ಅಭಿಮಾನಿಗಳ ಶಿಳ್ಳೆ, ಕೇಕೆ ನಡುವೆ 'ಅಭಿಮನ್ಯು' ಆಟ
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿನಯದ 'ಅಭಿಮನ್ಯು' ಚಿತ್ರ ಇಂದು (ನ.7) ರಾಜ್ಯಾದಾದ್ಯಂತ ಬಿಡುಗಡೆಯಾಗಿದೆ. ಬೆಂಗಳೂರಿನ ಅನುಪಮಾ ಮುಖ್ಯ ಚಿತ್ರಮಂದಿರ ಸೇರಿದಂತೆ ಸರಿಸುಮಾರು 150 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.
ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಅರ್ಜುನ್ ಸರ್ಜಾ ಅವರೇ ವಹಿಸಿಕೊಂಡಿದ್ದು ಚಿತ್ರೋದ್ಯಮದಲ್ಲಿ ಅತೀವ ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ಅರ್ಜುನ್ ಸರ್ಜಾ ಅವರು ಕರಾಟೆ ಮಾಸ್ಟರ್ ಪಾತ್ರದಲ್ಲಿ ಮಿಂಚಿದ್ದಾರೆ. [ನಾನು ನಿರ್ದೇಶನಕ್ಕಿಳಿದಾಗ ಜನ ನಕ್ಕಿದ್ರು]
ತಮ್ಮ ಮಗುವಿಗೆ ಉತ್ತಮ ಶಿಕ್ಷಣ ಸಿಗಲಿಲ್ಲ ಎಂಬ ಕಾರಣಕ್ಕೆ ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗುತ್ತದೆ. ಫ್ಲ್ಯಾಶ್ ಬ್ಯಾಕ್ ನಲ್ಲಿ ಸಾಗುತ್ತಿರುವ ಕಥೆಯಲ್ಲಿ ಹಲವಾರು ಟ್ವಿಸ್ಟ್ಸ್, ಟರ್ನ್ ಗಳಿದ್ದು ಪ್ರೇಕ್ಷಕರು ಅರ್ಜುನ್ ಸರ್ಜಾ ಅವರ ಅಭಿನಯಕ್ಕೆ ಫಿದಾ ಆಗಿದ್ದಾರೆ.ಚಿತ್ರದ ಮೊದಲರ್ಧ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ದೇಶದ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಆಶಯದಲ್ಲಿ ನಾಯಕನ ಹೋರಾಟ ಇದೆ. ಇದಕ್ಕೆ ನಾನಾ ಅಡ್ಡಿ ಆತಂಕಗಳು ಎದುರಾಗುತ್ತವೆ. ಈ ಚಕ್ರವ್ಯೂಹವನ್ನು ಅಭಿಮನ್ಯು ಹೇಗೆ ಬೇಧಿಸುತ್ತಾನೆ ಎಂಬುದೇ ಚಿತ್ರದ ಕಥೆ.
ಪಾಪ ಪಾಂಡು ಖ್ಯಾತಿಯ ಜಹಾಂಗೀರ್ ಕಾಮಿಡಿ ಚೆನ್ನಾಗಿದ್ದು, ಹಿನ್ನೆಲೆ ಸಂಗೀತ ಸೊಗಸಾಗಿ ಮೂಡಿಬಂದಿದೆ. ವೇಣು ಅವರ ಕ್ಯಾಮೆರಾ ವರ್ಕ್ ಸಹ ಕಣ್ಣಿಗೆ ತಂಪೆರೆಯುವಂತಿದೆ. ಒಟ್ಟಾರೆಯಾಗಿ ಮಧ್ಯಮ ವರ್ಗದ ಪ್ರೇಕ್ಷಕರಿಗೆ ಅತ್ಯುತ್ತಮ ಚಿತ್ರ ಎನ್ನಬಹುದು. ಸಂಪೂರ್ಣ ಚಿತ್ರ ವಿಮರ್ಶೆಗಾಗಿ ನಿರೀಕ್ಷಿಸಿ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications












