ಭಟ್ಟರ ಡ್ರಾಮಾ ಶುರುವಾಗಿದೆ, ಮೊದಲಾರ್ಧ ಹೇಗಿದೆ?
ಯೋಗರಾಜ್ ಭಟ್ಟರ ಹೊಸ ಚಿತ್ರ 'ಡ್ರಾಮಾ' ಹೇಗಿದೆ? ಇಂಥದೊಂದು ಪ್ರಶ್ನೆ ಚಿತ್ರರಸಿಕರ ಹೊಟ್ಟೆಯನ್ನು ಹೊಕ್ಕು ಪಾತರಗಿತ್ತಿಯಂತೆ ಆಟವಾಡಿಸಲು ಪ್ರಾರಂಭಿಸಿದೆ. 'ಪರಮಾತ್ಮ' ಭಟ್ಟರ ಅಭಿಮಾನಿಗಳನ್ನು ನಿರಾಶೆ ಮಾಡಿದ ಮೇಲೆ ಬಂದಿರುವ 'ಡ್ರಾಮಾ' ಚಿತ್ರವಾದರೂ ಆ ನಿರಾಶೆಯನ್ನು ಹೊಡೆದೋಡಿಸುತ್ತಾ ಎಂಬ ಪ್ರಶ್ನೆಗೂ ಸದ್ಯದಲ್ಲಿಯೇ ಉತ್ತರ ದೊರೆಯಲಿದೆ.
ಬಿಡುಗಡೆಯಾಗಿ ಮೊದಲಾರ್ಧ ಮುಗಿಯುತ್ತಿದ್ದಂತೆ ಯೋಗರಾಜ್ ಭಟ್ಟರ ಚಿತ್ರ ಎಂಥ ಮೋಡಿ ಮಾಡಿದೆ ಎಂಬ ಬಗ್ಗೆ ಈಗಾಗಲೆ ರಿಪೋರ್ಟುಗಳು ಬರಲು ಆರಂಭಿಸಿವೆ. ಸಂತಸದ ಸಂಗತಿಯೆಂದರೆ, 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಸಿಕ್ಕಂತಹ ಓಪನಿಂಗ್ 'ಡ್ರಾಮಾ' ಚಿತ್ರಕ್ಕೂ ಸಿಕ್ಕಿದ್ದು, ಭಟ್ಟರ ಮೇಲೆ ಅಪಾರ ಅಭಿಮಾನಿಗಳು ಇಟ್ಟಂತಹ ನಿರೀಕ್ಷೆಗೆ ಸಾಕ್ಷಿ.
ಮೊದಲರ್ಧದಲ್ಲಂತೂ ಆ ನಿರೀಕ್ಷೆಯನ್ನು ಭಟ್ಟರು ಹುಸಿ ಮಾಡಿಲ್ಲ. ಯೋಗರಾಜ ಭಟ್ಟರು ತಾವೇ ಹೇಳಿದಂತೆ, ಇದೊಂದು ವಿಚಿತ್ರ ವಿಲಕ್ಷಣದ ಸಿನೆಮಾ. ಭೂಮಿಯ ಮೇಲಿರುವ ನಾವೆಲ್ಲ ಡ್ರಾಮಾದಲ್ಲಿ ಮಾಡುವ ಪಾರ್ಟುಗಳಂತೆ. ಆಡಿಸುವವನು ಒಬ್ಬನಿರುತ್ತಾನೆ. ಅವ ಆಡಿಸಿದಂತೆ ಆಡುತ್ತಾ ನಾವು ಹೋಗುತ್ತೇವೆ. ಇದುವೇ ಜೀವನ.
'ಡ್ರಾಮಾ' ಚಿತ್ರವನ್ನು ಕೂಡ ಭಟ್ಟರು ಫಿಲಾಸಫಿಕಲ್ ಆಗಿ ತೆರೆದಿಟ್ಟಿದ್ದಾರೆ. ಇಲ್ಲಿ ಸಸ್ಪೆನ್ಸ್ ಇದೆ, ರೋಮ್ಯಾನ್ಸ್ ಇದೆ, ಎಂದಿನಂತೆ ತಮಾಷೆ ಇದೆ, ಕಚಗುಳಿ ಇಡುವಂತಹ ಸಂಭಾಷಣೆಗಳಿವೆ, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ಪಾತ್ರಗಳಿಂದ ಅದ್ಭುತ ನಟನೆಯಿದೆ. ಭವಿಷ್ಯ ನುಡಿಯುವ ಸೂತ್ರಧಾರನಾಗಿ ಅಂಬಿ ಜೀವಮಾನದ ಅತ್ಯುತ್ತಮ ಪಾತ್ರದಲ್ಲಿ ನಟಿಸಿದ್ದಾರಾ? ಯುವ ನಟರಾದ ಯಶ್, ನೀನಾಸಂ ಸತೀಶ್, ರಾಧಿಕಾ ಪಂಡಿತ್, ಸಿಂಧು ಲೋಕನಾಥ್ ಹೇಗೆ ನಟಿಸಿದ್ದಾರೆ?
ಹೋಗಲಿ ಚಿತ್ರದಲ್ಲಿ ಕಥೆಯಾದರೂ ಇದೆಯಾ? ಹಿಂದಿನ ಚಿತ್ರಗಳಂತೆ ಇಲ್ಲೂ ಸಖತ್ ಸಂಭಾಷಣೆಗಳಿದ್ದಾವಾ? ಮೊದಲರ್ಧವೇನೋ ಸಖತ್ತಾಗಿದೆ, ಮುಂದಿನ ಅರ್ಧ ಆ ಡ್ರಾಮಾವನ್ನು ಉಳಿಸಿಕೊಂಡು ಹೋಗುತ್ತದಾ? ಸದ್ಯಕ್ಕೆ ಏನನ್ನೂ ಹೇಳುವ ಹಾಗಿಲ್ಲ. ಎಲ್ಲವನ್ನೂ ತಿಳಿಯಲು ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾಗುವ ಚಿತ್ರವಿಮರ್ಶೆಗೆ ಕಾಯಲೇಬೇಕು. ಇನ್ನು ಕೆಲವೇ ಗಂಟೆಗಳು ಮಾತ್ರ. ಆಮೇಲೆ ನೀವುಂಟು, ಭಟ್ಟರುಂಟು, ಅವರ ಡ್ರಾಮಾವುಂಟು.


Click it and Unblock the Notifications











