವ್ 'ಸಂಗೀತ ಸೌರಭ -2018' ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಯಿತು.

ಈವರೆಗೂ ಕನ್ನಡ ಚಿತ್ರರಂಗದಲ್ಲಿ ಯಾರು ಮಾಡದಂಥ ಕಥೆಯನ್ನಿಟ್ಟುಕೊಂಡು ಮಾಡಿರುವ ಈ ಚಿತ್ರಕ್ಕೆ ನರೇಂದ್ರ ಬಾಬು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್-ಕಟ್ ಹೇಳಿದ್ದಾರೆ. ಈ ಸಿನೆಮಾವನ್ನು ಕಲರ್ಸ್ ಆಫ್ ಆನೇಕಲ್ ಹೆಸರಿನಲ್ಲಿ ಸುದರ್ಶನ್, ರಾಮಮೂರ್ತಿ ಹಾಗು ದುಬೈಯ ಹೆಸರಾಂತ ಉದ್ಯಮಿ, ಗಾಯಕರು ಆಗಿರುವ ಹರೀಶ್ ಶೇರಿಗಾರ್ ಮತ್ತು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್ ನ್ಯಾಷನಲ್ ಬ್ಯಾನರ್ ನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್, Vibez ಕಾಫಿ ಎಸ್ಟೇಟ್ಸ್ ಆಡಳಿತ ನಿರ್ದೇಶಕ ಅಶ್ವಿನ್, ಫಾರ್ಚ್ಯೂನ್ ಪ್ಲಾಜಾ ಹೋಟೆಲ್ ಮಾಲಕ ಪ್ರವೀಣ್ ಶೆಟ್ಟಿ, ಉದ್ಯಮಿ ರವೀಶ್ ಗೌಡ, ಮೊಹಮ್ಮದ್ ಮುಸ್ತಫಾ, ಕನ್ನಡಿಗರು ದುಬೈಯಾ ಸದನ್ ದಾಸ್ ಉಪಸ್ಥಿತರಿದ್ದರು.

ಬಹುತೇಕ ಎರಡೇ ಪಾತ್ರಗಳ ಸುತ್ತ ಸುತ್ತುವ ಕಥೆಯನ್ನಿಟ್ಟುಕೊಂಡು ಪ್ರಮುಖವಾಗಿ ಎರಡು ತಲೆಮಾರಿನವರ ಕುರಿತು ಹೇಳುವುದಕ್ಕೆ ಹೊರಟಿದ್ದಾರೆ. ಹಾಸ್ಯಮಯವಾಗಿ ಶುರುವಾಗುವ ಚಿತ್ರವು, ನಂತರ ಕ್ರಮೇಣ ಗಂಭೀರವಾಗುತ್ತಾ ಹೋಗುತ್ತದೆ. ವಿಶೇಷವೆಂದರೆ, ಈ ಚಿತ್ರಕ್ಕಾಗಿ ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಭುರ್ಜ್ ಖಲೀಫಾದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈವರೆಗೂ ಕನ್ನಡದ ಯಾವುದೇ ಸಿನೆಮಾ ಇಲ್ಲಿ ಚಿತ್ರೀಕರಣವಾಗಿಲ್ಲ. ಹಾಗೆ ಚಿತ್ರೀಕರಣ ಮಾಡಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಪಾತ್ರವಾಗಿದೆ.

ರಂಗಭೂಮಿ ಹಿನ್ನೆಲೆಯ ರಾಮಚಂದ್ರ ಹಡಪದ್ ಅವರು ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ವಿಜಯ ಪ್ರಕಾಶ್, ಅರ್ಮಾನ್ ಮಲ್ಲಿಕ್, ವರ್ಷ, ವಾಣಿ ಸತೀಶ್, ಶ್ವೇತ ಪ್ರಭು ಹಾಡುಗಳಿಗೆ ಧ್ವನಿಯಾಗಿದ್ದಾರೆ. ವಿನಾಯಕರಾಮ್ ಕಲಗಾರು, ನರೇಂದ್ರ ಬಾಬು ಸಾಹಿತ್ಯ ಬರೆದಿದ್ದಾರೆ.
ಹರೀಶ್ ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್ ನ್ಯಾಷನಲ್ ಬ್ಯಾನರ್ನಡಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಸಿನೆಮಾ ಮೂರನೆಯದ್ದಾಗಿದೆ. 'ಮಾರ್ಚ್-22 ' ಮೊದಲಿನ ನಿರ್ಮಿಸಿದ ಸಿನಿಮಾವಾಗಿದ್ದು, ಈ ಸಿನೆಮಾ ಭರ್ಜರಿ ಹಿಟ್ ಕಂಡಿತ್ತು. ಅನಂತರ ನಟಿ ವಿಜಯಲಕ್ಷ್ಮೀ ಸಿಂಗ್ ಮತ್ತು ನಟ ಜೈಜಗದೀಶ್ ಜೊತೆಗೆ ಸೇರಿ ನಿರ್ಮಿಸಿರುವ 'ಯಾನ' ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಸಿನಿಮಾ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











