ಆಗಸ್ಟ್ 6ಕ್ಕೆ ಎಚ್ಚೆಸ್ವಿ ಅವರ 'ಹಸಿರು ರಿಬ್ಬನ್' ಚಿತ್ರಕ್ಕೆ ಚಾಲನೆ
ಕನ್ನಡದ ಖ್ಯಾತ ಲೇಖಕ ಎಚ್.ಎಸ್ ವೆಂಕಟೇಶಮೂರ್ತಿ ಅವರು ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರಜಗತ್ತು ಹಾಗೂ ಸಾಹಿತ್ಯ ಲೋಕದಲ್ಲಿ 'ಎಚ್ಚೆಸ್ವಿ' ಎಂದೇ ಖ್ಯಾತರಾಗಿರುವ ಇವರು ಇಷ್ಟುದಿನ ಇತರೆ ಸಿನಿಮಾಗಳಿಗೆ ಕಥೆ-ಸಾಹಿತ್ಯ-ಚಿತ್ರಕಥೆ-ಸಂಭಾಷಣೆ ಒದಗಿಸುತ್ತಿದ್ದರು. ಈಗ ತಮ್ಮದೇ ನಿರ್ದೇಶನದಲ್ಲಿ ಮೊದಲ ಸಿನಿಮಾ ಆರಂಭಿಸಿದ್ದಾರೆ.
ಹೌದು, 'ಹಸಿರು ರಿಬ್ಬನ್' ಎಂಬ ಹೆಸರಿನಲ್ಲಿ ಚಿತ್ರವೊಂದನ್ನ ನಿರ್ದೇಶನ ಮಾಡುತ್ತಿದ್ದು, ಆಗಸ್ಟ್ 6 ರಂದು ಈ ಚಿತ್ರದ ಮುಹೂರ್ತ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಚಾಮರಾಜ ಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಸಂಜೆ 6 ಗಂಟೆಗೆ ಎಚ್ಚೆಸ್ವಿ ಅವರ 'ಹಸಿರು ರಿಬ್ಬನ್' ಸಿನಿಮಾ ಸೆಟ್ಟೇರಲಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ಖ್ಯಾತ ನಿರ್ದೇಶಕ ಟಿ.ಎಸ್ ನಾಗಾಭರಣ, ನಾದಬ್ರಹ್ಮ ಹಂಸಲೇಖ, ಹಿರಿಯ ನಟ ಶ್ರೀನಾಥ್, ದತ್ತಣ್ಣ, ಬಿ.ಜಯಶ್ರೀ, ಪತ್ರಕರ್ತ ಜೋಗಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಅಂದ್ಹಾಗೆ, ಎಚ್ಚೆಸ್ವಿ ಅವರ 'ಅನಾತ್ಮಕಥನ' ಎಂಬ ಪುಸ್ತಕದ ಒಂದು ಭಾಗವನ್ನ ಆಧರಿಸಿ 'ಹಸಿರು ರಿಬ್ಬನ್' ಸಿನಿಮಾ ಮಾಡಲಾಗುತ್ತಿದೆ. ಅಮಾಯಕರನ್ನ ಸ್ವಾರ್ಥಿಗಳು ಹೇಗೆ ಮೋಸ ಮಾಡುತ್ತಾರ ಎಂಬುದನ್ನ ಈ ಚಿತ್ರದ ಮೂಲಕ ಹೇಳಲಿದ್ದಾರೆ.
ಈ ಚಿತ್ರಕ್ಕೆ ಕಥೆ, ಹಾಡು, ನಿರ್ದೇಶನ ಎಚ್ಚೆಸ್ವಿ ಅವರೆ ನಿರ್ವಹಿಸುತ್ತಿದ್ದು, ಉಪಾಸನಾ ಮೋಹನ್ ಸಂಗೀತ ನೀಡಲಿದ್ದಾರೆ. ಪಿ.ವಿ.ಆರ್ ಸ್ವಾಮಿ ಅವರ ಛಾಯಾಗ್ರಹಣ, ಶ್ರೀಧರ್ ಹೆಗಡೆ ಅವರ ಸಂಕಲನ ಚಿತ್ರಕ್ಕಿದೆ. ಉಳಿದಂತೆ ನಿಖಿಲ್ ಮಂಜು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಗಿರಿಜಾ ಲೋಕೇಶ್, ಬೇಬಿ ಋತ್ವಿ ಸೇರಿದಂತೆ ಇತರರು ಅಭಿನಯಿಸಲಿದ್ದಾರೆ. ಈ ಚಿತ್ರವನ್ನ ನಿಸರ್ಗ ಕ್ರಿಯೇಷನ್ಸ್ ಅಡಿಯಲ್ಲಿ ಆರ್.ಎಸ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

ಈ ಹಿಂದೆ ಎಚ್.ಎಸ್ ವೆಂಕಟೇಶಮೂರ್ತಿ ಅವರು 'ಚಿನ್ನಾರಿ ಮುತ್ತ', 'ಕೊಟ್ರೇಶಿ ಕನಸು', ಮತ್ತು ಇತ್ತೀಚಿಗೆ ನಿಖಿಲ್ ಮಂಜು ನಿರ್ದೇಶನದ 'ಒಂದೂರಲ್ಲಿ' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ. ಅಲ್ಲದೇ ಪುನೀತ್ ರಾಜ್ ಕುಮಾರ್ ಅಭಿನಯದ 'ಮೈತ್ರಿ' ಚಿತ್ರಕ್ಕೆ ಸಾಹಿತ್ಯ, 'ಮುಕ್ತ' ಮತ್ತು 'ಮಹಾ ಪರ್ವ' ಕಿರುತೆರೆ ಧಾರಾವಾಹಿಗಳಿಗೆ ಟೈಟಲ್ ಹಾಡು ಬರೆದಿದ್ದಾರೆ.


Click it and Unblock the Notifications











